ಪೂಜಾರ, ರಹಾನೆ ಭವಿಷ್ಯದ ಕಥೆಯೇನು?: ಪತ್ರಕರ್ತರ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ವಿರಾಟ್ ಕೊಹ್ಲಿ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಅಂತ್ಯವಾಗಿದ್ದು ದಕ್ಷಿಣ ಆಫ್ರಿಕಾ ಭಾರತ ತಂಡವನ್ನು 2-1 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಗುರಿ ಹೊತ್ತು ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾಗೆ ನಿರಾಸೆಯಾಗಿದೆ. ಈಗ ಈ ಸೋಲಿನ ಬಗ್ಗೆ ಸಾಕಷ್ಟು ಚರ್ಚೆಗಳು ಹಾಗೂ ವಿಮರ್ಶೆಗಳು ನಡೆಯುತ್ತಿದೆ. ಅದರಲ್ಲೂ ಟೀಮ್ ಇಂಡಿಯಾದ ಇಬ್ಬರು ಅನುಭವಿ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪುಜಾರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು ಈ ಇಬ್ಬರು ಆಟಗಾರರಿಗೆ ಈ ಸರಣಿ ಅಂತಿಮ ಅವಕಾಶವಾಗಬಹುದು ಎಂಬ ಚರ್ಚೆಗಳು ಕೂಡ ನಡೆಯುತ್ತಿದೆ.
ಈ ವಿಚಾರವಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಔಆರತೀಯ ತಂಡದ ಈ ಇಬ್ಬರು ಅನುಭವಿ ಆಟಗಾರರ ಕ್ರಿಕೆಟ್ ಭವಿಷ್ಯದ ಬಗ್ಗೆ ನಾಯಕ ವಿರಾಟ್ ಕೊಹ್ಲಿಗೆ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಕೊಹ್ಲಿ ಖಡಕ್ಕಾಗಿಯೇ ಉತ್ತರವನ್ನು ನೀಡಿದ್ದಾರೆ.

ಬ್ಯಾಟರ್ಗಳಿಂದ ಉತ್ತಮ ಬೆಂಬಲ ದೊರೆಯಲಿಲ್ಲ
ಇನ್ನು ಪಂದ್ಯದ ಮುಕ್ತಾಯದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಸೆಂಚೂರಿಯನ್ನಲ್ಲಿ ಮೊದಲ ಪಂದ್ಯವನ್ನು ಗೆದ್ದ ಬಳಿಕ ನಡೆದ ಪಂದ್ಯಗಳಲ್ಲಿ ಬ್ಯಾಟರ್ಗಳು ಮುಂದೆ ಬಂದು ಜವಾಬ್ಧಾರಿ ವಹಿಸಿಕೊಳ್ಳುವಲ್ಲಿ ವಿಫಲವಾದರು ಎಂದಿದ್ದಾರೆ. ಈ ಮೂಲಕ ತಂಡದ ಬ್ಯಾಟರ್ಗಳ ವೈಫಲ್ಯವನ್ನು ನಾಯಕ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೊಹ್ಲಿಗೆ ರಹಾನೆ ಹಾಗೂ ಪೂಜಾರ ಕ್ರಿಕೆಟ್ ಭವಿಷ್ಯದ ಬಗ್ಗೆಯೂ ಪ್ರಶ್ನೆ ಎದುರಾಯಿತು.

ಖಡಕ್ಕಾಗಿ ಉತ್ತರಿಸಿದ ಕೊಹ್ಲಿ
"ನಾವು ಬ್ಯಾಟಿಂಗ್ನಲ್ಲಿ ಜವಾಬ್ಧಾರಿ ತೆಗೆದುಕೊಂಡು ಮುಂದೆ ಬರಬೇಕಾಗಿತ್ತು. ಈ ವಿಚಾರವಾಗಿ ನಾನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಆದರೆ ನಾನು ಈಗ ಇಲ್ಲಿ ಭವಿಷ್ಯದಲ್ಲಿ ಏನಾಗಲಿದೆ ಎಂಬ ಬಗ್ಗೆ ಮಾತನಾಡಲು ಕುಳಿತಿಲ್ಲ. ಇಲ್ಲಿ ಕುಳಿತು ಆ ಬಗ್ಗೆ ಚರ್ಚೆಯನ್ನು ನಡೆಸುವುದು ನನ್ನ ಕೆಲಸವಲ್ಲ. ಈ ವಿಚಾರವಾಗಿ ನೀವು ಆಯ್ಕೆಗಾರರ ಬಳಿ ಮಾತನಾಡಿ ಅವರ ತಲೆಯಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಅದು ನನ್ನ ಕೆಲಸವಲ್ಲ" ಎಂದು ವಿರಾಟ್ ಕೊಹ್ಲಿ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.

ಪೂಜಾರ, ರಹಾನೆ ಬೆಂಬಲಕ್ಕೆ ನಾನು ನಿಲ್ಲುತ್ತೇನೆ
ಇನ್ನು ವಿರಾಟ್ ಕೊಹ್ಲಿ ಮುಂದುವರಿದು ಮಾತನಾಡುತ್ತಾ ಟೀಮ್ ಇಂಡಿಯಾದ ಈ ಇಬ್ಬರು ಅನುಭವಿ ಆಟಗಾರರಿಗೂ ತಾನು ಬೆಂಬಲವನ್ನು ನೀಡುತ್ತೇನೆ ಎಂಬುದನ್ನು ಕೂಡ ನೇರವಾಗಿ ಹೇಳಿದ್ದಾರೆ. "ನಾನು ಇದನ್ನು ಈ ಹಿಂದೆಯೂ ಹೇಳಿದ್ದೆ ಈಗಲೂ ಹೇಳುತ್ತಿದ್ದೇನೆ. ನಾವು ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯಾ ರಹಾಣೆ ಅವರಂತಾ ಆಟಗಾರರ ಬೆಂಬಲಕ್ಕೆ ನಿಲ್ಲುತ್ತೇವೆ. ಅವರು ಆ ರೀತಿಯ ಆಟಗಾರರು. ಕಳೆದ ಹಲವು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಕಠಿಣ ಸಂದರ್ಭದಲ್ಲಿ ಅವರು ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ನೀವು ಇದನ್ನು ಎರಡನೇ ಟೆಸ್ಟ್ನಲ್ಲಿಯೂ ನೋಡಿದ್ದೀರಿ. ಅವರು ಅಂದು ಅಮೂಲ್ಯವಾದ ಜೊತೆಯಾಟವನ್ನು ತಂಡಕ್ಕೆ ನೀಡಿದ್ದರು. ಇದರಿಮದಾಗಿ ಭಾರತ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಗಿತ್ತು" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಉಪ ನಾಯಕನ ಸ್ಥಾನ ಕಳೆದುಕೊಂಡಿರುವ ರಹಾನೆ
ಇನ್ನು ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿರುವ ಅಜಿಂಕ್ಯಾ ರಹಾನೆ ದಕ್ಷಿಣ ಆಫ್ರಿಕಾ ವಿರುದ್ಧಧ ಪ್ರವಾಸಕ್ಕೆ ಆಯ್ಕೆಯಾಗುವ ಬಗ್ಗೆಯೇ ಅನುಮಾನವಿತ್ತು. ಈ ಸರಣಿಗೂ ಮುನ್ನ ಅಜಿಂಕ್ಯಾ ರಹಾನೆ ಉಪನಾಯಕನ ಸ್ಥಾನದಿಂದಲೂ ಕೆಳಗಿಳಿದಿದ್ದರು. ಈಗ ದಕ್ಷಿಣ ಆಪ್ರಿಕಾ ಪ್ರವಾಸದಲ್ಲಿಯೂ ನೀರಸ ಪ್ರದರ್ಶನ ನೀಡಿರುವ ಕಾರಣ ಅಜಿಂಕ್ಯಾ ರಹಾನೆ ಮುಂದಿನ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ತೀರಾ ಕಡಿಮೆಯಿದೆ ಎನ್ನಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications