ಡೆಹ್ರಾಡೂನ್, ಡಿಸೆಂಬರ್ 30: ವರ್ಷದ ಕೊನೆಯಲ್ಲಿ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜತೆ ಪಾರ್ಟಿ ಮಾಡಲು ಉತ್ತರಾಖಂಡ್ ರಾಜ್ಯಕ್ಕೆ ಬಂದ ಕೊಹ್ಲಿ ಅವರು ಮಾಧ್ಯಮಗಳಿಂದ ಬಂದ ನಿಶ್ಚಿತಾರ್ಥದ ಸುದ್ದಿ ಕೇಳಿ ಗರಂ ಆಗಿದ್ದಾರೆ.
ನಾವಿಬ್ಬರೂ ನಿಶ್ಚಿತಾರ್ಥ ಆಗುತ್ತಿಲ್ಲ, ನಿಶ್ಚಿತಾರ್ಥ ಆದಾಗ ವಿಷಯ ಮುಚ್ಚಿಡುವುದಿಲ್ಲ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಸ್ಥಳೀಯ ಪತ್ರಿಕೆಗಳು ಹಾಗೂ ಕೆಲ ಟಿವಿ ಮಾಧ್ಯಮಗಳಿಗೆ ಆತುರ ಜಾಸ್ತಿ, ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಿ, ಗೊಂದಲ ಮೂಡಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಲು ಟ್ವೀಟ್ ಮಾಡಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ. ನಟಿ ಅನುಷ್ಕಾ ಅವರ ಮಾಧ್ಯಮ ವಕ್ತಾರರು ಕೂಡಾ ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ.

ಡೆಹ್ರಾಡೂನ್ ನಲ್ಲಿ ವಿರಾಮದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮ ಇಬ್ಬರ -ನಡುವಿನ ಗೆಳೆತನ, ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ ಸಿಕ್ಕಿದೆ. ಆಪ್ತೇಷ್ಟರ ಸಮ್ಮುಖದಲ್ಲಿ ಗೌಪ್ಯವಾಗಿ ಸಮಾರಂಭ ಮುಕ್ತಾಯವಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ತಾರಾ ಜೋಡಿ ಇಲ್ಲಿಂದ ಅನುಷ್ಕಾ ಅವರ ಪೋಷಕರು ಇರುವ ತೆಹ್ರಿಗೆ ತೆರಳಲಿದ್ದಾರೆ. ದೆಹಲಿಯಿಂದ ವಿರಾಟ್ ಕೊಹ್ಲಿ ಅವರ ತಾಯಿ ಕೂಡಾ ತೆಹ್ರಿಗೆ ಆಗಮಿಸಲಿದ್ದಾರೆ. ಎಲ್ಲರೂ ಸೇರಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮುಳುಗಲಿದ್ದಾರೆ. ಜನವರಿ 1 ರಂದು ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗಿತ್ತು.
ಸ್ಥಳೀಯ ಪತ್ರಿಕೆಗಳ ವರದಿಯಂತೆ ಕೊಹ್ಲಿ ಹಾಗೂ ಅನುಷ್ಕಾ ಇಬ್ಬರು ಉತ್ತರಾಖಂಡ್ ನ ನರೇಂದ್ರ ನಗರದ ಆನಂದ್ ಹೋಟೆಲ್ ನಲ್ಲಿ ತಂಗಿದ್ದರು. ಅಮಿತಾಬ್ ಬಚ್ಚನ್ ಕುಟುಂಬ ಹಾಗೂ ಅನಿಲ್ ಅಂಬಾನಿ ಹಾಗೂ ಟೀನಾ ದಂಪತಿಗಳನ್ನು ಸತ್ಕರಿಸುವ ಹೊಣೆ ಹೊತ್ತಿದ್ದಾರೆ ಎಂದು ಬರೆಯಲಾಗಿತ್ತು. ಆದರೆ, ನಿಶ್ಚಿತಾರ್ಥದ ಸುದ್ದಿಯನ್ನು ಖುದ್ದು ಕೊಹ್ಲಿ ಅವರೇ ಅಲ್ಲಗೆಳೆದು ಗೊಂದಲ ನಿವಾರಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)