ಸೆಪ್ಟೆಂಬರ್ 9, ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಘಟನೆಗಳು ನಡೆದಿದ್ದು ಒಂದೆಡೆ ಮುಂಬರುವ ಟಿ 20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ಮೆಂಟರ್ ಆಗಿ ಆಯ್ಕೆಯಾಗಿದ್ದ ಎಂ ಎಸ್ ಧೋನಿ ವಿರುದ್ಧ ದೂರು ದಾಖಲಾಗಿದೆ. ಮತ್ತೊಂದೆಡೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾದ ಮತ್ತೊಬ್ಬ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಹೀಗೆ ಸೆಪ್ಟೆಂಬರ್ 9 ರ ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದ ಘಟನೆಗಳ ಕಿರು ನೋಟ ಇಲ್ಲಿದೆ ನೋಡಿ..
* ಬಿಸಿಸಿಐನ ಅಧ್ಯಕ್ಷರಾದ ಸೌರವ್ ಗಂಗೂಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲು ಕಾರಣ ಟೀಮ್ ಇಂಡಿಯಾದ ಬೆಂಬಲ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು. ಹೌದು, ಟೀಮ್ ಇಂಡಿಯಾದ ಬೆಂಬಲ ಸಿಬ್ಬಂದಿಯಾಗಿರುವ ಫಿಸಿಯೋ ಯೋಗೀಶ್ ಪಾರ್ಮರ್ ಅವರಿಗೆ ಕೊರೊನಾ ಸೊಂಕಿನ ಫಲಿತಾಂಶ ಪಾಸಿಟಿವ್ ಬಂದಿದೆ. ಈ ಕಾರಣದಿಂದಾಗಿಯೇ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎಂದು ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ.
* ಭಾರತ ಮತ್ತು ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಮ್ ಇಂಡಿಯಾದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ತಂಡದಲ್ಲಿ ಇರಲೇಬೇಕು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಸರಣಿ ಇನ್ನೂ ಸಂಪೂರ್ಣವಾಗಿ ಟೀಮ್ ಇಂಡಿಯಾದ ಕೈವಶವಾಗಿಲ್ಲ ಬದಲಾಗಿ 2-1 ಅಂತರದಿಂದ ಟೀಮ್ ಇಂಡಿಯಾ ಮುನ್ನಡೆಯನ್ನು ಕಾಯ್ದುಕೊಂಡಿದೆ ಅಷ್ಟೇ. ಒಂದುವೇಳೆ ಟೀಮ್ ಇಂಡಿಯಾ ಸರಣಿಯಲ್ಲಿ 2-0 ಮುನ್ನಡೆಯನ್ನು ಕಾಯ್ದುಕೊಂಡಿದ್ದರೆ ಜಸ್ಪ್ರೀತ್ ಬೂಮ್ರಾರನ್ನು ಅಂತಿಮ ಟೆಸ್ಟ್ ಪಂದ್ಯದಿಂದ ಕೈಬಿಡಬಹುದಾಗಿತ್ತು ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
4 ಟೆಸ್ಟ್ಗಳಲ್ಲಿ ಭಾರತದ ಈ 3 ಆಟಗಾರರನ್ನು ಕಟ್ಟಿಹಾಕಲು ನಮ್ಮಿಂದ ಆಗಲಿಲ್ಲ: ಮಾರ್ಕ್ ವುಡ್
* ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿರುವ 15 ಆಟಗಾರರ ಇಂಗ್ಲೆಂಡ್ ತಂಡ ಹೀಗಿದೆ: ಇಯಾನ್ ಮಾರ್ಗನ್ (ನಾಯಕ), ಮೊಯೀನ್ ಅಲಿ, ಜಾನಿ ಬೈರ್ಸ್ಟೊ, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್ಸ್ಟೋನ್, ಡಾವಿಡ್ ಮಲನ್, ಟೈಮಲ್ ಮಿಲ್ಸ್, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್
ಪ್ರವಾಸ ಮೀಸಲು: ಟಾಮ್ ಕರನ್, ಲಿಯಾಮ್ ಡಾಸನ್, ಜೇಮ್ಸ್ ವಿನ್ಸ್
* ಟೀಮ್ ಇಂಡಿಯಾದಲ್ಲಿ ಹೆಚ್ಚಿನ ಆಲ್ ರೌಂಡರ್ ಆಟಗಾರರಿಗೆ ಅವಕಾಶವನ್ನು ನೀಡಬೇಕೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಕಪಿಲ್ ದೇವ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೊತೆ ಹೋಲಿಕೆ ಮಾಡಿದ್ದಾರೆ. ತಂಡದಲ್ಲಿ ಇಬ್ಬರೂ ಆಲ್ ರೌಂಡರ್ ಆಟಗಾರರು ಗಾಯದ ಸಮಸ್ಯೆಗೆ ಒಳಗಾದಾಗ ಈ ಹಿಂದೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುತ್ತಿದ್ದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಕೆಲವೊಂದಿಷ್ಟು ಓವರ್ ಬೌಲಿಂಗ್ ಮಾಡುವುದರ ಮೂಲಕ ತಂಡದಲ್ಲಿ ಸಮತೋಲನವನ್ನು ತರುತ್ತಿದ್ದರು, ಆದರೆ ಈಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ತೆಂಡೂಲ್ಕರ್ ಹಾಗೂ ಗಂಗೂಲಿ ರೀತಿ ಬೌಲಿಂಗ್ ಬರುವುದಿಲ್ಲ ಹೀಗಾಗಿ ಹೆಚ್ಚಿನ ಆಲ್ ರೌಂಡರ್ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲೇಬೇಕಾದ ಅಗತ್ಯತೆ ಇದೆ ಎಂದು ಕಪಿಲ್ ದೇವ್ ಸಲಹೆ ನೀಡಿದ್ದಾರೆ.
* ವರ್ಷದ ಕೊನೆಯಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋಗಲಿದೆ. ಈ ವೇಳೆ ಭಾರತೀಯ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20ಐ ಸರಣಿಗಳನ್ನು ಆಡಲಿದೆ. ಕ್ರಿಕೆಟ್ ಸೌತ್ ಆಫ್ರಿಕಾ ಈ ಸಂಗತಿಯನ್ನು ಗುರುವಾರ (ಸೆಪ್ಟೆಂಬರ್ 9) ತಿಳಿಸಿದೆ.
* ಟಿ20 ವಿಶ್ವಕಪ್ಗಾಗಿ ಬುಧವಾರ (ಸೆಪ್ಟೆಂಬರ್ 8) ಬಿಸಿಸಿಐ ಪ್ರಕಟಿಸಿರುವ ಭಾರತೀಯ ತಂಡದಲ್ಲಿ ಅನುಭವಿ ಬ್ಯಾಟ್ಸ್ಮನ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಳೆದ ಎರಡೂ ಸೀಸನ್ಗಳಲ್ಲೂ ಅಧಿಕ ರನ್ ಗಳಿಸಿದ ಬ್ಯಾಟ್ಸ್ಮನ್ಗಳಲ್ಲಿ ಅಗ್ರ ಸ್ಥಾನದಲ್ಲಿದ್ದ ಶಿಖರ್ ಧವನ್ ಮತ್ತು ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಇರಲಿಲ್ಲ. ಇದು ಅನೇಕರಿಗೆ ಅಚ್ಚರಿಯುಂಟು ಮಾಡಿದೆ. ಮಾಜಿ ಆಟಗಾರ ಆಕಾಶ್ ಚೋಪ್ರಾ ಕೂಡ ಇದನ್ನೇ ಪ್ರಶ್ನಿಸಿದ್ದಾರೆ. ಮುಖ್ಯವಾಗಿ ಶಿಖರ್ ಧವನ್, ಯುಜುವೇಂದ್ರ ಚಾಹಲ್ ಮತ್ತು ದೀಪಕ್ ಚಾಹರ್ಗೆ ಅವಕಾಶ ನೀಡಬೇಕಿತ್ತು ಎಂದು ಚೋಪ್ರಾ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಚಾಹಲ್ ಟಿ20 ಕ್ರಿಕೆಟ್ ವಿಚಾರದಲ್ಲಿ ವಿಶ್ವದಲ್ಲೇ ಶ್ರೇಷ್ಠ ಲೆಗ್ ಸ್ಪಿನ್ನರ್ ಎಂದು ಚೋಪ್ರಾ ಹೇಳಿದ್ದಾರೆ. ಚಾಹಲ್ ಕೈ ಬಿಟ್ಟಿದ್ದರಿಂದ ತಂಡಕ್ಕೆ ತೊಂದರೆಯಾಗುತ್ತದೆ ಎಂದು ಚೋಪ್ರಾ ಎಚ್ಚರಿಸಿದ್ದಾರೆ.