
ನವದೆಹಲಿ, ಮೇ 1: ಭಾರತೀಯ ಕ್ರೀಡಾಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ಮತ್ತು ಅಘಾತದ ಸಂಗತಿಯಿದು. ಕಳೆದ ತಿಂಗಳಷ್ಟೇ ಮುಕ್ತಾಯಗೊಂಡ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತ ಹಾಕಿ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲವೆಂದು ಪುರುಷರ ಮತ್ತು ವನಿತಾ ಹಾಕಿ ತಂಡದ ಕೋಚ್ಗಳನ್ನೇ ಅದಲು ಬದಲು ಮಾಡಲು ಹಾಕಿ ಇಂಡಿಯಾ ನಿರ್ಧರಿಸಿದೆ.
ಹಾಕಿ ಇಂಡಿಯಾ ನಿರ್ಧರಿಸಿರುವಂತೆ ವನಿತಾ ಹಾಕಿ ತಂಡದ ಕೋಚ್ ಹರೇಂದ್ರ ಸಿಂಗ್ ಇನ್ನು ಮುಂದೆ ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಹಾಗೆಯೇ, ಪುರುಷರ ಹಾಕಿ ತಂಡದ ಉಸ್ತುವಾರಿ ವಹಿಸಿದ್ದ ಸ್ಜೋರ್ಡ್ ಮರಿಜ್ನೆ ಅವರನ್ನು ಮತ್ತೆ ವನಿತಾ ಹಾಕಿ ಶಿಬಿರದತ್ತ ಕಳುಹಿಸಲಿದೆ.
ಕುತೂಹಲಕಾರಿ ಇನ್ನೊಂದು ಸಂಗತಿಯೆಂದರೆ, ಪುರುಷರ ಹಾಕಿ ತಂಡದ ನಾಯಕತ್ವವೂ ಬದಲಾಗಿದೆ. ತಂಡದ ನಾಯಕರಾಗಿದ್ದ ಮನ್ಪ್ರೀತ್ ಸಿಂಗ್ ಅವರನ್ನು ಕೆಳಗಿಳಿಸಿ, ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ.
ಹಾಕಿ ಇಂಡಿಯಾದ ಈ ನಿರ್ಧಾಕ್ಕೆ ಕಾರಣ ಕಳೆದ ತಿಂಗಳು ಆಸ್ಟ್ರೇಲಿಯಾದ ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತ ಪುರುಷರ ಹಾಕಿ ತಂಡದ ನೀರಸ ಪ್ರದರ್ಶನ.
2018ರ ಗೋಲ್ಡ್ ಕೋಸ್ಟ್ ಗೇಮ್ಸ್ ನಲ್ಲಿ ಮನ್ಪ್ರೀತ್ ಸಿಂಗ್ ನಾಯಕತ್ವದ ಪುರುಷರ ಹಾಕಿ ತಂಡ ಇಂಗ್ಲೆಂಡ್ ವಿರುದ್ಧ 2-1 ಅಂತರದಿಂದ ಸೋತು ಪದಕವಿಲ್ಲದೆ ಬರಿಗೈಲಿ ಹಿಂದಿರುಗಿತ್ತು. ಭಾರತದ ರಾಷ್ಟ್ರೀಯ ಆಟವಾಗಿರುವ ಹಾಕಿ ಸ್ಪರ್ಧೆಯಲ್ಲಿ ದೇಸಿ ತಂಡ ನಾಲ್ಕನೇ ಸ್ಥಾನಿಯಾಗಿ ಹಿಂದಿರುಗಿದ್ದು ಹಾಕಿ ಇಂಡಿಯಾದ ಕೆಂಗಣ್ಣಿಗೆ ಗುರಿಯಾಗಿತ್ತು. ಅದಕ್ಕೆ ಪ್ರತಿಕ್ರಿಯೆಯೆಂಬಂತೆ ಈ ಬದಲಾವಣೆಗಳಾಗಿವೆ.