ದೇಶ ಕಂಡ ಅತ್ಯುತ್ತಮ ಅಥ್ಲೀಟ್ಗಳಲ್ಲಿ ಒಬ್ಬರೆನಿಸಿರುವ ಪಿಟಿ ಉಷಾ ಅವರನ್ನು ಕ್ರೀಡಾಪಟುವಾಗಿ ರೂಪಿಸಿದ ಕೋಚ್ ಒಎಂ ನಂಬಿಯಾರ್ ಗುರುವಾರ ವಿಧಿವಶವಾಗಿದ್ದಾರೆ. 89 ವರ್ಷವಾಗಿದ್ದ ನಂಬಿಯಾರ್ ಅವರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಪತ್ನಿ ಮತ್ತು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ನಂಬಿಯಾರ್ ಅಗಲಿದ್ದಾರೆ. ಕೊಳಿಕ್ಕೋಡ್ ಜಿಲ್ಲೆಯ ವಡಕರಾದಲ್ಲಿ ತಮ್ಮ ನಿವಾಸದಲ್ಲಿ ವಾಸವಿದ್ದ ಅವರು ಅಲ್ಲಿಯೇ ತಮ್ಮ ಕೊನೆಯುಸಿರೆಳೆದಿದ್ದಾರೆ.
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತವಾಗಿರುವ ಒಎಂ ನಂಬಿಯಾರ್ ಅವರು ಈ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಸ್ವೀಕರಿಸಿದ್ದರು. ಒಂದು ವಾರದ ಹಿಂದೆ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ನಂಬಿಯಾರ್ ಅವರನ್ನು ಬಳಿಕ ಮನೆಗೆ ಕರೆತರಲಾಗಿತ್ತು.
ತಮ್ಮ ಕೋಚ್ ಅಗಲಿರುವ ವಿಚಾರವಾಗಿ ಪಿಟಿ ಉಷಾ ಪ್ರತಿಕ್ರಿಯೆ ನೀಡಿದ್ದು ಪಾರ್ಕಿಸನ್ ಖಾಯಿಲೆಯಿಂದ ಬಳಲುತ್ತಿದ್ದ ನಂಬಿಯಾರ್ ಅವರಿಗೆ ಹತ್ತು ದಿನಗಳ ಹಿಂದೆ ಹೃದಯಾಘಾತವಾಗಿತ್ತು ಎಂದು ತಿಳಿಸಿದ್ದಾರೆ. ತಮ್ಮ ಕೋಚ್ ನಂಬಿಯಾರ್ ಅವರ ಅಗಲಿಕೆ ವೈಯಕ್ತಿಕವಾಗಿ ತನಗೆ ಅತ್ಯಂತ ದೊಡ್ಡ ನಷ್ಟ ಎಂದಿದ್ದಾರೆ.
"ನನಗೆ ಇದು ಅತಿ ದೊಡ್ಡ ನಷ್ಟ. ನನ್ನ ಪಾಲುಗೆ ಅವರು ತಂದೆಯ ಸ್ಥಾನದಲ್ಲಿದ್ದರು. ಅವರಿಲ್ಲದೆ ನನ್ನ ಯಾವ ಸಾಧನೆಗಳು ಕೂಡ ಸಾಧ್ಯವಾಗುತ್ತಿರಲಿಲ್ಲ. ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆದ್ದ ಬಳಿಕ ಕಳೆದವಾರವಷ್ಟೇ ನಾನು ಅವರನ್ನು ಭೇಟಿಯಾಗಿದ್ದೆ. ನಾನು ಅವರಿಗೆ ಏನು ಹೇಳುತ್ತಿದ್ದೇನೆ ಎಂಬುದು ಅವರಿಗೆ ಅರ್ಥವಾಗುತ್ತಿತ್ತು. ಆದರೆ ಅವರಿಂದ ಮಾತನಾಡುವುದು ಸಾಧ್ಯವಿರಲಿಲ್ಲ" ಎಂದು ಪಿಟಿ ಉಷಾ ತಿಳಿಸಿದ್ದಾರೆ.
ಮಾಜಿ ವಾಯು ಸೇನೆಯ ಅಧಿಕಾರಿಯಾಗಿದ್ದ ನಂಬಿಯಾರ್ ಬಳಿಕ ಕೋಚ್ ಆಗಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಲ್ಲದೆ ಸಾಕಷ್ಟು ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದ್ದಾರೆ. ಇದರಲ್ಲಿ ಪಿಟಿ ಉಷಾ ಅವರು ಕೂಡ ಸೇರಿದ್ದಾರೆ. ಲಾಸ್ ಏಂಜಲೀಸ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಿಟಿ ಉಷಾ ಅತ್ಯಲ್ಪ ಅಂತರದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರು. ಉಷಾ ಹೊರತುಪಡಿಸಿ ಶೈನಿ ವಿಲ್ಸನ್, ವಂದನಾ ರಾವ್ ಮುಂತಾದ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಕೂಡ ನಂಬಿಯಾರ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
1932ರಲ್ಲಿ ಕಣ್ಣೂರಿನಲ್ಲಿ ಜನಿಸಿದ್ದ ನಂಬಿಯಾರ್ ಕಾಲೇಜು ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟುವಾಗಿದ್ದರು. ಕಾಲೇಜಿನ ಪ್ರಾಂಶುಪಾಲರ ಸಲಹೆಯಂತೆ ಸೇನೆಯನ್ನು ಸೇರಿಕೊಂಡ ಅವರು ಕ್ರೀಡಾಪಟುವಾಗಿಯೂ ಮುಂದುವರಿದರು. 15 ವರ್ಷಗಳ ಕಾಲ ವಾಯಿಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ನಂಬಿಯಾರ್ ಅವರು ಬಳಿಕ 1970ರಲ್ಲಿ ನಿರ್ವತ್ತರಾದರು. ಬಳಿಕ ಪೂರ್ಣ ಪ್ರಮಾಣದಲ್ಲಿ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದರು.