ನವದೆಹಲಿ, ಜನವರಿ 26: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಸಾಧಕರಿಗೆ ದೇಶದ ಉನ್ನತ ನಾಗರಿಕ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
69 ನೇ ಗಣರಾಜ್ಯೋತ್ಸವದ ಅಂಗವಾಗಿ 'ಪದ್ಮ' ಪ್ರಶಸ್ತಿ ವಿಜೇತರ ಪಟ್ಟಿಯನ್ನು ಗುರುವಾರ ಸಂಜೆ ಘೋಷಿಸಲಾಯಿತು. 73 ಸಾಧಕರಿಗೆ ಪದ್ಮಶ್ರೀ, 3 ಸಾಧಕರಿಗೆ ಪದ್ಮವಿಭೂಷಣ ಹಾಗೂ 9 ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
ಕ್ರೀಡಾ ಕ್ಷೇತ್ರದಿಂದ ಮಹೇಂದ್ರ ಸಿಂಗ್ ಧೋನಿ ಅವರ ಜತೆಗೆ ಸ್ನೂಕರ್/ಬಿಲಿಯರ್ಡ್ಸ್ ಚಾಂಪಿಯನ್ ಬೆಂಗಳೂರು ನಿವಾಸಿ ಪಂಕಜ್ ಅಡ್ವಾನಿಯವರಿಗೂ 'ಪದ್ಮಭೂಷಣ' ಪ್ರಶಸ್ತಿ ಲಭಿಸಿದೆ. 2007ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, 2009ರಲ್ಲಿ ಪದ್ಮಶ್ರೀಗೆ ಭಾಜನರಾಗಿದ್ದ ಎಂಎಸ್ ಧೋನಿ ಅವರಿಗೆ ಈಗ ಪದ್ಮಭೂಷಣ ಲಭಿಸಿದೆ. ಅಡ್ವಾಣಿ ಅವರು 6 ರೆಡ್ ಸ್ನೂಕರ್ ಹಾಗೂ 18 ವಿಶ್ವ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.
2017 ರ 48 ಕೆ.ಜಿ. ವಿಭಾಗದಲ್ಲಿ ವಿಶ್ವ ವೇಯ್ಟ್ ಲಿಫ್ಟ್ ಚಾಂಪಿಯನ್ ಸೈಕೋಮ್ ಮೀರಾಬಾಯಿ ಚಾನು, ಏಷ್ಯನ್ ಗೇಮ್ಸ್ ಟೆನಿಸ್ ಚಿನ್ನದ ಪದಕ ವಿಜೇತ ಸೋಮದೇವ್, ಖ್ಯಾತ ಬ್ಯಾಡ್ಮಿಂಟನ್ ತಾರೆ ಕಿಡಂಬಿ ಶ್ರೀಕಾಂತ್, ಪ್ಯಾರಾಲಂಪಿಕ್ ಚಿನ್ನದ ಪದಕ ವಿಜೇತ ಮುರಳಿಕಾಂತ್ ಪೇಟ್ಕರ್ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ ಸಿಗಲಿದೆ.
ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಸಾಧಕರಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.