ಟೋಕಿಯೋ, ಜುಲೈ 26: ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಮೂರನೇ ಸುತ್ತಿನಲ್ಲಿ ತಮ್ಮ ಆಟವನ್ನು ಅಂತ್ಯಗೊಳಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಸೋಲಿನ ಬಳಿಕ ಬೇಸರದಿಂದ ಮನಿಕಾ ಬಾತ್ರಾ ಪ್ರತಿಕ್ರಿಯಿಸಿದ್ದು ಸೋಲಿಗೆ ತಾನು ಅತಿಯಾಗಿ ಯೋಚನೆ ಮಾಡಿದ್ದೇ ಕಾರಣವಾಯಿತು ಎಂದಿದ್ದಾರೆ. 17ನೇ ಶ್ರೇಯಾಂಕಿತೆ ಸೋಫಿಯಾ ಪಾಲ್ಕೊನೋವಾ ವಿರುದ್ಧ ಮನಿಕಾ ಸೋಲು ಕಂಡಿದ್ದಾರೆ.
ಮನಿಕಾ ಬಾತ್ರಾ ಟೋಕಿಯೋ ಒಲಿಂಪಿಕ್ಸ್ನಲ್ಲಿ ಮೂರನೇ ಸುತ್ತಿಗೆ ತಮ್ಮ ಆಟವನ್ನು ಅಂತ್ಯಗೊಳಿಸಿದ್ದಾರಾದರೂ ಭಾರತೀಯರ ಪೈಕಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಟೇಬಲ್ ಟೆನಿಸ್ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಹಂತಕ್ಕೇರಿದ ಮೊದಲ ಭಾರತೀಯ ಪೆಡ್ಲರ್ ಎನಿಸಿದ್ದಾರೆ. ಆದರೆ ಮನಿಕಾ ಮೇಲೆ ಭಾರತೀಯ ಅಭಿಮಾನಿಗಳ ನಿರೀಕ್ಷೆ ಇದಕ್ಕೂ ಹೆಚ್ಚಿದ್ದು ಎಂಬುದು ಕೂಡ ಸತ್ಯ.
ಟೋಕಿಯೋ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ನಲ್ಲಿ ಎಡವಿದ ಭಾರತೀಯ ಬಿಲ್ಲುಗಾರರು
11-8, 11-2, 11-5, 11-7 ಅಂತರದಿಂದ ಸೋಫಿಯಾ ಪಾಲ್ಕೊನೋವಾಗೆ ಶರಣಾಗುವ ಮೂಲಕ ಮನಿಕಾ ಬಾತ್ರ ತಮ್ಮ ಹೋರಾಟವನ್ನು ಮಾತ್ರ ಅಂತ್ಯಗೊಳಿಸಲಿಲ್ಲ. ಈ ಸೋಲಿನ ಮೂಲಕ ಟಿಟಿಯಲ್ಲಿ ಭಾರತೀಯ ಮಹಿಳಾ ಸಿಂಗಲ್ಸ್ ವಿಭಾಗದ ಹೋರಾಟ ಇಲ್ಲಿಗೆ ಅಂತ್ಯವಾದಂತಾಯಿತು.
"ನಾನು ಸ್ವಲ್ಪ ಮಟ್ಟಿಗೆ ನರ್ವಸ್ ಆಗಿದ್ದೆ. ನಾನು ಗೆಲ್ಲಬೇಕಿತ್ತು. ನನ್ನ ಮೇಲೆಯೇ ನಾನು ಅತಿಯಾಗಿ ವಿಶ್ವಾಸವಿಟ್ಟುಕೊಂಡಿದ್ದೆ. ನಾನು ಗೆಲುವನ್ನು ಸಾಧಿಸಿ ಮುಂದಿನ ಹಂತಕ್ಕೇರಲು ಬಯಸಿದ್ದೆ ಯಾಕೆಂದರೆ ಕ್ವಾರ್ಟರ್ಫೈನಲ್ನಲ್ಲಿ ಆಡುವುದೆಂದರೆ ಅದೊಂದು ಶ್ರೇಷ್ಠವಾದ ಸಂಗತಿ. ಆದರೆ ಅದು ನನ್ನಿಂದ ಸಾಧ್ಯವಾಗಲಿಲ್ಲ. ಆ ಬಗ್ಗೆ ಈಗ ಯೋಚಿಸಲು ಬೇಸರವಾಗುತ್ತದೆ. ನಾನು ಅತಿಯಾಗಿ ಯೋಚನೆ ಮಾಡಿದ್ದೇ ನನ್ನ ಹಿನ್ನಡೆಗೆ ಕಾರಣವಾಯಿತು" ಎಂದು ಮನಿಕಾ ಬಾತ್ರಾ ಇಂಡಿಯಾ ಟುಡೇ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಮನಿಕಾ ಬಾತ್ರಾ ಕೊರೊನಾವೈರಸ್ನ ನಿರ್ಬಂಧದ ಕಾರಣದಿಂದಾಗಿ ತನ್ನ ಕೋಚ್ಗೆ ಅವಕಾಶ ದೊರೆಯದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದರು. "ಎಲ್ಲಾ ಕ್ರೀಡಾಪಟುಗಳು ಕೂಡ ಬೆಂಬಲಪಡೆಯುವುದನ್ನು ಬಯಸುತ್ತಾರೆ. ನನ್ನ ಎದುರಾಳಿ ಕೋರ್ಟ್ನಲ್ಲಿ ತನ್ನೊಂದಿಗೆ ಕೋಚ್ ಜೊತೆಗಿದ್ದರು. ಈ ಹಂತದಲ್ಲಿ ನೀವು ಕೆಲ ಸಲಹೆಗಳನ್ನು ಪಡೆದುಕೊಳ್ಳಲು ಇನ್ನೊಬ್ಬರ ಅಗತ್ಯವನನ್ಉ ಹೊಂದಿರುತ್ತೀರಿ. ಈ ಮೂಲಕ ನೀವು ಮಾನಸಿಕವಾಗಿ ಸದೃಢವಾಗಿರಬಹುದು. ನನ್ನ ಕೋಚ್ಗೆ ಅವಕಾಶ ಮಾಡಿಕೊಡುವಂತೆ ನಾನು ಮನವಿ ಮಾಡಿದ್ದೆ. ಪರವಾಗಿಲ್ಲ, ನಾನು ಯಾರನ್ನೂ ಇದಕ್ಕೆ ದೂರಲು ಬಯಸುವುದಿಲ್ಲ. ಆದರೆ ಕೋಚ್ ನನ್ನ ಜೊತೆ ಇರುತ್ತಿದ್ದರೆ ಉತ್ತಮವಿರುತ್ತಿತ್ತು" ಎಂದಿದ್ದಾರೆ ಮನಿಕಾ ಬಾತ್ರ.