
ನವದೆಹಲಿ, ಸೆಪ್ಟೆಂಬರ್ 25: ಪ್ರತಿಷ್ಠಿತ ರಾಷ್ಟ್ರೀಯ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಇಂದು (ಸೆ.25) ಸ್ವೀಕರಿಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಈರ್ವರಿಗೂ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರಶಸ್ತಿ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಭಾರತದ ಸ್ಟಾರ್ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಮತ್ತು ಅಥ್ಲೀಟ್ ಹಿಮಾದಾಸ್ ಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನೀರಜ್ ಚೋಪ್ರಾ ಅವರು ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಬಂಗಾರ ಗೆದ್ದಿದ್ದಕ್ಕಾಗಿ ಮತ್ತು ಜೂನಿಯರ್ ವರ್ಲ್ಡ್ ಚಾಂಪಿಯನ್ ಸ್ಪ್ರಿಂಟರ್ ಸೇರಿದಂತೆ ಹಿಮಾದಾಸ್ ಸೇರಿದಂತೆ ಒಟ್ಟು 20 ಮಂದಿ ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು.
ಈ ಪ್ರಶಸ್ತಿ ವಿತರಣಾ ಸಮಾರಂಭ ನಿಜವಾಗಿ ಆಗಸ್ಟ್ 29ರಂದು ನಡೆಯಬೇಕಿತ್ತು. ಆದರೆ ಆ ಸಂದರ್ಭ ಏಷ್ಯಾನ್ ಗೇಮ್ಸ್ ನಡೆಯುತ್ತಿದ್ದರಿಂದ ಕಾರ್ಯಕ್ರಮವನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಲಾಗಿತ್ತು. ಇಂಡೋನೇಷ್ಯಾ ಏಷ್ಯಾನ್ ಗೇಮ್ಸ್ ಮುಗಿದಿದ್ದೇ ಸೆಪ್ಟೆಂಬರ್ 2ರಂದು.
ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ, ದ್ರೋಣಾಚಾರ್ಯ, ಧ್ಯಾನ್ ಚಂದ್ ಪ್ರಶಸ್ತಿ ಸ್ವೀಕರಿಸಿದ ಎಲ್ಲರ ವಿವರ ಕೆಳಗಿದೆ.
* ರಾಜೀವ್ ಗಾಂಧಿ ಖೇಲ್ ರತ್ನ: ವಿರಾಟ್ ಕೊಹ್ಲಿ ಮತ್ತು ಮೀರಾಬಾಯಿ ಚಾನು.
* ಅರ್ಜುನ ಪ್ರಶಸ್ತಿ: ನೀರಾಜ್ ಚೋಪ್ರಾ, ಜಿನ್ಸನ್ ಜಾನ್ಸನ್ ಮತ್ತು ಹಿಮಾ ದಾಸ್ (ಅಥ್ಲೆಟಿಕ್ಸ್); ಎನ್ ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್); ಸತೀಶ್ ಕುಮಾರ್ (ಬಾಕ್ಸಿಂಗ್); ಸ್ಮೃತಿ ಮಂದಾನ (ಕ್ರಿಕೆಟ್); ಶುಭಂಕರ್ ಶರ್ಮಾ (ಗಾಲ್ಫ್); ಮನ್ಪ್ರೀತ್ ಸಿಂಗ್, ಸವಿತಾ (ಹಾಕಿ), ರವಿ ರಾಥೋಡ್ (ಪೊಲೊ), ರಾಹಿ ಸರ್ನೊಬಾತ್, ಅಂಕುರ್ ಮಿತ್ತಲ್, ಶ್ರೀಯಾಸಿ ಸಿಂಗ್ (ಶೂಟಿಂಗ್); ಮಣಿಕಾ ಬಾತ್ರಾ, ಜಿ ಸತೀಯಾನ್ (ಟೇಬಲ್ ಟೆನಿಸ್); ರೋಹನ್ ಬೋಪಣ್ಣಾ (ಟೆನಿಸ್); ಸುಮಿತ್ (ರಸ್ಲಿಂಗ್); ಪೂಜ ಕಡಿಯನ್ (ವೂಶು); ಅಂಕೂರ್ ಧಮಾ (ಪ್ಯಾರಾ-ಅಥ್ಲೆಟಿಕ್ಸ್); ಮನೋಜ್ ಸರ್ಕಾರ್ (ಪ್ಯಾರಾ-ಬ್ಯಾಡ್ಮಿಂಟನ್).
* ದ್ರೋಣಾಚಾರ್ಯ ಪ್ರಶಸ್ತಿ: ಸಿಎ ಕುಟ್ಟಪ್ಪ (ಬಾಕ್ಸಿಂಗ್); ವಿಜಯ್ ಶರ್ಮಾ (ವೇಟ್ ಲಿಫ್ಟಿಂಗ್); ಶ್ರೀನಿವಾಸರಾವ್ (ಟೇಬಲ್ ಟೆನಿಸ್); ಸುಖದೇವ್ ಸಿಂಗ್ ಪನ್ನು (ಅಥ್ಲೆಟಿಕ್ಸ್); ಕ್ಲಾರೆನ್ಸ್ ಲೋಬೋ (ಹಾಕಿ, ಜೀವಮಾನದ ಸಾಧನೆಗೆ ಪ್ರಶಸ್ತಿ); ತಾರಕ್ ಸಿನ್ಹಾ (ಕ್ರಿಕೆಟ್, ಜೀವಮಾನದ ಸಾಧನೆಗೆ ಪ್ರಶಸ್ತಿ); ಜೀವನ್ ಕುಮಾರ್ ಶರ್ಮಾ (ಜೂಡೋ, ಜೀವಮಾನದ ಸಾಧನೆಗೆ ಪ್ರಶಸ್ತಿ); ವಿ ಆರ್ ಬೀದು (ಅಥ್ಲೆಟಿಕ್ಸ್, ಜೀವಮಾನದ ಸಾಧನೆಗೆ ಪ್ರಶಸ್ತಿ).
* ಧ್ಯಾನ್ ಚಂದ್ ಪ್ರಶಸ್ತಿ: ಸತ್ಯದೇವ್ ಪ್ರಸಾದ್ (ಬಿಲ್ಲುಗಾರಿಕೆ); ಭರತ್ ಕುಮಾರ್ ಛೆಟ್ರಿ (ಹಾಕಿ); ಬಾಬಿ ಅಲೋಶಿಯಸ್ (ಅಥ್ಲೆಟಿಕ್ಸ್); ಚೌಗಲೆ ದಾಡು ದತ್ತಾತ್ರೇ (ರಸ್ಲಿಂಗ್).