ಜೊಹಾನ್ಸ್ ಬರ್ಗ್, ಫೆಬ್ರವರಿ 10: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯ ಇಂದು ನಡೆಯುತ್ತಿದ್ದು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಸರಣಿಯಲ್ಲಿ 0-3ರಿಂದ ಹಿಂದಿರುವ ಅತಿಥೇಯ ದಕ್ಷಿಣ ಆಫ್ರಿಕಾಕ್ಕೆ ಈ ಪಂದ್ಯ ಗೆಲ್ಲಲೇಬೇಕಾದಂಥ ಅನಿವಾರ್ಯತೆ ಬಂದಿದೆ. ದಕ್ಷಿಣ ಆಫ್ರಿಕಾ ಪರ ಎಬಿ ಡಿ ವಿಲಿಯರ್ಸ್ ಮರಳಿ ತಂಡಕ್ಕೆ ಬಂದಿರುವುದು ಭಾರೀ ಬಲ ಬಂದಂತಾಗಿದೆ.
ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲಿಯೇ ಆಘಾತ ಕಾದಿತ್ತು. ಸತತ ಸೋಲು ಕಾಣುತ್ತಿರುವ ರೋಹಿತ್ ಶರ್ಮಾ 13 ಚೆಂಡುಗಳಲ್ಲಿ ಕೇವಲ 5 ರನ್ ಗಳಿಸಿ ಕಾಸಿಂಗೋ ರಬಡ ಹಿಡಿದ ಅದ್ಭುತ ಕ್ಯಾಚಿಂದ ಪೆವಿಲಿಯನ್ನಿಗೆ ಮರಳಿದರು. ನಂತರ ಶಿಖರ್ ಧವನ್ (ಅಜೇಯ 58) ಮತ್ತು ನಾಯಕ ವಿರಾಟ್ ಕೊಹ್ಲಿ (ಅಜೇಯ 40) ಉತ್ತಮವಾಗಿ ಆಡುತ್ತಿದ್ದಾರೆ. ಭಾರತ 19.1 ಓವರುಗಳಲ್ಲಿ 109 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿದೆ.
ದಕ್ಷಿಣ ಆಫ್ರಿಕಾ ಪರ ಹಾಶೀಂ ಆಮ್ಲಾ, ಎಬಿ ಡಿ ವಿಲಿಯರ್ಸ್, ಹೆನ್ರಿಚ್ ಕ್ಲೇಸೆನ್ (ಡಬ್ಲ್ಯೂ), ಮಾರ್ಕ್ರಮ್, ಜೆಪಿ ಡುಮಿನಿ, ಮಿಲ್ಲರ್, ಮೋರಿಸ್, ಫೆಹ್ಲುಕ್ವೇವೊ, ರಬಾಡ, ಮಾರ್ಕೆಲ್, ಲುಂಗಿಸಾನಿ ಎನ್ಗಿ ಮುಂತಾದವರು ಕಣಕ್ಕಿಳಿಯಲಿದ್ದಾರೆ.
ಭಾರತದ ಪರ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಜಸ್ ಪ್ರೀತ್ ಬೂಮ್ರಾ, ಯಜುವೇಂದ್ರ ಚಹಾಲ್ ಆಡುತ್ತಿದ್ದಾರೆ.