ತಂಡದ ಆಯ್ಕೆಯಲ್ಲಿ ಗೊಂದಲ
ಐಪಿಎಲ್ 11ಕ್ಕೆ ಆರ್ಸಿಬಿ ಪಂದ್ಯ ಖರೀದಿ ಮಾಡಿದಾಗಲೇ ತಂಡದ ಕ್ಷಮತೆ ಬಗ್ಗೆ ಅನುಮಾನಗಳು ಮೂಡಿದ್ದವು, ನಿವೃತ್ತಿ ಅಂಚಿನಲ್ಲಿರುವ ಮೆಕಲಮ್, ನ್ಯೂಜಿಲೆಂಡ್ ತಂಡದ ಹೊರಗುಳಿದಿರುವ ಕೋರಿ ಆಂಡರ್ಸನ್ ಆಟಗಾರರನ್ನು ತೆಗೆದುಕೊಂಡಾಗಲೇ ತಂಡದಲ್ಲಿ ಲೋಪ ದೋಷ ಇರುವ ಅನುಮಾನಗಳಿತ್ತು. ಅದರಲ್ಲಿಯೂ ಆರ್ಸಿಬಿ ಮೆಂಟರ್ ಡ್ಯಾನಿಯಲ್ ವೆಟೋರಿ ಅವರು ನ್ಯೂಜಿಲೆಂಡ್ ಆಟಗಾರರಿಗೆ ಹೆಚ್ಚು ಮಣೆ ಹಾಕಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.
ಕ್ರಿಸ್ ಗೇಲ್ ಕೈಬಿಟ್ಟದ್ದು
ಸರ್ಫರಾಜ್ ಖಾನ್ನನ್ನು ತಂಡದಲ್ಲಿ ಉಳಿಸಿಕೊಂಡಿದ್ದು ಆರ್ಸಿಬಿಗೆ ಮುಳುವಾಯಿತು. ತಂಡ ಇಟ್ಟಿದ್ದ ವಿಶ್ವಾಸವನ್ನು ಸರ್ಫರಾಜ್ ಖಾನ್ ಉಳಿಸಿಕೊಳ್ಳಲಿಲ್ಲ. ಅಲ್ಲದೆ ಆರ್ಸಿಬಿಯ ಸ್ಟಾರ್ ಆಟಗಾರ ಗೇಲ್ನನ್ನು ಕೈಬಿಟ್ಟಿದ್ದು ಕೂಡ ಆರ್ಸಿಬಿಗೆ ಮುಳುವಾಯಿತು. ಪಂಜಾಬ್ ಸೇರಿದ ಗೇಲ್ ಅದ್ಭುತ ಆಟವಾಡಿ ಗಮನ ಸೆಳೆದರು.
ಚೇತರಿಸಿಕೊಳ್ಳಲು ಆಗಲೇ ಇಲ್ಲ
ಆರ್ಸಿಬಿ ತಂಡ ತನ್ನ ಆರಂಭದ ಪಂದ್ಯಗಳಲ್ಲಿ ಉತ್ತಮ ಆಟವಾಡಲೇ ಇಲ್ಲ. ಕೆಲವು ಪಂದ್ಯಗಳಲ್ಲಿಯಂತೂ ಗೆಲ್ಲುವ ಛಲವನ್ನೇ ತೋರಲಿಲ್ಲ, ಆರಂಭದ ಸತತ ಸೋಲು ಆರ್ಸಿಬಿಗೆ ಭಾರಿ ಮುಳುವಾಯಿತು, ಆರಂಭದ ಹಿನ್ನಡೆಯಿಂದ ಒತ್ತಡ ಹೆಚ್ಚಾಗಿ ನಾಯಕ ಕೊಹ್ಲಿ ಸೇರಿದಂತೆ ಆಟಗಾರರು ಅದನ್ನು ನಿಭಾಯಿಸಲು ವಿಫಲರಾದರು.
ಕರ್ನಾಟಕದ ಆಟಗಾರರೇ ಇಲ್ಲ
ಕಳೆದ ಋತುವಿನಲ್ಲಿ ಆರ್ಸಿಬಿ ತಂಡದ ಪರ ಆಡಿದ್ದ ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್ ನನ್ನು ಈ ಬಾರಿ ಆರ್ಸಿಬಿ ಕೈಬಿಟ್ಟಿತು. ಬೆಂಗಳೂರು ಪಿಚ್ನ ಗುಣಗಳನ್ನು ಅರಿತಿರುವ ಯಾವೊಬ್ಬ ಕರ್ನಾಟಕದ ಆಟಗಾರನೂ ಆರ್ಸಿಬಿಯಲ್ಲಿರಲಿಲ್ಲ. ಕರ್ನಾಟಕ ಆಟಗಾರರು ಇಲ್ಲದಿರುವುದು ಆರ್ಸಿಬಿ ಅಭಿಮಾನಿಗಳಿಗೂ ಬೇಸರ ತಂದಿತ್ತು.
ಆಟಗಾರರ ಆಯ್ಕೆಯ ಗೊಂದಲ
ಆಡುವ 11 ಮಂದಿಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲೂ ಆರ್ಸಿಬಿ ಗೊಂದಲಕ್ಕೆ ಸಿಲುಕಿತು, ಹೀಗಾಗಿ ಹಲವು ಬಾರಿ ತಂಡದಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಮೆಕ್ಲಂ ಕೈಬಿಟ್ಟು ಪಾರ್ಥಿವ್ ಪಟೇಲ್ ಕರೆತರಲಾಯಿತು, ಬೌಲಿಂಗ್ ನಲ್ಲೂ ಹಲವು ಬದಲಾವಣೆಗಳನ್ನು ಮಾಡಲಾಯಿತು. ತಂಡವನ್ನು ಸೆಟ್ ಮಾಡಿಕೊಳ್ಳುವಷ್ಟರಲ್ಲಾಗಲೇ ಆರ್ಸಿಬಿ ಹಲವು ಪಂದ್ಯ ಸೋತಾಗಿತ್ತು.
ಕೆಳ ಮಧ್ಯಾಮ ಕ್ರಮಾಂಕದ ವೈಫಲ್ಯ
ಆರ್ಸಿಬಿ ತಂಡದ ಬ್ಯಾಟಿಂಗ್ ಬಲ ಕೊಹ್ಲಿ ಮತ್ತು ಎಬಿಡಿ ಇಬ್ಬರೇ ಇವರನ್ನು ಹೊರತುಪಡಿಸಿ ಇನ್ನಾರೂ ಹೇಳಿಕೊಳ್ಳುವ ಪ್ರದರ್ಶನ ನೀಡಲೇ ಇಲ್ಲ. ಕೆಳ ಮಧ್ಯಮಕ್ರಮಾಂಕದ ಆಟಗಾರರಂತೂ ಭಾರಿ ವೈಫಲ್ಯ ಅನುಭವಿಸಿದರು. ಕೊಹ್ಲಿ, ಎಬಿಡಿ ಔಟಾದರೆಂದರೆ ಸೋಲು ನಿಶ್ಚಿತ ಎಂಬಂತಾಗಿತ್ತು ಆರ್ಸಿಬಿ ತಂಡದ ಸ್ಥಿತಿ, ಹೈದರಾಬಾದ್ ಮೇಲಿನ ಪಂದ್ಯದಲ್ಲಿ ಕೊನೆ ಓವರ್ಗಳಲ್ಲಿ ಬೇಕಿದ್ದ ಕಡಿಮೆ ರನ್ಗಳನ್ನೂ ಗಳಿಸಲು ಆರ್ಸಿಬಿಯ ಕೆಳ ಮಧ್ಯಮ ವಿಫಲರಾಗಿದ್ದನ್ನು ನೆನೆಯಬಹುದು.
ದಿಡ್ಡ ನಿರ್ಧಾರದಲ್ಲಿ ಕೊರತೆ
ನಾಯಕ ಕೊಹ್ಲಿಗೆ ಟೂರ್ನಿಯ ಆರಂಭಕ್ಕೂ ಮುನ್ನವೇ ಗೆಲ್ಲುವ ಒತ್ತಡ ಹೆಗಲೇರಿತ್ತು, ಪಂದ್ಯದ ನಡುವೆ ಸಹ ಒತ್ತಡ ನಿಭಾಯಿಸಲು ಅವರು ವಿಫಲರಾದರು. ಸೂಕ್ತ ಸಮಯದಲ್ಲಿ ಬೌಲಿಂಗ್ ಬದಲಾವಣೆ ಕೊಹ್ಲಿಯಿಂದ ಸಾಧ್ಯವಾಗಲಿಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಲು ಅವರು ಎಡವಿದರು.