ಬೆಂಗಳೂರು, ಜೂ. 24: ಕನ್ನಡ ನೆಲದಲ್ಲಿ ಅನೇಕ ಕ್ರೀಡಾ ಪ್ರತಿಭೆಗಳು ಬೆಳೆದಿವೆ. ಅದರಲ್ಲೂ ಕ್ರಿಕೆಟ್ ರಂಗದಲ್ಲಿ ಅನೇಕ ಸಾಧಕರನ್ನು ಜಗತ್ತಿಗೆ ಪರಿಚಯಿಸಿದ ಹೆಮ್ಮೆ ಕನ್ನಡ ನೆಲದ್ದು. ನಮ್ಮೀ ಕನ್ನಡ ನೆಲದಲ್ಲಿ ಬೆಳೆದು ಕ್ರಿಕೆಟ್ ಮೂಲಕ ವಿಶ್ವದಾದ್ಯಂತ ಗುರುತಿಸಿಕೊಂಡ ಅಷ್ಟೂ ಸಾಧಕರ ಪರಿಚಯ ನೀಡುವ ಹೊತ್ತಗೆ 'ವಿಶ್ವ ಕ್ರಿಕೆಟ್ ನಲ್ಲಿ ಕರ್ನಾಟಕದ ಆಟಗಾರರು'.
ಇಂಗ್ಲೆಂಡ್ 'ಸಿಂಹ'ಗಳ ಎದುರು ಸೋತ ಭಾರತದ ಯುವ ಪ್ರತಿಭೆಗಳು
ಅಸಲಿಗೆ ಇದು ಬರೀ ಕ್ರೀಡಾಸಕ್ತರಿಗಷ್ಟೇ ಮೀಸಲಾದ ಕೃತಿಯಲ್ಲ. ಜ್ಞಾನ ಬಯಸುವ ಎಲ್ಲರೂ ಪುಟ ತಿರುವಬೇಕಾದ ಹೊತ್ತಿಗೆಯಿದು. ಕನ್ನಡಿಗರಾಗಿ ಹುಟ್ಟಿ ಕ್ರಿಕೆಟ್ ನಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ಹಳೆ ತಲೆ ಮಾರಿನ ಮತ್ತು ಈಚಿನ ಬಹುತೇಕ ಸಾಧಕರ ವಿವರಗಳು ಈ ಕೃತಿಯಲ್ಲಿದೆ. ಎಲ್ಲದಕ್ಕಿಂತ ಮಿಗಿಲಾಗಿ ಓದಿದಷ್ಟೂ ಖುಷಿ ಕೊಡುವ, ಕನ್ನಡದ ಸಾಧಕರ ಬಗ್ಗೆ ಹೆಮ್ಮೆಯೆನಿಸುವ ಅನೇಕ ಸಂಗತಿಗಳನ್ನು ಕೃತಿ ಒಳಗೊಂಡಿದೆ.
ಕರ್ನಾಟಕದ ಕ್ರಿಕೆಟಿಗರನ್ನು ಬದಿಗಿಟ್ಟು ಬರೀ ಭಾರತದ ಕ್ರಿಕೆಟ್ ಇತಿಹಾಸವನ್ನು ನಾವು ನೋಡಲು ಸಾಧ್ಯವೆ? ಖಂಡಿತಾ ಇಲ್ಲ. ಭಾರತದ ಕ್ರಿಕೆಟ್ ಇತಿಹಾಸದ ಮೇಲೆ ಕರ್ನಾಟಕದ ಆಟಗಾರರು ಉಳಿಸಿದ ಪ್ರಭಾವ ಅಂಥದ್ದು. ಈ ಇತಿಹಾಸವನ್ನು ಸಮಗ್ರವಾಗಿ ಪರಿಚಯಿಸುತ್ತೆ 'ವಿಶ್ವ ಕ್ರಿಕೆಟ್ ನಲ್ಲಿ ಕರ್ನಾಟಕದ ಆಟಗಾರರು'.
ಚನ್ನಗಿರಿ ಕೇಶವಮೂರ್ತಿಯವರು ಬರೆದಿರುವ ಈ ಕೃತಿಯನ್ನು ಪಂಚಮಿ ಮೀಡಿಯಾ ಪಬ್ಲಿಕೇಶನ್ಸ್ ಹೊರ ತಂದಿದೆ. ಸುಮಾರು 650 ಗ್ರಾಂ ತೂಗುವ ಈ ಹೊತ್ತಗೆಯ ಬೆಲೆ 400 ರೂ. ಕನ್ನಡ ನೆಲದ ವಿಶ್ವ ಮಟ್ಟದ ಕ್ರಿಕೆಟ್ ಪ್ರತಿಭೆಗಳನ್ನು ಜಾಲಾಡಿ ರೂಪುಗೊಂಡಿರುವ ಈ ಕೃತಿ ಕ್ರೀಡಾಸಕ್ತರಿಗೆ, ಸಾಹಿತ್ಯಾಸಕ್ತರಿಗೆ ಖಂಡಿತಾ ಖುಷಿ ನೀಡೀತು.