
ಈ ಬಾರಿಯ ಐಪಿಎಲ್ನಲ್ಲಿ ಕೆಲ ಯುವ ಆಟಗಾರರು ಅದ್ಭುತ ಪ್ರದರ್ಶನದ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಖ್ಯಾತರಾಗಿದ್ದ ಕೆಲ ಆಟಗಾರರು ಮಾತ್ರ ಕಳಪೆ ಪ್ರದರ್ಶನದ ಮೂಲಕ ನಿರಾಸೆ ಮೂಡಿಸಿದ್ದಾರೆ. ಇದರಲ್ಲಿ ವೆಸ್ಟ್ ಇಂಡೀಸ್ ಸ್ಪೋಟಕ ಆಟಗಾರ ಆಂಡ್ರೆ ರಸೆಲ್ ಕೂಡ ಒಬ್ಬರು. ಈಗ ರಸೆಲ್ ಐಪಿಎಲ್ನಲ್ಲಿ ತಮ್ಮ ಕಳಪೆ ಪ್ರದರ್ಶನಕ್ಕೆ ಕಾರಣವನ್ನು ಹೇಳಿದ್ದಾರೆ.
ಯುಎಇನಲ್ಲಿ ನಡೆದ ಐಪಿಎಲ್ ತನಗೆ ಕಠಿಣವಾಗಿತ್ತು ಎಂದು ಆಂಡ್ರೆ ರಸೆಲ್ ಹೇಳಿದ್ದಾರೆ. ತನ್ನ ಬ್ಯಾಟಿಂಗ್ ಶೈಲಿಯನ್ನು ಬದಲಾವಣೆ ಮಾಡುವ ಪ್ರಯತ್ನ ನಡೆಸಿದರೂ ಅದು ಫಲ ನೀಡಿರಲಿಲ್ಲ ಎಂದು ರಸೆಲ್ ಒಪ್ಪಿಕೊಂಡಿದ್ದಾರೆ. ತನ್ನ ಬ್ಯಾಟಿಂಗ್ ಸ್ಟಾನ್ಸ್, ತಂತ್ರ, ಚಲನೆಯಲ್ಲಿ ಬದಲಾವಣೆ ಮಾಡಿಕೊಂಡರೂ ಅದ್ಯಾವುದು ಕೂಡ ತನಗೆ ಫಲ ನೀಡಿಲ್ಲ ಎಂದು ರಸೆಲ್ ಹೇಳಿಕೆ ನೀಡಿದ್ದಾರೆ.
"ಆ ಒತ್ತಡ ನಿಜವಾಗಿತ್ತು. ನಾನೋರ್ವ ಕಠಿಣ ಆಟಗಾರ. ಈ ಬಾರಿಯ ಐಪಿಎಲ್ನಲ್ಲಿ ಏನಾಯಿತು ಎಂದು ನನಗೂ ತಿಳಿಯುತ್ತಿಲ್ಲ. ಎಲ್ಲವೂ ನನ್ನಿಂದ ಬೇಗನೆ ಸರಿದು ಹೋಗಬೇಕೆಂದು ನಾನು ಭಾವಿಸುತ್ತೇನೆ" ಎಂದು ಆಂಡ್ರೆ ರಸೆಲ್ ಜಮೈಕಾದ ಟಿವಿ ಚಾನೆಲ್ಗೆ ನಿಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಬಯೋಸೆಕ್ಯೂರ್ ಬಬಲ್ ಎಂಬುದು ಜೈಲಿಗೆ ಸಮ ಎಂದು ರಸೆಲ್ ಹೇಳಿದರು. ಹೀಗಾಗಿ ಐಪಿಎಲ್ ಮುಕ್ತಾದ ಬಳಿಕ ತಕ್ಷಣವೇ ದುಬೈನಲ್ಲಿ ಕೆಲ ಸಮಯ ವಿರಾಮ ಪಡೆದುಕೊಂಡಿರುವುದಾಗಿ ರಸೆಲ್ ಹೇಳಿದರು. ಕೆರಿಬಿಯನ್ ಪ್ರೀಮಿಯರ್ ಲೀಗ್ನ ಬಯೋಬಬಲ್ನಿಂದ ನೇರವಾಗಿ ಐಪಿಎಲ್ಗೆ ಸೇರಿಕೊಂಡಿದ್ದರು ಆಂಡ್ರೆ ರಸೆಲ್.
"ಐಪಿಎಲ್ ಮುಕ್ತಾಯದ ಬಳಿಕ ಬಬಲ್ನಿಮದ ಹೊರಬಂದು ದುಬೈಗೆ ತೆರಳಿ ಉತ್ತಮ ಸಮಯವನ್ನು ಕಳೆದೆ. ಡ್ರಿಂಕ್, ಪಾರ್ಟಿ, ಮೂಲಕ ನನ್ನನ್ನು ಸಡಿಲಗೊಳಿಸಿಕೊಂಡೆ. ಈ ಮೂಲಕ ಬದುಕುತ್ತಿರುವ ಅನುಭವ ಪಡೆದೆ. ಅದು ನೀವು ಜೈಲಿನಿಂದ ಹೊರಗೆ ಬಂದ ಅನುಭವವಾಗಿತ್ತು. ನಾನು ಜೈಲಿಗೆ ಹೋಗಿಲ್ಲ. ಆದರೆ ಈ ಲಾಕ್ಡೌನ್ ಆ ಅನುಭವವನ್ನು ನನಗೆ ನೀಡಿತ್ತು" ಎಂದು ಆಂಡ್ರೆ ರಸೆಲ್ ಹೇಳಿದ್ದಾರೆ.