ಮೈಸೂರು, ಸೆ. 11: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನ ಪ್ರಮುಖ ತಂಡಗಳಲ್ಲಿ ಒಂದಾದ ಬೆಳಗಾವಿ ಪ್ಯಾಂಥರ್ಸ್ ತಂಡದ ಪ್ರಮುಖ ಆಟಗಾರ ಶ್ರೀನಾಥ್ ಅರವಿಂದ್ ಅವರು ಈ ಬಾರಿಯ ಕೆಪಿಎಲ್ 2017ರ ಬಗ್ಗೆ ನಮ್ಮ ಪ್ರತಿನಿಧಿ ಜತೆ ಮಾತನಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಡಿದ ಅನುಭವಿ ಶ್ರೀನಾಥ್ ಅರವಿಂದ್ ಅವರು ಬೆಳಗಾವಿ ತಂಡದ ನಾಯಕನಾಗಿ, ಆಲ್ರೌಂಡರ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಎಸ್ ಅರವಿಂದ್ ಜತೆಗೆ ಶುಭಾಂಗ್ ಹೆಗ್ಡೆ, ಭಾರದ್ವಾಜ್, ಅವಿನಾಶ್ ಡಿ, ಆನಂದ ದೊಡ್ಡಮನಿ ಮತ್ತು ಕಿಶೋರ್ ಕಾಮತ್ ಬೌಲಿಂಗ್ ವಿಭಾಗದಲ್ಲಿದ್ದಾರೆ. ಯಾರ್ಕರ್ ಹಾಗೂ ಸ್ಲೋ ಬೌಲಿಂಗ್ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ವೈವಿಧ್ಯತೆ ಮೂಲಕ ಬ್ಯಾಟ್ಸ್ ಮನ್ ಗಳನ್ನು ಕಾಡಲು ತಂಡ ಸಜ್ಜಾಗಿದೆ ಎಂದು ಎಸ್ ಅರವಿಂದ್ ಹೇಳಿದರು.
ಬೆಳಗಾವಿ ತಂಡದಲ್ಲಿ ಬಹುತೇಕ ಆಟಗಾರರು ಐಪಿಎಲ್ ಆಡಿದ ಅನುಭವ ಹೊಂದಿದವರಾಗಿದ್ದು, ಬ್ಯಾಟಿಂಗ್ ಕ್ಷೇತ್ರ ಅತ್ಯುತ್ತಮವಾಗಿದ್ದು, ಭಾರತ ತಂಡದಿಂದ ಮರಳಿರುವ ಮನೀಶ್ ಪಾಂಡೆ,ಮೀರ್ ಕನ್ಹಯ್ಯ ಅಬ್ಬಾಸ್, ಶರತ್ ಬಿಆರ್, ಸುನೀಲ್ ಜೈನ್, ರಕ್ಷಿತ್ ಮತ್ತು ಶಶೀಂದ್ರ ಅವರಂತಹ ಪ್ರತಿಭಾನ್ವಿತ ಬ್ಯಾಟ್ಸ್ ಮನ್ ಗಳು ತಂಡದಲ್ಲಿದ್ದಾರೆ. ಸ್ಟುವರ್ಟ್ ಬಿನ್ನಿ, ಅರವಿಂದ್ ಎಸ್, ಗೌತಮ್ ಕೆ ಮತ್ತು ಸ್ಟಾಲಿನ್ ಹೂವರ್ ಅವರು ತಂಡಕ್ಕೆ ಬಲ ತುಂಬಿದ್ದಾರೆ.
ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಿ ಉತ್ತಮವಾಗಿ ಆಡುವುದನ್ನು ಕೆಪಿಎಲ್ ಕಲಿಸುತ್ತದೆ. ಇದರಿಂದ ರಣಜಿಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಮೂರು ಕಡೆ ಬೇರೆ ಬೇರೆ ರೀತಿ ಪಿಚ್ ಗಳು ನಮಗೆ ಸಿಗುವುದರಿಂದ ಕಲಿಯುವುದಕ್ಕೆ ಹೆಚ್ಚಿನ ಅವಕಾಶ ಇಲ್ಲಿದೆ ಎಂದರು.