
ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯ ಅಂತಿಮ ಪಂದ್ಯವನ್ನಾಡಲು ಸಜ್ಜಾಗುತ್ತಿದೆ. ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸಿಸ್ ಪಡೆ ಟೆಸ್ಟ್ ಸರಣಿಯನ್ನು ಈಗಾಗಲೇ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಓಟದಲ್ಲಿ ಆಸ್ಟ್ರೇಲಿಯಾ ತಂಡ ಮುಂದಿದ್ದು ಅಂತಿಮ ಪಂದ್ಯದಲ್ಲಿಯೂ ಗೆದ್ದು ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸುವ ವಿಶ್ವಾಸದಲ್ಲಿದೆ.
ಆಸ್ಟ್ರೇಲಿಯಾ ಸದ್ಯ WTC ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು 14 ಪಂದ್ಯಗಳಲ್ಲಿ 10 ಗೆಲುವು ಸಾಧಿಸಿದೆ. ಜನವರಿ 4ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯ ನಡೆಯಲಿದ್ದು ಅದಾದ ಬಳಿಕ ಭಾರತದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಭಾಗಿಯಾಗಲಿದೆ. ಇದು ಆಸ್ಟ್ರೇಲಿಯಾ ತಂಡಕ್ಕೆ 2021-23ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಯ ಕೊನೆಯ ಟೆಸ್ಟ್ ಸರಣಿಯಾಗಿರಲಿದ್ದು ಈ ಸರಣಿ ಕುತೂಹಲ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಪ್ರತಿಕ್ರಿಯೆ ನೀಡಿದ್ದು ಪ್ರತಿಷ್ಠಿತ ಆಶಸ್ ಸರಣಿಯಲ್ಲಿ ಆಡುವುದಕ್ಕೂ ಮುನ್ನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಡಲು ಉತ್ಸುಕನಾಗಿರುವುದಾಗಿ ಹೇಳಿದ್ದಾರೆ. ಭಾರತದ ವಿರುದ್ಧ ಈ ಪಂದ್ಯ ನಡೆಯುವ ಸಾಧ್ಯತೆಯಿದ್ದು ನಿಜಕ್ಕೂ ಉತ್ಸುಕವಾಗಿದ್ದೇವೆ ಎಂದಿದ್ದಾರೆ.
"ಕಳೆದ ಎರಡು ವರ್ಷಗಳ ಈ ಪ್ರಯಾಣ ಬಹಳ ಸುದೀರ್ಘವಾಗಿದೆ. ಬಹುಶಃ ನಾವು ಲಂಡನ್ನಲ್ಲಿ ಭಾರತದ ವಿರುದ್ಧ ಫೈನಲ್ ಪಂದ್ಯವನ್ನು ಆಡಲಿದ್ದೇವೆ. ತಟಸ್ಥ ಸ್ಥಳದಲ್ಲಿ ಈ ಪಂದ್ಯ ನಡೆಯಲಿದ್ದು ನಿಜಕ್ಕೂ ಇದು ನಮ್ಮ ಉತ್ಸಾಹ ಹೆಚ್ಚಿಸಿದೆ" ಎಂದಿದ್ದಾರೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್.
"ಕಳೆದ ಆವೃತ್ತಿಯಲ್ಲಿ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಸ್ವಲ್ಪದರಲ್ಲಿ ಕಳೆದುಕೊಂಡಿದ್ದೆವು. ಅದು ಯಾವಾಗಲೂ ದೊಡ್ಡ ಗುರಿಯಾಗಿರುತ್ತದೆ. ನಾವು ಬಹಳ ಉತ್ತಮವಾಗಿ ಆಡುತ್ತಾ ಬಂದಿದ್ದು ನಮ್ಮ ಸ್ಥಾನವನ್ನು ನಾವು ಭದ್ರಗೊಳಿಸುತ್ತಾ ಬಂದಿದ್ದೇವೆ. ಇಂಗ್ಲೆಂಡ್ಗೆ ತೆರಳಿ ಆಶಸ್ ಸರಣಿಯಲ್ಲಿ ಭಾಗಿಯಾಗುವುದು ಮಹತ್ವದ ಅಂಶವಾಗಿದೆ. ಆದರೆ ಅದಕ್ಕೂ ಮುನ್ನ ವಿಶ್ವ ಟೆಸ್ಟ್ ಚಾಂಪಿಯನ್ನ ಫೈನಲ್ನಲ್ಲಿ ಆಡುವುದು ಬಹಳ ದೊಡ್ಡ ಸಂಗತಿ" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್.
ಸಿಡ್ನಿಯಲ್ಲಿ ನಡೆಯಲಿದೆ ಅಂತಿಮ ಟೆಸ್ಟ್: ಇನ್ನು ಆಸ್ಟ್ರೇಲಿಯಾ ಹಾಘೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬುಧವಾರದಿಂದ ಆರಂಭವಾಗಲಿದೆ. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ಗಳಿಗೆನೆರವಾಗುವಂಥಾ ಪಿಚ್ ಸಿದ್ಧಪಡಿಸಿದ್ದು ಉಪಖಂಡದ ಪಿಚ್ಗಳ ರೀತಿವರ್ತಿಸಲಿದೆ ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್. ಈ ಸಂದರ್ಭದಲ್ಲಿ ಅವರು ಪಾಕಿಸ್ತಾನದ ವಿರುದ್ಧ 2022ರಲ್ಲಿ ನಡೆದಿದ್ದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಗೆಲುವು ಸಾಧಿಸಿದ್ದೆವು ಆದರೆ ಭಾರತ ವಿರುದ್ಧದ ಸವಾಲು ಬಹಳ ಕಠಿಣವಾಗಿರಲಿದೆ ಎಂದಿದ್ದಾರೆ.