
ನವದೆಹಲಿ, ಜನವರಿ 30: ವಿಶ್ವಕಪ್ ಅಂಡರ್ 19 ಟೂರ್ನಮೆಂಟ್ ನಲ್ಲಿ ಟೀಂ ಇಂಡಿಯಾದ ಯುವ ತಂಡ ಫೈನಲ್ ತಲುಪುತ್ತಿದ್ದಂತೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಹರಿದು ಬಂದಿದೆ. ಇದರ ಜತೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಡೆಯಿಂದ ನಗದು ಬಹುಮಾನ ಕೂಡಾ ಘೋಷಿಸಲಾಗಿದೆ.
ರಾಹುಲ್ ದ್ರಾವಿಡ್ ಮಾರ್ಗದರ್ಶನದ ಅಂಡರ್-19 ಭಾರತ ತಂಡ, ವಿಶ್ವಕಪ್ನಲ್ಲಿ ತೋರಿರುವ ಸಾಧನೆಯನ್ನು ಪರಿಗಣಿಸಿ ಪ್ರೋತ್ಸಾಹ ರೂಪದಲ್ಲಿ ನಗದು ಬಹುಮಾನ ನೀಡಿ, ಸತ್ಕರಿಸಲಾಗುವುದು ಎಂದು ಹಂಗಾಮಿ ಅಧ್ಯಕ್ಷ ಸಿ.ಕೆ ಖನ್ನ ಹೇಳಿದ್ದಾರೆ.
ವಿಶ್ವಕಪ್ ಫೈನಲ್ ತಲುಪಿರುವ ಕಿರಿಯರ ತಂಡ ಮತ್ತು ಕೋಚ್ ರಾಹುಲ್ ದ್ರಾವಿಡ್ಗೆ ನಾನು ಶುಭ ಕೋರುತ್ತೇನೆ. ಭವಿಷ್ಯದ ಕ್ರಿಕೆಟರ್ಗಳನ್ನು ರೂಪಿಸುವಲ್ಲಿ ರಾಹುಲ್ ದ್ರಾವಿಡ್ ಅವರ ಕೊಡುಗೆ ಅಪಾರ. ಅವರ ತರಬೇತಿಯಿಂದಾಗಿಯೇ ಭಾರತ ತಂಡ ವಿಶ್ವಕಪ್ ಸೆಮಿಫೈನಲ್ ತಲುಪಿದೆ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಪ್ರತಿಕ್ರಿಯಿಸಿದ್ದಾರೆ.
ಭಾರತ ಕಿರಿಯರ ತಂಡಕ್ಕೆ ನಗದು ಬಹುಮಾನ ನೀಡಲಾಗುವುದು ಮತ್ತು ಸನ್ಮಾನಿಸಲಾಗುವುದು ಎಂದು ಖನ್ನಾ ತಿಳಿಸಿದರು.
ಪಾಕಿಸ್ತಾನದ ವಿರುದ್ಧ 203 ರನ್ಗಳ ಅಂತರದಿಂದ ಗೆದ್ದ ಪೃಥ್ವಿ ಶಾ ಪಡೆ ಈಗ ಫೆಬ್ರವರಿ 3 ರಂದು ನಡೆಯಲಿರುವ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. (ಪಿಟಿಐ)