ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ಶನಿವಾರ ಪುರುಷರ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಚೇತನ್ ಶರ್ಮಾ ಅವರೇ ಮತ್ತೊಮ್ಮೆ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದು ಶಿವ್ಸುಂದರ್ ದಾಸ್, ಸುಬ್ರೊತೋ ಬ್ಯಾನರ್ಜೀ, ಸಲಿಲ್ ಅಂಕೋಲಾ ಹಾಗೂ ಶ್ರೀಧರನ್ ಶರತ್ ಈ ಆಯ್ಕೆ ಸಮಿತಿಯ ಉಳಿದ ಸದಸ್ಯರಾಗಿದ್ದಾರೆ. ಈ ಆಯ್ಕೆ ಮಂಡಳಿಯ ಮುಖ್ಯಸ್ಥ ಸ್ಥಾನಕ್ಕೆ ಚೇತನ್ ಶರ್ಮಾ ಅವರನ್ನು ಮತ್ತೊಮ್ಮೆ ನೇಮಿಸಲಾಗಿದೆ.
ಬಿಸಿಸಿಐ ಈ ವಿಚಾರವಾಗಿ ಅಧಿಕೃತ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. "ಎಂಎಸ್ ಸುಲಕ್ಷಣ್ ನಾಯ್ಕ್, ಅಶೋಕ್ ಮಲ್ಹೋತ್ರಾ ಹಾಗೂ ಜತಿನ್ ಪರಂಜಪೆ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಆಲ್ ಇಂಡಿಯಾ ಸೀನಿಯರ್ ಸೆಲೆಕ್ಷನ್ ಕಮಿಟಿಗೆ ಸದಸ್ಯರನ್ನು ಆಯ್ಕೆ ಮಾಡುವ ಜವಾಬ್ಧಾರಿ ವಹಿಸಿಕೊಂಡಿತ್ತು. ನವೆಂಬರ್ 18 2022ರಂದು ಅಧಿಕೃತ ವೆಬ್ಸೈಟ್ನ ಜಾಹೀರಾತಿನ ಬಳಿಕ ಈ ಹುದ್ದೆಗೆ 600ಕ್ಕೂ ಅಧಿಕ ಅರ್ಜಿಗಳು ಬಂದಿದ್ದವು"
"ಈ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಸಿಎಸಿ 11 ವ್ಯಕ್ತಿಗಳ ಪಟ್ಟಿಯನ್ನು ಸಿದ್ದಪಡಿಸಿ ಸಂದರ್ಶನ ನಡೆಸಿತ್ತು. ಈ ಸಂದರ್ಶನದ ಆಧಾರದಲ್ಲಿ ಸಿಎಸಿ ಇವರುಗಳನ್ನು ಪುರುಷರ ರಾಷ್ಟ್ರೀಯ ಆಯ್ಕೆ ಸಮಿತಿಗೆ ಆಯ್ಕೆ ಮಾಡಲಾಗಿದೆ" ಎಂದು ಈ ಪ್ರಕಟಣೆಯಲ್ಲಿ ಬಿಸಿಸಿಐ ಮಾಹಿತಿ ನೀಡಿದೆ.
ಕಳೆದ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ನೀಡಿದ ಕಳಪೆ ಪ್ರದರ್ಶನದ ಬಳಿಕ ಬಿಸಿಸಿಐ ಚೇತನ್ ಶರ್ಮಾ ಅವರ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು. ಆದರೆ ಈಗ ಮತ್ತೆ ಅವರೇ ಆ ಸ್ಥಾನಕ್ಕೆ ಆಯ್ಕೆಯಾಗವ ಮೂಲಕ ಬಿಸಿಸಿಐ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ. 2020ರ ಡಿಸೆಂಬರ್ನಲ್ಲಿ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆಯಾಗಿದ್ದರು.