ದ್ರೋಣಾಚಾರ್ಯ ಪ್ರಶಸ್ತಿಗೆ ದ್ರಾವಿಡ್, ಖೇಲ್ ರತ್ನಕ್ಕೆ ಕೊಹ್ಲಿ ಹೆಸರು ಶಿಫಾರಸು
ಕೋಲ್ಕತ್ತ, ಏಪ್ರಿಲ್ 26: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೇಂದ್ರ ಸರ್ಕಾರದಿಂದ ನೀಡಲಾಗುವ ಕ್ರೀಡಾ ಪ್ರಶಸ್ತಿಗಳಿಗೆ ಕ್ರಿಕೆಟಿಗರ ಹೆಸರುಗಳನ್ನು ಶಿಫಾರಸು ಮಾಡಿದೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ. ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಮಾಜಿ ನಾಯಕ, ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
2007ರಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಿಕ ಇದುವರೆಗೂ ಖೇಲ್ ರತ್ನ ಪ್ರಶಸ್ತಿಗೆ ಯಾವ ಕ್ರಿಕೆಟಿಗರ ಹೆಸರನ್ನೂ ಪರಿಗಣಿಸಲಾಗಿಲ್ಲ. ಬಿಸಿಸಿಐ ಪ್ರತಿ ವರ್ಷ ಎಲ್ಲ ವಿಭಾಗಕ್ಕೂ ಕ್ರಿಕೆಟಿಗರ ಹೆಸರುಗಳನ್ನು ನಾಮನಿರ್ದೇಶನ ಮಾಡುತ್ತದೆ.
ಯಶಸ್ವಿ ಆಟಗಾರನ ಅಥವಾ ತಂಡದ ತರಬೇತುದಾರನ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗುತ್ತದೆ. ಆದರೆ ಆಟಗಾರನೊಬ್ಬನ ಯಶಸ್ಸಿಗೆ ತಮ್ಮ ತರಬೇತಿಯೇ ಕಾರಣ ಎಂದು ಅನೇಕ ತರಬೇತುದಾರರು ಪ್ರತಿಪಾದಿಸುತ್ತಿದ್ದರಿಂದ ಬಿಸಿಸಿಐ ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವುದನ್ನು ಸ್ಥಗಿತಗೊಳಿಸಿತ್ತು. 'ಈ ಹಿಂದೆ ನಾಮನಿರ್ದೇಶನ ಮಾಡಲಾಗಿದ್ದ ಮಾಜಿ ಆರಂಭಿಕ ಆಟಗಾರನೊಬ್ಬನ ಕೋಚ್ಗಳು ಆತ ತಮ್ಮ ಬಳಿ ತರಬೇತಿ ಪಡೆದಿದ್ದು ಎಂದು ಹೇಳಿಕೊಂಡಿದ್ದರು. ಈ ಕಾರಣದಿಂದ ಯಾರ ಹೆಸರನ್ನೂ ಸೂಚಿಸುತ್ತಿರಲಿಲ್ಲ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ವಿರಾಟ್ ಕೊಹ್ಲಿ ಅವರ ವೈಯಕ್ತಿಕ ಕೋಚ್ ರಾಜ್ಕುಮಾರ್ ಶರ್ಮಾ ದ್ರೋಣಾಚಾರ್ಯ ಪ್ರಶಸ್ತಿ ಪಡೆದಿದ್ದಾರೆ. ಆದರೆ, ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿರಲಿಲ್ಲ. ಅದು ವೈಯಕ್ತಿಕ ನಾಮನಿರ್ದೇಶನವಾಗಿತ್ತು.

ಯುವಕ್ರಿಕೆಟಿಗರ ದ್ರೋಣಾಚಾರ್ಯ
ಸುದೀರ್ಘ ಕಾಲ ಭಾರತ ತಂಡದಲ್ಲಿ ಆಡಿದರೂ ರಾಹುಲ್ ದ್ರಾವಿಡ್ ಅವರಿಗೆ ವಿಶ್ವಕಪ್ ಗೆಲ್ಲುವ ಅವಕಾಶ ದೊರಕಿರಲಿಲ್ಲ. ಆದರೆ, ಆಟಗಾರನಾಗಿ ಸಿಗದಿದ್ದರೂ, ಕೋಚ್ ಆಗಿ ವಿಶ್ವಕಪ್ ಗೆದ್ದ ಸಂಭ್ರಮ ದ್ರಾವಿಡ್ ಪಾಲಿಗೆ ಒಲಿಯಿತು. ಭಾರತದ ಅಂಡರ್ 19 ತಂಡ ನಿರಾಸೆಯನ್ನು ಮರೆಸುವಂತೆ ಗುರುವಿಗೆ ಪ್ರಸಕ್ತ ಸಾಲಿನಲ್ಲಿ ವಿಶ್ವಕಪ್ ಕಾಣಿಕೆಯನ್ನು ನೀಡಿತು. ಯುವ ಆಟಗಾರರನ್ನು ರೂಪಿಸುತ್ತಿರುವ ರಾಹುಲ್ ದ್ರಾವಿಡ್ ಅವರ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಬಿಸಿಸಿಐ ದ್ರೋಣಾಚಾರ್ಯ ಪ್ರಶಸ್ತಿಗೆ ಅವರ ಹೆಸರನ್ನು ಸೂಚಿಸಿದೆ. ಭಾರತ ಎ ತಂಡಕ್ಕೂ ದ್ರಾವಿಡ್ ಕೋಚ್ ಆಗಿದ್ದಾರೆ.

ಕೊಹ್ಲಿ ಹೆಸರು ಮತ್ತೆ ಪಟ್ಟಿಯಲ್ಲಿ
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಬಿಸಿಸಿಐ ವಿರಾಟ್ ಕೊಹ್ಲಿ ಹೆಸರನ್ನು ಶಿಫಾರಸು ಮಾಡುತ್ತಿರುವುದು ಇದು ಎರಡನೆಯ ಬಾರಿ. 2016ರಲ್ಲಿ ಸಹ ಕೊಹ್ಲಿ ಹೆಸರನ್ನು ಕಳುಹಿಸಲಾಗಿತ್ತು. ಆದರೆ, ಒಲಿಂಪಿಕ್ಸ್ನಲ್ಲಿ ಗಣನೀಯ ಸಾಧನೆ ಮಾಡಿದ್ದ ಪಿವಿ ಸಿಂಧು, ಸಾಕ್ಷಿ ಮಲ್ಲಿಕ್ ಮತ್ತು ದೀಪಾ ಕರ್ಮಾಕರ್ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಸುಮಾರು 11 ವರ್ಷದಿಂದ ಯಾವ ಕ್ರಿಕೆಟಿಗನಿಗೂ ಈ ಪ್ರಶಸ್ತಿ ದೊರೆತಿಲ್ಲ. ಬ್ಯಾಟ್ಸ್ಮನ್ ಆಗಿ ಮತ್ತು ನಾಯಕನಾಗಿ ವಿರಾಟ್ ಕೊಹ್ಲಿ ಉತ್ತಮ ಸಾಧನೆ ಪ್ರದರ್ಶಿಸುತ್ತಿದ್ದಾರೆ.

ಧ್ಯಾನ್ಚಂದ್ ಪ್ರಶಸ್ತಿಗೆ ಗವಾಸ್ಕರ್ ಹೆಸರು
ವಿಶ್ವ ಕ್ರಿಕೆಟ್ನ ಲೆಜೆಂಡ್ಗಳಲ್ಲಿ ಒಬ್ಬರಾದ ಭಾರತ ತಂಡದ ಮಾಜಿ ಆರಂಭಿಕ ಸುನಿಲ್ ಗವಾಸ್ಕರ್ ಅವರ ಹೆಸರನ್ನು ಬಿಸಿಸಿಐ ಧ್ಯಾನ್ಚಂದ್ ಜೀವಮಾನ ಸಾಧನೆ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಕ್ರಿಕೆಟಿಗನಾಗಿ ಮತ್ತು ವೀಕ್ಷಕ ವಿವರಣೆಗಾರನಾಗಿ ಗವಾಸ್ಕರ್ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ನಿವೃತ್ತರಾಗುವ ಮೊದಲು ಅರ್ಜುನ ಪ್ರಶಸ್ತಿ ಪಡೆಯದ ಆಟಗಾರರನ್ನು ಧ್ಯಾನ್ ಚಂದ್ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಆದರೆ, ಗವಾಸ್ಕರ್ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಅರ್ಜುನ ಪ್ರಶಸ್ತಿಗೆ ಶಿಖರ್ ಮತ್ತು ಸ್ಮೃತಿ
ಪ್ರಸಕ್ತ ಸಾಲಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಕ್ರೀಡಾಪಟುಗಳಿಗೆ ನೀಡಲಾಗುವ ಅರ್ಜುನ ಪ್ರಶಸ್ತಿಗೆ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ವುಮನ್ ಸ್ಮೃತಿ ಮಂದಾನ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ. ಟೆಸ್ಟ್, ಏಕದಿನ ಮತ್ತು ಟಿ20 ಮೂರೂ ವಿಭಾಗಗಳಲ್ಲಿ ಶಿಖರ್ ಧವನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಮಿಂಚಿದ್ದರು.

ಕಳೆದ ಬಾರಿ ಇಬ್ಬರಿಗೆ ಖೇಲ್ ರತ್ನ
ಕಳೆದ ಸಾಲಿನಲ್ಲಿ ಪ್ಯಾರಾ ಒಲಿಂಪಿಯನ್ ಅಥ್ಲೀಟ್ ದೇವೇಂದ್ರ ಜಝಾರಿಯಾ ಮತ್ತು ಹಾಕಿ ತಂಡ ಮಾಜಿ ನಾಯಕ ಸರ್ದಾರ್ ಸಿಂಗ್ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಗಿತ್ತು. ಭುಪೇಂದರ್ ಸಿಂಗ್ (ಅಥ್ಲೆಟಿಕ್ಸ್), ಸೈಯದ್ ಶಾಹಿದ್ ಹಕಿಂ (ಫುಟ್ಬಾಲ್) ಮತ್ತು ಸುಮರಾಯ್ ಟೆಟೆ (ಹಾಕಿ) ಅವರ ಜೀವಮಾನ ಸಾಧನೆಗೆ ಧ್ಯಾನ್ಚಂದ್ ಪ್ರಶಸ್ತಿ ಗೌರವ ದೊರೆತಿತ್ತು. ಏಳು ಮಂದಿಗೆ ದ್ರೋಣಾಚಾರ್ಯ ಮತ್ತು ಕ್ರಿಕೆಟಿಗ ಚೇತೇಶ್ವರ ಪೂಜಾರ ಸೇರಿದಂತೆ 17 ಮಂದಿಗೆ ಅರ್ಜುನ ಪ್ರಶಸ್ತಿ ನೀಡಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications