ಪುಣೆ, ಅಕ್ಟೋಬರ್ 25: ಪ್ರವಾಸಿ ನ್ಯೂಜಿಲೆಂಡ್ ಹಾಗೂ ಅತಿಥೇಯ ಭಾರತ ನಡುವಿನ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ವಹಿಸಿರುವ ಪುಣೆ ಮೈದಾನದಿಂದ ಕೆಟ್ಟ ಸುದ್ದಿ ಬಂದಿದೆ.
ಪಿಚ್ ಹಾಳುಗೆಡವಲು ಸಹಕರಿಸಿದ ಆರೋಪದ ಮೇಲೆ ಪಿಚ್ ಕ್ಯೂರೇಟರ್ ಪಾಂಡುರಂಗ್ ಸಲಗಾಂವ್ಕರ್ ಅವರನ್ನು ಮಹಾರಾಷ್ಟ್ರ ಕ್ರಿಕೆಟ್ ಸಮಿತಿ ಅಮಾನತುಗೊಳಿಸಿದೆ.
ಆದರೆ, ಈ ಘಟನೆಯಿಂದ ಎರಡನೇ ಪಂದ್ಯಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ.

63 ಪ್ರಥಮ ದರ್ಜೆ ಪಂದ್ಯಗಳು ಹಾಗೂ 5 ಲಿಸ್ಟ್ ಎ ಪಂದ್ಯಗಳನ್ನಾಡಿದ್ದ ಮಾಜಿ ವೇಗಿ ಸಲಗಾಂವ್ಕರ್ ಅವರು ಕ್ರಮವಾಗಿ 214 ಹಾಗೂ 4 ವಿಕೆಟ್ ಗಳಿಸಿದ್ದಾರೆ. ಪಿಚ್ ಮಾಹಿತಿ ಬಹಿರಂಗವಾಗಲು ನೆರವಾಗಿದ್ದಲ್ಲದೆ, ಪಿಚ್ ಹಾಳುಗೆಡವಿದ ಆರೋಪವನ್ನು ಪಾಂಡುರಂಗ್ ಎದುರಿಸುತ್ತಿದ್ದಾರೆ.
ಎಂಸಿಎ ಆದೇಶದಂತೆ ಪಾಂಡುರಂಗ್ ಅವರು ಮುಂದಿನ ಆದೇಶದ ವರೆಗೂ ಈ ಮೈದಾನಕ್ಕೆ ಕಾಲಿರಿಸುವಂತಿಲ್ಲ. ಎಂಸಿಎ ಸದಸ್ಯತ್ವವನ್ನು ಕಳೆದುಕೊಳ್ಳಲಿದ್ದಾರೆ. ಈ ಘಟನೆ ಬಗ್ಗೆ ಎಂಸಿಎ ಆಂತರಿಕ ತನಿಖೆ ಆರಂಭವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸದಸ್ಯರು ತಕ್ಷಣದಲ್ಲಿ ಪರಿಶೀಲನೆ ನಡೆಸಿ ಪಿಚ್ ಕ್ರಿಕೆಟ್ ಆಡಲು ಯೋಗ್ಯ ಎಂದ ಮೇಲೆ ಇಂದಿನ ಪಂದ್ಯವನ್ನು ನಡೆಸಲು ನಿರ್ಧರಿಸಲಾಗಿದೆ.