'ದೂಸ್ರಾ' ಪ್ರಸಂಗ ವಿವರಿಸಿದ ಮುರಳಿ
ಈ ಬಗ್ಗೆ ವಿವರಿಸಿರುವ ಮುತ್ತಯ್ಯ ಮುರಳೀಧರನ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಜೊತೆಯಾಗಿ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಸಂದರ್ಭದ ಘಟನೆಯನ್ನು ಹಂಚಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಎಂಎಸ್ ಧೋನಿ ನನ್ನ ದೂಸ್ರಾ ಎಸೆತಗಳನ್ನು ಅರ್ಥೈಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿತುಕೊಂಡಿದ್ದರು. "ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾನು ಬೌಲಿಂಗ್ ಮಾಡುತ್ತಿದ್ದಾಗ ಧೋನಿ ದೂಸ್ರಾ ಎಸೆತಗಳನ್ನು ಅರ್ಥೈಸಿಕೊಂಡಿದ್ದರು. ವಿಶ್ವಕಪ್ನಲ್ಲಿ ನನಗೆ ನೆನಪಿದೆ, ಆ ಬಗ್ಗೆ ಯುವರಾಜ್ ಸಿಂಗ್ಗೆ ಯಾವುದೇ ಸುಳಿವಿರಲಿಲ್ಲ. ಆತನೇ ಕ್ರೀಸ್ಗೆ ಇಳಿಯಬೇಕಾಗಿತ್ತು. ಆದರೆ ನನ್ನ ಕಾರಣದಿಂದಾಗಿ ಯುವರಾಜ್ ಸಿಂಗ್ ಬದಲಿಗೆ ಅಂದು ಧೋನಿ ಬ್ಯಾಟಿಂಗ್ಗೆ ಇಳಿದಿದ್ದರು ಎಂದು ಭಾವಿಸುತ್ತೇನೆ" ಎಂದು ಮುತ್ತಯ್ಯ ಮುರಳೀಧರನ್ ವಿವರಿಸಿದ್ದಾರೆ.
ವಿಶ್ವದಾಖಲೆ ವೀರ ಮುರಳೀಧರನ್
ದಿಗ್ಗಜ ಬೌಲರ್ ಮುರಳೀಧರನ್ 2011ರ ವಿಶ್ವಕಪ್ನ ಬಳಿಕ ಏಕದಿನ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದ್ದರು. ಈ ಸಂದರ್ಭದಲ್ಲಿ ಅವರು ಭಾರತ ತಂಡದಲ್ಲಿ ತನ್ನ ದೂಸ್ರಾ ಎಸೆತಗಳನ್ನು ಅರ್ಥ ಮಾಡಿಕೊಂಡಿದ್ದು ಕೆಲವೇ ಆಟಗಾರರು ಮಾತ್ರ ಎಂದಿದ್ದಾರೆ. ಶ್ರೀಲಂಕಾ ವಿಶ್ವ ಕ್ರಿಕೆಟ್ಗೆ ತಮ್ಮ ಸ್ಪಿನ್ ಕೈಚಳಕದ ಮೂಲಕ ದಂಗುಬಡಿಸಿದ್ದ ಮುರಳೀಧರನ್ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 534 ವಿಕೆಟ್ ಪಡೆದಿರುವ ಮುರಳೀಧರನ್ ಟೆಸ್ಟ್ ಕ್ರಿಕೆಟ್ನಲ್ಲಿ ಭರ್ತಿ 800 ವಿಕೆಟ್ ತಮ್ಮದಾಗಿಸಿಕೊಂಡಿದ್ದು ವಿಶ್ವದಾಖಲೆ ಬರೆದಿದ್ದಾರೆ.
ದೂಸ್ರಾ ಮರ್ಮ ಅರಿತವರು
ಇನ್ನು ಇದೇ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾವೆಲ್ಲಾ ಆಟಗಾರರು ತನ್ನ ದೂಸ್ರಾ ಎಸೆತಗಳನ್ನು ಅರ್ಥ ಮಾಡಿಕೊಂಡಿದ್ದರು ಎಂದು ಮುರಳೀಧರನ್ ಹೇಳಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಖಂಡಿತಾ ಅರ್ಥ ಮಾಡಿಕೊಂಡಿದ್ದರು. ಆದರೆ ರಾಹುಲ್ ದ್ರಾವಿಡ್ ಅಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು ಎಂದು ಅನಿಸುತ್ತಿಲ್ಲ. ಗೌತಮ್ ಗಂಭೀರ್ ಹಾಗೂ ವಿವಿಎಸ್ ಲಕ್ಷ್ಮಣ್ ಕೂಡ ಅರ್ಥ ಮಾಡಿಕೊಂಡಿದ್ದರು. ಆದರೆ ಸೆಹ್ವಾಗ್ ಎಲ್ಲಾ ಸಂದರ್ಭದಲ್ಲಿಯೂ ಅರ್ಥ ಮಾಡಿಕೊಂಡಿದ್ದರಾ ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ ಮುರಳೀಧರನ್.