ಡಿಸೆಂಬರ್ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಅಂಧರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ವಿಶ್ವಕಪ್ ಗೆದ್ದಿದೆ. ಭಾರತ ತಂಡ ಮೂರನೇ ಬಾರಿಗೆ ಅಂಧರ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ನಿಗದಿತ 20 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಸುನಿಲ್ ರಮೇಶ್ 63 ಎಸೆತಗಳಲ್ಲಿ 136 ರನ್ ಗಳಿಸಿದರೆ, ಅಜಯ್ ಕುಮಾರ್ ರೆಡ್ಡಿ 50 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಭಾರಿ ಮೊತ್ತ ಕಲೆಹಾಕಲು ಕಾರಣವಾದರು.
ಹಾಲಿ ಚಾಂಪಿಯನ್ಸ್ ತಮ್ಮ ಮೊದಲ ಎರಡು ವಿಕೆಟ್ಗಳನ್ನು ಕೇವಲ 29 ಕ್ಕೆ ಕಳೆದುಕೊಂಡ ನಂತರ ಟೂರ್ನಿಯ ಅಂತಿಮ ಪಂದ್ಯದಲ್ಲಿ ಮೂರನೇ ವಿಕೆಟ್ಗೆ ದಾಖಲೆಯ 247 ರನ್ಗಳ ಜೊತೆಯಾಟ ಆಡಿದರು.
ಕೊಹ್ಲಿ ಬಳಿಕ ಈತನೇ ಭಾರತದ ಬ್ಯಾಟಿಂಗ್ ಅಸ್ತ್ರ ಎಂದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಕೇವಲ 157 ರನ್ಗಳನ್ನು ಮಾತ್ರ ಕಲೆಹಾಕಲು ಸಾಧ್ಯವಾಯಿತು. ಈ ಮೂಲಕ 120 ರನ್ಗಳಿಂದ ಸೋಲನುಭವಿಸಿತು. ಭಾರತದ ಪರವಾಗಿ ಲಲಿತ್ ಮೀನಾ ಮತ್ತು ಅಜಯ್ ಕುಮಾರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಹ್ಯಾಟ್ರಿಕ್ ವಿಶ್ವಕಪ್ ಸಾಧನೆ
ಈ ಮೊದಲು ನಡೆದ 2 ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. 2012ರಲ್ಲಿ ನಡೆದ ಅಂಧರ ಮೊದಲನೇ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸುವ ಮೂಲಕ ಚೊಚ್ಚಲ ವಿಶ್ವಕಪ್ ಗೆಲುವಿನ ಸಾಧನೆ ಮಾಡಿತ್ತು.
ನಂತರ 2017ರಲ್ಲಿ ನಡೆದ ಅಂಧರ ಟಿ20 ವಿಶ್ವಕಪ್ನಲ್ಲಿ ಕೂಡ ಭಾರತ ತಂಡ ಪ್ರಶಸ್ತಿ ಗೆದ್ದಿತ್ತು. 2017ರಲ್ಲಿ ಕೂಡ ಭಾರತ-ಪಾಕಿಸ್ತಾನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಬಾರಿ ಭಾರತ 9 ವಿಕೆಟ್ಗಳಿಂದ ಪಾಕಿಸ್ತಾನವನ್ನು ಮಣಿಸುವ ಮೂಲಕ ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು. ಈ ಎರಡೂ ಫೈನಲ್ ಪಂದ್ಯಗಳು ಕೂಡ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆದಿದ್ದವು.
ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 207 ರನ್ ಗಳ ಭಾರಿ ಅಂತರದಲ್ಲಿ ಸೋಲಿಸುವ ಮೂಲಕ ಫೈನಲ್ಗೆ ಪ್ರವೇಶ ಪಡೆದುಕೊಂಡಿತ್ತು. ಮತ್ತೊಂದು ಸೆಮಿಫೈನಲ್ನಲ್ಲಿ ಶ್ರೀಲಂಕಾ ತಂಡವನ್ನು 64 ರನ್ಗಳಿಂದ ಮಣಿಸಿದ್ದ ಬಾಂಗ್ಲಾದೇಶ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು.