
ಬೆಂಗಳೂರು, ಜುಲೈ 16: ಶ್ರೀಲಂಕಾ ತಂಡದ ನಾಯಕ ದಿನೇಶ್ ಚಂಡಿಮಾಲ್,ಕೋಚ್ ಚಂಡಿಕಾ ಹತುರುಸಿಂಘೇ ಹಾಗೂ ಮ್ಯಾನೇಜರ್ ಅಸಾಂಕ ಗುರುಸಿನ್ಹಾ ಅವರ ಮೇಲೆ ನಿಷೇಧದ ಶಿಕ್ಷೆ ವಿಧಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇಂದು ಆದೇಶ ಹೊರಡಿಸಿದೆ.
ದಿನೇಶ್ ಚಂಡಿಮಾಲ್ ಅವರಿಗೆ ಎರಡು ಟೆಸ್ಟ್ ಹಾಗೂ ನಾಲ್ಕು ಏಕದಿನ ಪಂದ್ಯದಿಂದ ನಿಷೇಧಗೊಳಿಸಿ ಐಸಿಸಿ ನೀತಿ ಸಂಹಿತೆ ಆಯೋಗ ಆದೇಶ ಹೊರಡಿಸಿದೆ.
ಸದ್ಯದ ಆದೇಶದ ಪ್ರಕಾರ ಶ್ರೀಲಂಕಾ ತಂಡದ ಕೋಚ್ ಚಂಡಿಕಾ ಹತುರುಸಿಂಘೇ ಹಾಗೂ ಮ್ಯಾನೇಜರ್ ಅಸಾಂಕ ಗುರುಸಿನ್ಹಾ ಸಹ ನಿಷೇಧಕ್ಕೆ ಒಳಗಾಗಿದ್ದಾರೆ.
ನಿಷೇಧದಿಂದಾಗಿ ದಿನೇಶ್ ಚಂಡಿಮಾಲ್ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಹೊರಗುಳಿಯಬೇಕಾಗಿದೆ
ಈ ವರ್ಷಾರಂಭದಲ್ಲಿ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಮೈದಾನ ಆಗಮಿಸಲು ನಿರಾಕರಿಸಿದ್ದರು. ಬಾಲ್ ಟ್ಯಾಂಪರಿಂಗ್ ವಿಷಯವನ್ನು ಮುಂದಿಟ್ಟುಕೊಂಡು ಲಂಕಾ ನಾಯಕ ಮೈದಾನ ಪ್ರವೇಶಿಸದೇ ಐಸಿಸಿಯ ನಿಯಮ ಮುರಿದಿದ್ದರು.
ಜುಲೈ 11ರಂದು ಈ ಪ್ರಕರಣದ ವಿಚಾರಣೆ ಮುಗಿಸಿದ್ದ ಐಸಿಸಿಯ ನೀತಿ ಸಂಹಿತೆ ಆಯೋಗ ತೀರ್ಪನ್ನು ಸೋಮವಾರಕ್ಕೆ ಮುಂದೂಡಿತ್ತು. ಸದ್ಯ ತೀರ್ಪು ಹೊರಬಿದ್ದಿದ್ದು, ಚಂಡಿಮಾಲ್ ಸೇರಿದಂತೆ ಮೂವರನ್ನು ಎರಡು ಟೆಸ್ಟ್, ನಾಲ್ಕು ಏಕದಿನ ಪಂದ್ಯ ಬ್ಯಾನ್ ಮಾಡಿ ಆದೇಶ ನೀಡಿದೆ.