ಲಂಡನ್: ಜೋ ರೂಟ್ ಪಡೆ ಮುಂಬರಲಿರುವ ಆ್ಯಷಸ್ ಸರಣಿಯ ಕಡೆಗೆ ಹೆಚ್ಚು ಗಮನ ಹರಿಸಿ ಸದ್ಯ ನಡೆಯುತ್ತಿರುವ ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಕಡೆ ಅಲಕ್ಷ್ಯ ತೋರಿತು. ಇದೇ ಕಾರಣಕ್ಕೆ ಭಾರತ ವಿರುದ್ಧ ಇಂಗ್ಲೆಂಡ್ ಸರಣಿ ಹಿನ್ನಡೆಯಲ್ಲಿದೆ ಎಂದು ಭಾರತದ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಬಳಿಕ ಗವಾಸ್ಕರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮಾಷೆ ರೀತಿಯಲ್ಲಿ ಜಸ್ಪ್ರೀತ್ ಬೂಮ್ರಾಗೆ ಥ್ಯಾಂಕ್ಸ್ ಹೇಳಿದ 'ಜಾರ್ವೋ 69'
ಲಂಡನ್ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 157 ರನ್ಗಳ ಸೋಲನುಭವಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-1ರ ಹಿನ್ನಡೆಯಲ್ಲಿದೆ. ಇದೇ ಕಾರಣಕ್ಕೆ ಗವಾಸ್ಕರ್ ಈ ಹೇಳಿಕೆ ನೀಡಿದ್ದಾರೆ.
ಗೆಲ್ಲುವ ಪಂದ್ಯವನ್ನು ಸೋತಿದ್ದ ಇಂಗ್ಲೆಂಡ್
ಆತಿಥೇಯ ಇಂಗ್ಲೆಂಡ್ ತಂಡ ಗೆಲ್ಲುವ ಎರಡು ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿದೆ. ಲಂಡನ್ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೂಡ ಆರಂಭಿಕ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 27 ರನ್ ಮುನ್ನಡೆಯಲ್ಲಿತ್ತು. ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್ನಲ್ಲಿ 99 ರನ್ ಮುನ್ನಡೆ ಸಾಧಿಸಿತ್ತು. ಆದರೆ ಆ ಬಳಿಕ ಭಾರತ ಭರ್ಜರಿ ಕಮ್ಬ್ಯಾಕ್ ಮಾಡಿತ್ತು. ದ್ವಿತೀಯ ಟೆಸ್ಟ್ನಲ್ಲಿ 151 ರನ್ ಜಯ ಗಳಿಸಿದ್ದ ವಿರಾಟ್ ಕೊಹ್ಲಿ ಪಡೆ ನಾಲ್ಕನೇ ಟೆಸ್ಟ್ನಲ್ಲೂ 157 ರನ್ ಜಯ ಗಳಿಸುವುದರೊಂದಿಗೆ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇದರಲ್ಲಿ ತೃತೀಯ ಟೆಸ್ಟ್ ಪಂದ್ಯದಲ್ಲಿ ಮಾತ್ರ ಇಂಗ್ಲೆಂಡ್ ಇನ್ನಿಂಗ್ಸ್ ಸಹಿತ 76 ರನ್ ಗೆಲುವನ್ನಾಚರಿಸಿ ಭಾರತಕ್ಕೆ ಮುಖಭಂಗ ತಂದಿತ್ತು. ಇದರೊಂದಿಗೆ ಟೀಮ್ ಇಂಡಿಯಾ ತಿರುಗಿ ಬೀಳುವ ವಿಚಾರದಲ್ಲಿ ವಿಶ್ವದಲ್ಲೇ ಅತೀ ಬಲಿಷ್ಠ ತಂಡವೆನ್ನುವುದನ್ನು ಭಾರತ ಜಗತ್ತಿಗೆ ಸಾರಿ ಹೇಳಿದೆ.
ಟೆಸ್ಟ್ ಶ್ರೇಯಾಂಕ ಪಟ್ಟಿ: 9ನೇ ಸ್ಥಾನಕ್ಕೇರಿದ ಬೂಮ್ರಾ; ರೋಹಿತ್, ಕೊಹ್ಲಿ ಅಂಕದಲ್ಲಿಯೂ ಏರಿಕೆ
ತಪ್ಪಿಗಾಗಿ ಇಂಗ್ಲೆಂಡ್ ದೊಡ್ಡ ಬೆಲೆ ತೆತ್ತಿದೆ
ಆಜ್ತಕ್ ಜೊತೆ ಮಾತನಾಡಿದ ಮಾತನಾಡಿದ ಸುನಿಲ್ ಗವಾಸ್ಕರ್, "ಮ್ಯಾನ್ಚೆಸ್ಟರ್ನಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯದ ವೇಳೆ ಒತ್ತಡವೆಲ್ಲಾ ಜೋ ರೂಟ್ ಮೇಲಿರುತ್ತದೆ. ಯಾಕೆಂದರೆ ಭಾರತ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿ ಸಾಗುತ್ತಿರುವುದರಿಂದ ಭಾರತಕ್ಕೆ ಮಾನಸಿಕ ಅನುಕೂಲ ಹೆಚ್ಚಿರುತ್ತದೆ. ಇಂಗ್ಲೆಂಡ್ ತಂಡ ಮತ್ತು ಆಂಗ್ಲ ಮಾಧ್ಯಮಗಳು ಮಾಡಿದ ಮತ್ತೊಂದು ದೊಡ್ಡ ತಪ್ಪೆಂದರೆ ಅವರು ಈ ಹೊತ್ತಿನಲ್ಲಿ ಆ್ಯಷಸ್ ಸರಣಿಯ ಬಗ್ಗೆ ಮಾತನಾಡಿದರು. ಆ ಸರಣಿಯಲ್ಲಿ ಇಂಗ್ಲೆಂಡ್ ಹೇಗೆ ಆಡುತ್ತದೆ ಎಂದೆಲ್ಲಾ ಮಾತನಾಡುತ್ತಿದ್ದರು. ಅವರು ಅದರ ಬದಲು ಭಾರತ ವಿರುದ್ಧದ ಪ್ರಸ್ತುತ ಸವಾಲಿನ ಬಗ್ಗೆ ಗಮನ ಹರಿಸಬೇಕಿತ್ತು. ಇಂಗ್ಲೆಂಡ್ ತಂಡ ಭಾರತವನ್ನು ಹಗುರವಾಗಿ ಪರಿಗಣಿಸಿತು. ಇದರಿಂದಾಗಿ ಇಂಗ್ಲೆಂಡ್ ದೊಡ್ಡ ಮಟ್ಟಿನ ಬೆಲೆ ತೆತ್ತಿದೆ. ಯಾಕೆಂದರೆ ಈಗಿನ ಸ್ಥಿತಿಯಲ್ಲಿ ಇಂಗ್ಲೆಂಡ್ ಸರಣಿ ಗೆಲ್ಲುವುದು ಇನ್ನು ಸಾಧ್ಯವಿಲ್ಲ," ಎಂದಿದ್ದಾರೆ.
ಐದನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಆಡ್ತಾರಾ?
ಸೆಪ್ಟೆಂಬರ್ 10ರಂದು ಮ್ಯಾನ್ಚೆಸ್ಟರ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಐದನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತದ ಅನುಭವಿ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಆಡೋದು ಅನುಮಾನ ಮೂಡಿಸಿದೆ. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅದರಲ್ಲೂ ಭಾರತದ ದ್ವಿತೀಯ ಇನ್ನಿಂಗ್ಸ್ ರೋಹಿತ್ ಶರ್ಮಾ ಶತಕ ಬಾರಿಸಿ ಗಮನ ಸೆಳೆದಿದ್ದರಾದರೂ ಶರ್ಮಾಗೆ ಗಾಯಗಳೂ ಆಗಿದ್ದವು. ಆಂಗ್ಲ ವೇಗಿಗಳ ಮಾರಕ ದಾಳಿಯಿಂದಾಗಿ ಶರ್ಮಾ ತೊಡೆ ಭಾಗದಲ್ಲಿ ಚೆಂಡು ಬಡಿದ ಗುರುತುಗಳು ಮೂಡಿದ್ದವು. ಹೀಗಾಗಿ ಸೆಪ್ಟೆಂಬರ್ 10ರಂದು ಮ್ಯಾನ್ಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಶರ್ಮಾ ಆಡುತ್ತಾರೋ ಇಲ್ಲವೋ ಎನ್ನುವುದು ಅನುಮಾನ ಮೂಡಿಸಿದೆ. ಈ ಬಗ್ಗೆ ಶರ್ಮಾ ಸಣ್ಣ ಸುಳಿವು ನೀಡಿದ್ದಾರೆ. "ಈ ಕೂಡಲೇ ಗಾಯವನ್ನು ಪರಿಶೀಲಿಸುತ್ತೇವೆ. ಅದರ ಸ್ಥಿತಿ ಹೇಗಿದೆ ಎಂದು ಕ್ಷಣ ಕ್ಷಣಕ್ಕೂ ಗಮನ ಹರಿಸುತ್ತಿರುತ್ತೇವೆ ಎಂದು ಫಿಸಿಯೋ ಸಂದೇಶ ನೀಡಿದ್ದಾರೆ. ಆದರೆ ಗಾಯ ಅಂಥ ಗಂಭೀರ ಏನೂ ಇಲ್ಲ. ಬೇಗ ಗುಣವಾಗುತ್ತದೆ ಎಂದು ನನಗನ್ನಿಸುತ್ತದೆ," ಎಂದು ರೋಹಿತ್ ಹೇಳಿದ್ದಾರೆ. ಇದರರ್ಥ ಐದು ಪಂದ್ಯಗಳ ಟೆಸ್ಟ್ ಸರಣಿ ವಿಜೇತರನ್ನು ನಿರ್ಧರಿಸಲು ನಿರ್ಣಾಯಕವೆನಿಸಿರುವ ಐದನೇ ಟೆಸ್ಟ್ ಪಂದ್ಯದ ವೇಳೆ ಶರ್ಮಾ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಶರ್ಮಾ ಆ ಪಂದ್ಯದಲ್ಲಿ ಆಡೋದು ಬಹುತೇಕ ಖಚಿತ.