
ನವದೆಹಲಿ, ಫೆಬ್ರವರಿ 11: ದೆಹಲಿ ಕ್ರಿಕೆಟ್ ಅಸೋಸಿಯೇಷನ್(ಡಿಡಿಸಿಎ) ನ ಆಯ್ಕೆ ಸಮಿತಿಯ ಚೇರ್ಮನ್, ಟೀಂ ಇಂಡಿಯಾದ ಮಾಜಿ ವೇಗಿ ಅಮಿತ್ ಭಂಡಾರಿ ಅವರ ಮೇಲೆ ಅಪರಿಚಿತ ಗೂಂಡಾಗಳು ಹಲ್ಲೆ ಮಾಡಿದ ಘಟನೆ ಸೋಮವಾರ(ಫೆಬ್ರವರಿ 11)ದಂದು ನಡೆದಿದೆ. ಅಂಡರ್ 23 ತಂಡದ ಆಯ್ಕೆ ಟ್ರಯಲ್ಸ್ ಗಾಗಿ ಸೈಂಟ್ ಸ್ಟೀಫನ್ ಮೈದಾನದಲ್ಲಿದ್ದ ಅಮಿತ್ ಅವರ ಮೇಲೆ ಹಾಕಿ ಸ್ಟಿಕ್ ಗಳನ್ನು ಬಳಸಿ ಹಲ್ಲೆ ಮಾಡಲಾಗಿದೆ.
ಭಂಡಾರಿ ಅವರ ತಲೆ ಹಾಗೂ ಕಿವಿಗೆ ತೀವ್ರವಾಗಿ ಗಾಯವಾಗಿದ್ದು, ಕುಸಿದು ಬಿದ್ದರು. ಅಸ್ವಸ್ಥರಾಗಿದ್ದ ಭಂಡಾರಿ ಅವರನ್ನು ಸುಖ್ವಿಂದರ್ ಸಿಂಗ್ ಅವರು ಸಂತ ಪರಮಾನಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಮಿತ್ ಅವರ ತಲೆ, ಕಾಲಿಗೆ ಗಾಯವಾಗಿದ್ದು, ಏಳು ಹೊಲಿಗೆ ಹಾಕಲಾಗಿದೆ.
ಈ ಘಟನೆಗೆ ಕಾರಣವಾದವರಿಗೆ ಶಿಕ್ಷೆಯಾಗಬೇಕಿದೆ. ಅಂಡರ್ 23 ತಂಡದ ಸಂಭಾವ್ಯ ಪಟ್ಟಿಯಲ್ಲಿ ಒಬ್ಬ ಆಟಗಾರನ ಹೆಸರು ಸೇರ್ಪಡೆಯಾಗಿರಲಿಲ್ಲ. ಈ ಘಟನೆ ಅದೇ ಕಾರಣ ಎಂಬ ಸುದ್ದಿಯಿದೆ. ಎಲ್ಲದರ ಬಗ್ಗೆ ಡಿಡಿಸಿಎ ಗಮನ ಹರಿಸುತ್ತಿದ್ದು, ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ದೆಹಲಿ ಪೊಲೀಸ್ ಆಯುಕ್ತ ಅಮುಲ್ಯ ಪಟ್ನಾಯಕ್ ಜತೆ ಕೂಡಾ ಮಾತನಾಡಿದ್ದೇನೆ ಎಂದು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮ ಹೇಳಿದ್ದಾರೆ.
ದೆಹಲಿಯ ಸೀನಿಯರ್ ಹಾಗೂ ಅಂಡರ್ 23 ತಂಡದ ಮ್ಯಾನೇಜರ್ ಶಂಕರ್ ಸೈನಿ ಅವರು ಘಟನೆ ಬಗ್ಗೆ ವಿವರಿಸಿ, ನಾವು ಕೆಲವರು ಮಧ್ಯಾಹ್ನ ಊಟ ಮಾಡುವ ವೇಳೆ, ಹಿರಿಯ ತಂಡದ ಕೋಚ್ ಮಿಥುನ್ ಮನ್ಹಾಸ್, ಅಮಿತ್ ಭಂಡಾರಿ ಅವರು ಟ್ರಯಲ್ ನೋಡುತ್ತಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು ಅಮಿತ್ ಬಳಿ ಬಂದು ಮಾತನಾಡತೊಡಗಿದರು. ಮಾತಿನ ಚಕಮಕಿ ಹೆಚ್ಚಾಗಿ ಬೆದರಿಕೆ ಹಾಕಿ ಅಲ್ಲಿಂದ ತೆರಳಿದರು.
ಕೆಲ ನಿಮಿಷದಲ್ಲೇ ಹತ್ತು ಹದಿನೈದು ಮಂದಿ ಸೈಕಲ್ ಚೈನ್, ಹಾಕಿ ಸ್ಟಿಕ್ ಹಿಡಿದುಕೊಂಡು ಬಂದ ಗುಂಪೊಂದು ಏಕಾಏಕಿ ಅಮಿತ್ ಅವರ ಮೇಲೆ ಹಲ್ಲೆ ಮಾಡತೊಡಗಿತು. ಗದ್ದಲ ಕೇಳಿ ನಾನು ಟೆಂಟ್ ನಿಂದ ಹೊರಬಂದೆ. ಈ ವೇಳೆಗೆ ಇತರೆ ಆಟಗಾರರು ಅಮಿತ್ ಬಳಿ ಬಂದರು. ಆದರೆ, ಯಾರಾದರೂ ಹತ್ತಿರ ಬಂದರೆ ಕೊಂದು ಹಾಕುತ್ತೇವೆ ಎಂದು ಬೆದರಿಸಿದರು. ನಾವು ಹೋಗಿ ತಡೆಯುವಷ್ಟರಲ್ಲಿ ಅಮಿತ್ ಗೆ ತೀವ್ರವಾಗಿ ಪೆಟ್ಟು ಕೊಟ್ಟಿದ್ದರು ಎಂದು ಸೈನಿ ಹೇಳಿದ್ದಾರೆ.