ಟೀಮ್ ಇಂಡಿಯಾ ತಪ್ಪಿನಿಂದ ಬುದ್ಧಿ ಕಲಿಯಲ್ಲ
ಟಿ20 ಸರಣಿಯ ಮುಕ್ತಾಯದ ಬಳಿಕ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾ ತನ್ನ ತಪ್ಪಿನಿಂದ ಪಾಠವನ್ನು ಕಲಿಯುವುದೇ ಇಲ್ಲ ಎಂದಿದ್ದಾರೆ. ಸಂಜು ಸ್ಯಾಮ್ಸನ್ಗೆ ಅವಕಾಶ ನೀಡದಿರುವ ಬಗ್ಗೆ ದೊಡ್ಡ ಗಣೇಶ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮೇಲೆ ಕಿಡಿಕಾರಿದ್ದಾರೆ.
ಸಂಜುಗೆ ಅವಕಾಶ ನೀಡದಿರುವದಕ್ಕೆ ಕೆಂಡ
ಟೀಮ್ ಇಂಡಿಯಾದ ಅಂತಿಮ ಪಂದ್ಯದಲ್ಲಿಯೂ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸಿ ಶ್ರೇಯಸ್ ಐಯ್ಯರ್ಗೆ ಅವಕಾಶ ನೀಡಿತ್ತು. ಈ ವಿಚಾರವಾಗಿ ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ. "ಸಂಜು ಸ್ಯಾಮ್ಸನ್ ಬದಲಿಗೆ ಶ್ರೇಯಸ್ ಐಯ್ಯರ್ ಅವರನ್ನು ಆಯ್ಕೆ ಮಾಡುವ ಮೂಲಕ ಭಾರತ ತಂಡದ ಥಿಂಕ್ ಟ್ಯಾಂಕ್ ನಾವು ತಪ್ಪುಗಳಿಂದ ಬುದ್ದಿ ಕಲಿಯಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಟಿ20 ಮಾದರಿಯಲ್ಲಿ ತಮ್ಮ ಅಪ್ರೋಚ್ ಯಾವತ್ತೂ ಬದಲಾಯಿಸುವುದಿಲ್ಲ" ಎಂದು ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ.
ಎರಡು ಪಂದ್ಯದಲ್ಲಿಯೂ ಐಯ್ಯರ್ ಸಂಪೂರ್ಣ ವೈಫಲ್ಯ
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಯುವ ಬಳಗದೊಂದಿಗೆ ಕಣಕ್ಕಿಳಿದಿತ್ತು. ಆದರೆ ಟೀಮ್ ಇಂಡಿಯಾ ಪರವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಬಹುತೇಕರು ವೈಫಲ್ಯ ಅನುಭವಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಮಾತ್ರವೇ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದರು. ಆರಂಭಿಕರಾದ ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಇಬ್ಬರು ಕೂಡ ವೈಫಲ್ಯ ಕಂಡರೆ ಶ್ರೇಯಸ್ ಐಯ್ಯರ್ ಎರಡಯ ಪಂದ್ಯದಲ್ಲಿಯೂ ಕೆಟ್ಟ ಪ್ರದರ್ಶನ ನೀಡಿದರು. ಹೀಗಾಗಿ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ಜೋರಾಗಿದೆ.
ಏಕದಿನ ಸರಣಿ ಮೇಲೆ ಚಿತ್ತ
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ20 ಸರಣಿ ಮುಕ್ತಾಯವಾದ ಬಳಿಕ ಇದೀಗ ಏಕದಿನ ಸರಣಿಯ ಮೇಲೆ ಚಿತ್ತ ನೆಟ್ಟಿದೆ. ಮೂರು ಪಂದ್ಯಗಳ ಟಿ20 ಸರಣಿ ಇದಾಗಿದ್ದು ನವೆಂಬರ್ 25ರಿಂದ ಈ ಸರಣಿ ಆರಂಭವಾಗಲಿದೆ. ನವೆಂಬರ್ 30ರಂದು ಅಂತಿಮ ಪಂದ್ಯ ನಡೆಯಲಿದೆ. ಈ ಸರಣಿಗೆ ಟೀಮ್ ಇಂಡಿಯಾ ಶಿಖರ್ ಧವನ್ ನೇತೃತ್ವದಲ್ಲಿ ಕಣಕ್ಕಿಳಿಯಲಿದ್ದು ಪ್ರತಿಭಾನ್ವಿತ ಆಟಗಾರರ ಪಡೆಯೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.
ಭಾರತ: ಶಿಖರ್ ಧವನ್ (ನಾಯಕ), ರಿಷಬ್ ಪಂತ್ (ಉಪ ನಾಯಕ & ವಿಕೆಟ್ ಕೀಪರ್), ಶುಬ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಅರ್ಶ್ದೀಪ್ ಸಿಂಗ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.