ವಿಂಡೀಸ್ ಸರಣಿಗಿಲ್ಲ ಕೊಹ್ಲಿ
ಭಾರತ ಇಂಗ್ಲೆಂಡ್ ಪ್ರವಾಸ ಮುಕ್ತಾಯದ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ವೈಟ್ಬಾಲ್ ಸರಣಿಯಲ್ಲಿ ಭಾಗಿಯಾಗಲಿದೆ. ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳ ಸರಣಿಗೆ ಈಗಾಗಲೇ ಸ್ಕ್ವಾಡ್ ಘೋಷಣೆ ಮಾಡಲಾಗಿದೆ. ಆದರೆ ವಿರಾಟ್ ಕೊಹ್ಲಿ ಈ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ವಿರಾಟ್ ಕೊಹ್ಲಿ ಈ ಸರಣಿಗೆ ಆಯ್ಕೆಯಾಗದಿರಲು ಕಾರಣವೇನೆಂದು ಬಿಸಿಸಿಐ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಪಿಟಿಐ ಸುದ್ದಿ ಸಂಸ್ಥೆ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ ಎಂದು ವರದಿ ಮಾಡಿದೆ. ವಿರಾಟ್ ಕೊಹ್ಲಿಯನ್ನು ವಿಂಡಿಸ್ ಸರಣಿಯಿಂದ ಬೇಕೆಂದೇ ಕೈ ಬಿಡಲಾಗಿದೆ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಈ ವಿಚಾರವಾಗಿ ಪಾಕಿಸ್ತಾನ್ ಮಾಜಿ ನಾಯಕ ರಶೀದ್ ಲತೀಫ್ ಪ್ರತಿಕ್ರಿಯೆ ನೀಡಿದ್ದಾರೆ.
ಅಂಥಾ ಆಯ್ಕೆಗಾರರು ಭಾರತದಲ್ಲಿಲ್ಲ
ವಿರಾಟ್ ಕೊಹ್ಲಿಯನ್ನು ಕಳಪೆ ಪ್ರದರ್ಶನದ ಕಾರಣಕ್ಕೆ ಯಾವುದೇ ಆಯ್ಕೆಗಾರರು ಕೂಡ ತಂಡದಿಂದ ಕೈಬಿಡುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ರಶೀದ್ ಲತೀಫ್. "ಭಾರತದಲ್ಲಿ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡುವ ಯಾವುದೇ ಆಯ್ಕೆಗಾರರು ಹುಟ್ಟಿಲ್ಲ" ಎಂಬ ಹೇಳಿಕೆ ನೀಡಿದ್ದಾರೆ ರಶೀದ್ ಲತೀಪ್. ಯೂಟ್ಯೂಬ್ ಚಾನೆಲ್ವೊಂದರಲ್ಲಿ ವಿರಾಟ್ ಕೊಹ್ಲಿಯನ್ನು ತಂಡದಿಂದ ಹೊರಗಿಡಬೇಕಾ ಎಂಬ ಎಂದು ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ ರಶೀದ್ ಲತೀಫ್.
ಕೊಹ್ಲಿಗೆ ಬೆಂಬಲವಾಗಿ ನಿಂತ ನಾಯಕ ರೋಹಿತ್
ಇನ್ನು ವಿರಾಟ್ ಕೊಹ್ಲಿ ವೈಫಲ್ಯವನ್ನು ಅನುಭವಿಸುತ್ತಿದ್ದರೆ ನಾಯಕ ರೋಹಿತ್ ಶರ್ಮಾ ಮಾತ್ರ ಕೊಹ್ಲಿಗೆ ಬಲವಾಗಿ ಬೆಂಬಲವಾಗಿ ನಿಂತಿದ್ದಾರೆ. ಎರಡನೇ ಏಕದಿನ ಪಂದ್ಯದ ಮುಕ್ತಾಯದ ಬಳಿಕವೂ ರೋಹಿತ್ ಶರ್ಮಾಗೆ ಈ ವಿಚಾರವಾಗಿ ಪ್ರಶ್ನೆ ಎದುರಾಯಿತು. ಈ ಸಂದರ್ಭದಲ್ಲಿ ರೋಹಿತ್ ಆಟಗಾರರು ಫಾರ್ಮ್ ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಆತನ ಆಟದಲ್ಲಿರುವ ಗುಣಮಟ್ಟ ಕಡಿಮೆಯಾಗಲಾರದು" ಎಂದು ಹೇಳಿಕೆ ನೀಡಿದ್ದಾರೆ.
ಈ ಸಮಯ ಸರಿದು ಹೋಗಲಿದೆ ಎಂದ ಪಾಕ್ ನಾಯಕ
ಇನ್ನು ಎರಡನೇ ಏಕದಿನ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದ ಬಳಿಕ ಪಾಕಿಸ್ತಾನದ ನಾಯಕ ಬಾಬರ್ ಅಜಂ ಟ್ವೀಟ್ನಲ್ಲಿ ವಿಶೇಷ ಸಂದೇಷವೊಂದನ್ನು ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಜೊತೆಗಿನ ಫೋಟೋ ಹಂಚಿಕೊಂಡಿರುವ ಬಾಬರ್ ಅಜಂ "ಈ ಸಮಯವೂ ಸರಿದು ಹೋಗಲಿದೆ" ಎಂದು ಬರೆದುಕೊಂಡಿದ್ದಾರೆ. ಈ ಮುಲಕ ವಿರಾಟ್ ಕೊಹ್ಲಿಗೆ ಬೆಂಬಲ ಸೂಚಿಸಿದ್ದಾರೆ.