ದೇಶದಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಹೊಸ ಕೊರೊನಾ ವೈರಸ್ ಪ್ರಕರಣ ಹಾಗೂ ಅದಕ್ಕೆ ಬಲಿಯಾಗುತ್ತಿರುವ ಪ್ರಕರಣಗಳಲ್ಲಿ ನಿತ್ಯವೂ ಭಾರತ ಹೊಸ ದಾಖಲೆಯನ್ನು ಬರೆಯುತ್ತಿದೆ. ಈ ಸಾಂಕ್ರಾಮಿಕ ಕಾಯಿಲೆಗೆ ರಾಜಸ್ಥಾನದ ಮಾಜಿ ಕ್ರಿಕೆಟಿಗ ರಣಜಿ ಟ್ರೋಫಿ ವಿಜೇತ ತಂಡದ ಸದಸ್ಯ ವಿವೇಕ್ ಯಾದವ್ ಬಲಿಯಾಗಿದ್ದಾರೆ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು ನೋವು ವ್ಯಕ್ತಪಡಿಸಿದ್ದಾರೆ. "ರಾಜಸ್ಥಾನದ ರಣಜಿ ಆಟಗಾರ ಹಾಗೂ ನನ್ನ ಆತ್ಮೀಯ ಸ್ನೇಹಿತ ವಿವೇಕ್ ಯಾದವ್ ಇನ್ನಿಲ್ಲ. ಅವರ ಕುಟುಂಬದ ಪರವಾಗಿ ನನ್ನ ಪ್ರಾರ್ಥನೆಗಳು" ಎಂದು ಆಕಾಶ ಚೋಪ್ರ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಐಪಿಎಲ್ ಸ್ಥಗಿತಕ್ಕೆ ಅಸಲಿ ಕಾರಣ ಮತ್ತು ಪುನಾರಂಭದ ಬಗ್ಗೆ ಗಂಗೂಲಿ ಸುಳಿವು
18 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ವಿವೇಕ್ ಯಾದವ್ ಆಡಿದ ಅನುಭವ ಹೊಂದಿದ್ದಾರೆ. ಇದರಲ್ಲಿ 57 ವಿಕೆಟ್ಗಳನ್ನು ಅವರು ಪಡೆದುಕೊಂಡಿದ್ದಾರೆ. 2010-11ರ ರಣಜಿ ಟ್ರೋಫಿ ಫೈನಲ್ನಲ್ಲಿ ಆಡಿದ್ದು ಕ್ರಿಕೆಟ್ನಲ್ಲಿ ವಿವೇಕ್ ಯಾದವ್ ಕಂಡ ಅತ್ಯುನ್ನತ ಕ್ಷಣಗಳಾಗಿದೆ.
ವಿವೇಕ್ ಯಾದವ್ 30ರ ಹರೆಯಕ್ಕೂ ಮುನ್ನವೇ ಸ್ಪರ್ಧಾತ್ಮಕ ಕ್ರಿಕೆಟ್ನ ಕೊನೆಯ ಪಂದ್ಯವನ್ನು ಆಡಿದ್ದರು. ಕ್ಯಾನ್ಸರ್ಗೆ ತುತ್ತಾಗಿದ್ದ ಯಾದವ್ ಕಿಮೋ ಥೆರಫಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಯಾದವ್ ಕೊರೊನಾ ವೈರಸ್ಗೆ ತುತ್ತಾಗಿರುವುದು ಸ್ಪಷ್ಟವಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿವೇಕ್ ಯಾದವ್ ಆಸ್ಪತ್ರೆಯಲ್ಲಿ ಪ್ರಾಣಕಳೆದುಕೊಂಡಿದ್ದಾರೆ.