
ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಮತ್ತು ಹಾಲಿ ಸಂಸದ ಗೌತಮ್ ಗಂಭೀರ್ ಅವರ ಮಾನವೀಯ ಕೆಲಸ ಈಗ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಅನಾರೋಗ್ಯದಿಂದ ಮೃತಪಟ್ಟ ಮನೆಕೆಲಸಾಕೆಯ ಅಂತ್ಯಸಂಸ್ಕಾರವನ್ನು ಸ್ವತಃ ಗೌತಮ್ ಗಂಭೀರ್ ಮುಂದೆ ನಿಂತು ಮಾಡಿಸಿದ್ದಾರೆ.
ಗೌತಮ್ ಗಂಭೀರ್ ಅವರ ದೆಹಲಿ ನಿವಾಸದಲ್ಲಿ ಕಳೆದ 7 ವರ್ಷಳಿಂದ ಸರಸ್ವತಿ ಪತ್ರ ಎಂಬವರು ಕೆಲವನ್ನು ಮಾಡುತ್ತಿದ್ದರು. ಮೂಲತಃ ಜೈಪುರದವರಾದ ಸರಸ್ವತಿ ಪತ್ರ ಇತ್ತೀಚೆಗೆ ಅನಾರೋಗ್ಯಕ್ಕೆ ಈಡಾದರು. ರಕ್ತದೊತ್ತಡ ಮತ್ತು ಶುಗರ್ ಹೆಚ್ಚಾದ ಕಾರಣ ಏಪ್ರಿಲ್ 14ರಂದು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 21 ರಂದು ಸರಸ್ವತಿ ಮೃತಪಟ್ಟರು. ಸದ್ಯ ದೇಶದಲ್ಲಿ ಲಾಕ್ಡೌನ್ ಸಂದರ್ಭವಾಗಿರುವ ಕಾರಣದಿಂದಾಗಿ ಸರಸ್ವತಿ ಕುಟುಂಬಸ್ಥರಿಗೆ ಮೃತದೇಹವನ್ನು ದೆಹಲಿಯಿಮದ ಕೊಂಡೊಯ್ಯುವುದು ಕಷ್ಟಕರವಾಗಿದ್ದ ಕಾರಣ ಸ್ವತಃ ಗೌತಮ್ ಗಂಭೀರ್ ಅಂತ್ಯಕ್ರಿಯೆಯನ್ನು ಕುಟುಂಬಸ್ಥರ ಪರವಾಗಿ ತಾವೇ ನೆರವೇರಿಸಿದ್ದಾರೆ.
ಈ ಬಗ್ಗೆ ಗಂಭೀರ್ ಟ್ವೀಟ್ ಮಾಡಿದ್ದಾರೆ. "ಈಕೆ ನಮ್ಮ ಮನೆಯಲ್ಲಿ ಸದಸ್ಯರಲ್ಲಿ ಒಬ್ಬರಂತೆ ಇದ್ದರು, ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರ ಅಂತಿಮ ಕ್ರಿಯೆಯನ್ನು ನಡೆಸುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.
ಗಂಭೀರ್ ಅವರ ಈ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಕೇಂದ್ರ ಸಚಿವರು ಒಡಿಶಾ ಮೂಲದವರೇ ಆದ ಧರ್ಮೇಂದ್ರ ಪ್ರಧಾನ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಿಂದಲೂ ಸಾಕಷ್ಟು ಶುಶ್ರೂಷೆ ನೀಡಿದ್ದ ಗಂಭೀರ್ ಅವರು ಸರಸ್ವತಿಯವರ ಸಾವಿನ ಸಂದರ್ಭದಲ್ಲೂ ಕುಟುಂಬಸ್ಥರಿಗೆ ಮೃತದೇಹ ತೆಗೆದುಕೊಂಡು ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಅಂತಿಮ ವಿಧಿಗಳನ್ನು ಸ್ವತಃ ನಿರ್ವಹಿಸಿ ಸಾವಿನಲ್ಲೂ ಆಕೆಯ ಘನತೆಯನ್ನು ಎತ್ತಿಹಿಡಿದರು, ಇದು ಮಾನವೀಯತೆಯ ಮೇಲಿನ ನಂಬಿಕೆಯನ್ನು ಎತ್ತಿ ಹಿಡಿಯುತ್ತದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.