
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ತಮ್ಮ ಆಯ್ಕೆಯ ಹನ್ನೊಂದು ಮಂದಿಯನ್ನು ಹೆಸರಿಸಿದ್ದಾರೆ. ಗಂಭೀರ್ ಆಯ್ಕೆಯಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಮಯಾಂಕ್ ಅಗರವಾಲ್ ಹೆಸರು ಕಾಣಿಸಿಕೊಂಡಿಲ್ಲ.
ಭಾರತದ ಪಿಚ್ ಗಳಲ್ಲಿ ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರವಾಲ್ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. 2019ರಲ್ಲಿ 8 ಟೆಸ್ಟ್ ಪಂದ್ಯಗಳಿಂದ 754 ರನ್ ಗಳಿಸಿದ್ದರು. ಕಳೆದ ಸೀಸನ್ ನಲ್ಲಿ ಎರಡು ದ್ವಿಶತಕ ಕೂಡಾ ಬಾರಿಸಿದ್ದಾರೆ. ಆದರೆ, ಮಯಾಂಕ್ ಗಿಂತ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವುದು ಒಳ್ಳೆಯದು ಎಂದು ಗಂಭೀರ್ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಗೇಮ್ ಪ್ಲ್ಯಾನ್ ಶೋನಲ್ಲಿ ಮಾತನಾಡಿದ ಗಂಭೀರ್, ''ಕ್ರೀಡೆಯೆಂದರೆ ಹೀಗೆ, ಬೇರೆಯವರಿಗೆ ಅವಕಾಶ ನೀಡಬೇಕಾಗುತ್ತದೆ. ಆ ಸಮಯಕ್ಕೆ ಯಾರು ಉತ್ತಮ ಫಾರ್ಮ್ ನಲ್ಲಿರುತ್ತಾರೋ ಅವರನ್ನು ತಂಡದ ಹಿತದೃಷ್ಟಿಯಿಂದ ಬಳಸಿಕೊಳ್ಳಬೇಕಾಗುತ್ತದೆ. ನಿಮ್ಮ ಸಮಯಕ್ಕಾಗಿ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಮಯಾಂಕ್ ಭಾರತದಲ್ಲಿ ಉತ್ತಮವಾಗಿ ಆಡಿದ್ದಾರೆ ಎಂಬುದನ್ನು ಮರೆಯುವಂತಿಲ್ಲ, ಆದರೆ ಈಗ ಪರಿಸ್ಥಿತಿ ಬೇರೆ'' ಎಂದಿದ್ದಾರೆ.
ಮಯಾಂಕ್ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 13 ರನ್ ಸರಾಸರಿಯಂತೆ 78 ರನ್ ಮಾತ್ರ ಗಳಿಸಿದ್ದರು. ಶುಭ್ಮನ್ 3 ಟೆಸ್ಟ್ ಪಂದ್ಯಗಳಿಂದ 51.80ರನ್ ಸರಾಸರಿಯಂತೆ 259ರನ್ ಗಳಿಸಿದ್ದರು. ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ 91ರನ್ ಸಿಡಿಸಿ, ಐತಿಹಾಸಿಕ ಸರಣಿ ಜಯಕ್ಕೆ ತಮ್ಮ ಕೊಡುಗೆ ನೀಡಿದ್ದರು.
ಮಯಾಂಕ್ ರಂತೆ ಹಾರ್ದಿಕ್ ರನ್ನು ಕೂಡಾ ಟೆಸ್ಟ್ ಆಡುವ ಹನ್ನೊಂದರಲ್ಲಿ ಗಂಭೀರ್ ಆಯ್ಕೆ ಮಾಡಿಲ್ಲ. ಐದು ಬೌಲರ್ ಗಳನ್ನು ತಂಡದಲ್ಲಿ ಆಡಿಸುವುದು ಮುಖ್ಯ ಎಂದಿದ್ದಾರೆ. ಅಕ್ಷರ್ ಪಟೇಲ್, ಅಶ್ವಿನ್, ಜಡೇಜಗೆ ಅವಕಾಶ ನೀಡಬೇಕು ಎಂದು ಹೇಳಿದರು.
ಗಂಭೀರ್ ಆಯ್ಕೆಯ ಹನ್ನೊಂದು ಮಂದಿ ತಂಡ: ಶುಭ್ಮನ್ ಗಿಲ್, ರೋಹಿತ್ ಶರ್ಮ, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರಿಷಬ್ ಪಂತ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕುಲದೀಪ್ ಯಾದವ್, ಜಸ್ ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ .
ಪ್ರವಾಸಿ ಇಂಗ್ಲೆಂಡ್ ಹಾಗೂ ಅತಿಥೇಯ ಭಾರತ ನಡುವೆ ಚೆನ್ನೈನಲ್ಲಿ ಫೆಬ್ರವರಿ 5ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.