ಗೌಹಾತಿ, ಅಕ್ಟೋಬರ್ 12 : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಇದ್ದ ಬಸ್ ಮೇಲೆ ಕಲ್ಲು ತೂರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌಹಾತಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬರ್ಸಾಪಾರ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಗೆದ್ದ ಸಂಭ್ರಮದಲ್ಲಿ ಹೋಟೆಲ್ ಗೆ ತೆರಳುತ್ತಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಬಂಧಿತ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಆಸ್ಟ್ರೇಲಿಯಾ ತಂಡವು 8 ವಿಕೆಟ್ಗಳಿಂದ ಭಾರತ ತಂಡವನ್ನು ಸೋಲಿಸಿತ್ತು. ಆ ನಂತರ ತಂಡವು ತಂಗಿದ್ದ ಹೋಟೆಲ್ ಸಮೀಪ ಬಸ್ ಮೇಲೆ ಕೆಲವರು ಕಲ್ಲು ತೂರಿದ್ದರು.
ಕಲ್ಲು ತೂರಾಟದ ಪರಿಣಾಮ ಬಸ್ನ ಕಿಟಕಿ ಗ್ಲಾಸು ಪುಡಿಪುಡಿಯಾಗಿದ್ದು, ಅದೃಷ್ಟವಶಾತ್ ಆಟಗಾರರಿಗೆ ಯಾವುದೇ ಅಪಾಯವಾಗಿಲ್ಲ. ಈ ಘಟನೆ ಬಗ್ಗೆ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಅರನ್ ಫಿಂಚ್ ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದರು.
ಹಾಗೂ ಭಾರತದ ಆಲ್ ರೌಂಡರ್ ರವೀಚಂದ್ರನ್ ಅಶ್ವಿನ್ ಸೇರಿದಂತೆ ಹಲವರು ಈ ಘಟನೆಯನ್ನು ಖಂಡಿಸಿದ್ದಾರೆ.