ನವದೆಹಲಿ, ಸೆ. 14: ಮ್ಯಾಗಜೀನ್ ಮುಖಪುಟದಲ್ಲಿ ವಿಷ್ಣುವಿನ ಅವತಾರದಲ್ಲಿ ಕಾಣಿಸಿಕೊಂಡು ವಿವಾದಕ್ಕೀಡಾಗಿರುವ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರಿಗೆ ಸುಪ್ರೀಂಕೋರ್ಟ್ ಅಭಯ ನೀಡಿದೆ. ಧೋನಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸ್ ವಜಾಗೊಳಿಸಿ ಸೋಮವಾರ ಆದೇಶ ಹೊರಡಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮ್ಯಾರಥಾನ್ ಸರಣಿ ಆಡಲು ತಯಾರಾಗುತ್ತಿರುವ ಎಂಎಸ್ ಧೋನಿ ಅವರಿಗೆ ಸುಪ್ರೀಂಕೋರ್ಟ್ ಆದೇಶದಿಂದ ನಿರಾಳತೆ ಮೂಡಿದೆ.
ಇದಕ್ಕೂ ಮುನ್ನ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಧೋನಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟಿನಲ್ಲಿ ಜಾಹೀರಾತಿಗೂ ನನಗೂ ಸಂಬಂಧವಿಲ್ಲ ಎಂದು ಧೋನಿ ಹೇಳಿಕೆ ನೀಡಿದ್ದರು.
ಅದರೆ, ಧೋನಿ ವಿರುದ್ಧ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್, ಸೆಲೆಬ್ರಿಟಿ ಕ್ರಿಕೆಟರ್ ಆದ ನಿಮಗೆ ಈ ಚಿತ್ರದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ ಎಂಬ ಅರಿವಿರಬೇಕು ಎಂದು ಪ್ರಶ್ನಿಸಿತ್ತು.
ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಲಯಕ್ಕೆ ಹಾಜರಾಗುವಂತೆ ಧೋನಿಗೆ ಸಮನ್ಸ್ ನೀಡಲಾಗಿತ್ತು. ಅದರೆ, ಧೋನಿ ವಿಚಾರಣೆಗೆ ಬಂದಿರಲಿಲ್ಲ. ನಂತರ ಪ್ರಕರಣ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತಲುಪಿತ್ತು. ಈಗ ಧೋನಿಗೆ ರಿಲೀಫ್ ಸಿಕ್ಕಿದೆ. (ಒನ್ ಇಂಡಿಯಾ ಸುದ್ದಿ)