ಗೆಲುವಿಗೆ ಕಾರಣ ನಾನು, ಹೆಸರು ಮಾಡಿದ್ದು ಅವರು: ತಂಡದವರ ವಿರುದ್ಧವೇ ಗಂಭೀರ ಆರೋಪ ಮಾಡಿದ ರಹಾನೆ!

2020 - 21ರಲ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿತ್ತು. ಅಡಿಲೇಡ್ ಅಂಗಣದಲ್ಲಿ ಇತ್ತಂಡಗಳ ನಡುವೆ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಟೀಮ್ ಇಂಡಿಯಾಕ್ಕೆ ಆಸ್ಟ್ರೇಲಿಯಾ ಸೋಲಿನ ರುಚಿ ತೋರಿಸಿತ್ತು. ಈ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ 36 ರನ್ಗಳಿಗೆ ಆಲ್ ಔಟ್ ಆಗಿದ್ದ ಟೀಮ್ ಇಂಡಿಯಾ ಹೀನಾಯ ಸೋಲನ್ನು ಅನುಭವಿಸಿತ್ತು. ಹೀಗೆ ಅಡಿಲೇಡ್ ಅಂಗಳದಲ್ಲಿ ನಡೆದಿದ್ದ ಪ್ರಥಮ ಟೆಸ್ಟ್ ಪಂದ್ಯದ ಸೋಲಿನ ಬೆನ್ನಲ್ಲೇ ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ್ದರು.
ಇಂತಹ ಕಠಿಣ ಸಂದರ್ಭದಲ್ಲಿ ಅಜಿಂಕ್ಯಾ ರಹಾನೆ ಆಸ್ಟ್ರೇಲಿಯಾ ವಿರುದ್ಧದ ಉಳಿದ 3 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದರು. ಹೀಗೆ ಕಠಿಣ ಜವಾಬ್ದಾರಿಯನ್ನು ಹೊತ್ತುಕೊಂಡ ಅಜಿಂಕ್ಯ ರಹಾನೆ ತಮ್ಮ ನಾಯಕತ್ವದಡಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಂತರ ನಡೆದ 3 ಪಂದ್ಯಗಳಲ್ಲಿ 2 ಗೆಲುವು ಹಾಗೂ ಮತ್ತೊಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲನೇ ಪಂದ್ಯದ ಹೀನಾಯ ಸೋಲಿನ ನಂತರ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ ಅಜಿಂಕ್ಯ ರಹಾನೆ ನಾಯಕನ ಆಟವನ್ನಾಡಿದರು ಹಾಗೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳ ಜಯವನ್ನು ಸಾಧಿಸಿತ್ತು. ನಂತರ ಸಿಡ್ನಿ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡ ಟೀಮ್ ಇಂಡಿಯಾ ಬ್ರಿಸ್ಬೇನ್ ಕ್ರೀಡಾಂಗಣದಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಅಮೋಘ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಈ ಮೂಲಕ ಅಜಿಂಕ್ಯ ರಹಾನೆ ನಾಯಕತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ 2-1 ಅಂತರದಿಂದ ಸರಣಿಯನ್ನು ಗೆದ್ದು ವಿಶ್ವ ಕ್ರಿಕೆಟ್ನಲ್ಲಿ ಭಾರೀ ಸಂಚಲನವನ್ನು ಮೂಡಿಸಿತ್ತು. ಹೀಗೆ ನಾಯಕನಾಗಿ ಅಮೋಘ ಸಾಧನೆ ಮಾಡಿದ ಅಜಿಂಕ್ಯ ರಹಾನೆ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದರು ಹಾಗೂ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ತಾವು ಸಿಡಿಸಿದ ಜವಾಬ್ದಾರಿಯುತ ಶತಕ ಅಜಿಂಕ್ಯ ರಹಾನೆಗೆ ನಂತರದ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡಿದರೂ ಕೂಡ ಅವಕಾಶವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂತು. ಹೌದು, ಆಸ್ಟ್ರೇಲಿಯಾ ಸರಣಿ ಅಜಿಂಕ್ಯ ರಹಾನೆಗೆ ಪದೇಪದೆ ಅವಕಾಶಗಳನ್ನು ಕಲ್ಪಿಸಿಕೊಡುವಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸಿದೆ ಎಂದರೆ ತಪ್ಪಾಗಲಾರದು. ಹೀಗೆ ಆಸ್ಟ್ರೇಲಿಯಾ ಪ್ರವಾಸ ಮುಗಿದ ನಂತರ ನಡೆದ ಹಲವಾರು ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ ಇದೀಗ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟವಾಗುವ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರನ್ನು ಮೆಚ್ಚಿಸಬೇಕಾಗಿದೆ.
ಹೀಗೆ ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆದುಕೊಳ್ಳಬೇಕೆಂದರೆ ರಣಜಿ ಟ್ರೋಫಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡಕ್ಕೆ ಸಿಲುಕಿಕೊಂಡಿರುವ ಅಜಿಂಕ್ಯ ರಹಾನೆ ಸದ್ಯ ತಾವು ಆಸ್ಟ್ರೇಲಿಯಾ ನೆಲದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರ ಕುರಿತು ಮೆಲುಕು ಹಾಕಿದ್ದು ಈ ಕೆಳಕಂಡಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಗೆಲುವಿನ ಶ್ರೇಯಸ್ಸನ್ನು ಬೇರೆಯವರು ಪಡೆದರು
ಆಸ್ಟ್ರೇಲಿಯಾ ವಿರುದ್ಧ ತಾವು ನಾಯಕನಾಗಿ ಮುನ್ನಡೆಸಿದ್ದ ಟೀಮ್ ಇಂಡಿಯಾ ಬೃಹತ್ ಗೆಲುವು ಸಾಧಿಸಿದ್ದರ ಕುರಿತು ಮಾತನಾಡಿರುವ ಅಜಿಂಕ್ಯಾ ರಹಾನೆ ಆ ಸರಣಿಯಲ್ಲಿ ತಾವು ನಾಯಕನಾಗಿ ತೆಗೆದುಕೊಂಡ ನಿರ್ಧಾರಗಳ ಶ್ರೇಯಸ್ಸನ್ನು ಬೇರೆಯವರು ಪಡೆದುಕೊಂಡರು ಎಂದು ಆರೋಪಿಸಿದ್ದಾರೆ. ಆ ಸರಣಿಯಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದು ನಾನು ಆದರೆ ಅದರ ಶ್ರೇಯಸ್ಸನ್ನು ಪಡೆದುಕೊಂಡದ್ದು ಬೇರೆಯವರು ಎಂದಿರುವ ಅಜಿಂಕ್ಯ ರಹಾನೆ ಶ್ರೇಯಸ್ಸಿಗಾಗಿ ನಾನು ನಾಯಕತ್ವವನ್ನು ನಿರ್ವಹಿಸಲಿಲ್ಲ, ಬದಲಾಗಿ ಸರಣಿಯನ್ನು ಗೆಲ್ಲಬೇಕೆಂಬ ಉದ್ದೇಶದಿಂದ ನಾಯಕತ್ವವನ್ನು ನಿರ್ವಹಿಸಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ತನ್ನ ನಿರ್ಧಾರಗಳಿಂದ ಸಿಕ್ಕ ಯಶಸ್ಸಿನ ಶ್ರೇಯಸ್ಸನ್ನು ಬೇರೆಯವರು ಪಡೆದುಕೊಂಡರು ಎಂದಿರುವ ಅಜಿಂಕ್ಯ ರಹಾನೆ ಆ ವ್ಯಕ್ತಿ ಯಾರು ಎಂಬುದನ್ನು ಮಾತ್ರ ಬಹಿರಂಗಪಡಿಸಲಿಲ್ಲ.

ನನ್ನ ಆಟ ಮುಗಿಯಿತು ಎನ್ನುವವರನ್ನು ನೋಡಿದರೆ ನಗು ಬರುತ್ತದೆ
ಇನ್ನೂ ಮುಂದುವರಿದು ಮಾತನಾಡಿರುವ ಅಜಿಂಕ್ಯ ರಹಾನೆ ತನ್ನ ಕ್ರಿಕೆಟ್ ಬದುಕು ಮುಗಿಯಿತು ಎಂದು ಟೀಕೆ ಮಾಡುವವರ ವಿರುದ್ಧ ಚಾಟಿ ಬೀಸಿದ್ದಾರೆ. ತನ್ನ ಕ್ರಿಕೆಟ್ ವೃತ್ತಿ ಜೀವನ ಮುಗಿಯಿತು ಎನ್ನುವವರನ್ನು ನೋಡಿದರೆ ನಗು ಬರುತ್ತದೆ ಎಂದಿರುವ ಅಜಿಂಕ್ಯ ರಹಾನೆ ಆಸ್ಟ್ರೇಲಿಯ ನೆಲದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಹಾಗೂ ಅದಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್ನಲ್ಲಿ ತಾನು ನೀಡಿರುವ ಕೊಡುಗೆ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕ್ರಿಕೆಟ್ ಬಗ್ಗೆ ಜ್ಞಾನ ಇರುವವರು ಯಾರೂ ಕೂಡ ಓರ್ವ ಆಟಗಾರನ ವೃತ್ತಿ ಜೀವನ ಮುಗಿಯಿತು ಎಂದೆಲ್ಲಾ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಅಜಿಂಕ್ಯ ರಹಾನೆ ವ್ಯಂಗ್ಯವಾಡಿದ್ದಾರೆ.

ರವಿಶಾಸ್ತ್ರಿಗೆ ಈ ಮಾತುಗಳನ್ನು ಹೇಳಿದ್ರಾ ಅಜಿಂಕ್ಯಾ ರಹಾನೆ?
ಸದ್ಯ ಅಜಿಂಕ್ಯ ರಹಾನೆ ನೀಡಿರುವ ಈ ವಿವಾದಾತ್ಮಕ ಹೇಳಿಕೆಗಳನ್ನು ಗಮನಿಸಿದರೆ ಈ ಮಾತುಗಳನ್ನು ಅಜಿಂಕ್ಯಾ ರಹಾನೆ ಆಗ ಭಾರತ ತಂಡದ ಕೋಚ್ ಆಗಿದ್ದ ರವಿಶಾಸ್ತ್ರಿಗೆ ಹೇಳಿದ್ದಾರಾ ಎಂಬ ಅನುಮಾನಗಳು ಮೂಡುತ್ತವೆ. ಹೌದು, ಆಸ್ಟ್ರೇಲಿಯಾ ವಿರುದ್ಧದ ಆ ಸರಣಿ ಗೆಲುವಿನ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರವಿಶಾಸ್ತ್ರಿ ತಾನು ಕೆಲವೊಂದಷ್ಟು ನಿರ್ಧಾರಗಳನ್ನು ತೆಗೆದುಕೊಂಡೆ ಮತ್ತು ಇದು ಉತ್ತಮವಾದ ಪ್ರತಿಫಲವನ್ನು ನೀಡಿತು ಎಂಬ ಹೇಳಿಕೆಗಳನ್ನು ನೀಡಿದ್ದರು. ಸದ್ಯ ಅಜಿಂಕ್ಯ ರಹಾನೆ ನೀಡಿರುವ ಈ ಹೇಳಿಕೆಯನ್ನು ಹಾಗೂ ಸರಣಿ ಮುಗಿದ ನಂತರ ರವಿಶಾಸ್ತ್ರಿ ನೀಡಿದ್ದ ಹೇಳಿಕೆಗಳನ್ನು ಗಮನಿಸಿದರೆ ಅಜಿಂಕ್ಯ ರಹಾನೆ ಪರೋಕ್ಷವಾಗಿ ರವಿಶಾಸ್ತ್ರಿಗೆ ಕುಟುಕಿದ್ದಾರೆ ಎಂಬ ಅನುಮಾನ ಮೂಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications