
ಆಸ್ಟ್ರೇಲಿಯಾ ವಿರುದ್ಧದ ಗೆಲುವಿನ ಶ್ರೇಯಸ್ಸನ್ನು ಬೇರೆಯವರು ಪಡೆದರು
ಆಸ್ಟ್ರೇಲಿಯಾ ವಿರುದ್ಧ ತಾವು ನಾಯಕನಾಗಿ ಮುನ್ನಡೆಸಿದ್ದ ಟೀಮ್ ಇಂಡಿಯಾ ಬೃಹತ್ ಗೆಲುವು ಸಾಧಿಸಿದ್ದರ ಕುರಿತು ಮಾತನಾಡಿರುವ ಅಜಿಂಕ್ಯಾ ರಹಾನೆ ಆ ಸರಣಿಯಲ್ಲಿ ತಾವು ನಾಯಕನಾಗಿ ತೆಗೆದುಕೊಂಡ ನಿರ್ಧಾರಗಳ ಶ್ರೇಯಸ್ಸನ್ನು ಬೇರೆಯವರು ಪಡೆದುಕೊಂಡರು ಎಂದು ಆರೋಪಿಸಿದ್ದಾರೆ. ಆ ಸರಣಿಯಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದು ನಾನು ಆದರೆ ಅದರ ಶ್ರೇಯಸ್ಸನ್ನು ಪಡೆದುಕೊಂಡದ್ದು ಬೇರೆಯವರು ಎಂದಿರುವ ಅಜಿಂಕ್ಯ ರಹಾನೆ ಶ್ರೇಯಸ್ಸಿಗಾಗಿ ನಾನು ನಾಯಕತ್ವವನ್ನು ನಿರ್ವಹಿಸಲಿಲ್ಲ, ಬದಲಾಗಿ ಸರಣಿಯನ್ನು ಗೆಲ್ಲಬೇಕೆಂಬ ಉದ್ದೇಶದಿಂದ ನಾಯಕತ್ವವನ್ನು ನಿರ್ವಹಿಸಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ತನ್ನ ನಿರ್ಧಾರಗಳಿಂದ ಸಿಕ್ಕ ಯಶಸ್ಸಿನ ಶ್ರೇಯಸ್ಸನ್ನು ಬೇರೆಯವರು ಪಡೆದುಕೊಂಡರು ಎಂದಿರುವ ಅಜಿಂಕ್ಯ ರಹಾನೆ ಆ ವ್ಯಕ್ತಿ ಯಾರು ಎಂಬುದನ್ನು ಮಾತ್ರ ಬಹಿರಂಗಪಡಿಸಲಿಲ್ಲ.

ನನ್ನ ಆಟ ಮುಗಿಯಿತು ಎನ್ನುವವರನ್ನು ನೋಡಿದರೆ ನಗು ಬರುತ್ತದೆ
ಇನ್ನೂ ಮುಂದುವರಿದು ಮಾತನಾಡಿರುವ ಅಜಿಂಕ್ಯ ರಹಾನೆ ತನ್ನ ಕ್ರಿಕೆಟ್ ಬದುಕು ಮುಗಿಯಿತು ಎಂದು ಟೀಕೆ ಮಾಡುವವರ ವಿರುದ್ಧ ಚಾಟಿ ಬೀಸಿದ್ದಾರೆ. ತನ್ನ ಕ್ರಿಕೆಟ್ ವೃತ್ತಿ ಜೀವನ ಮುಗಿಯಿತು ಎನ್ನುವವರನ್ನು ನೋಡಿದರೆ ನಗು ಬರುತ್ತದೆ ಎಂದಿರುವ ಅಜಿಂಕ್ಯ ರಹಾನೆ ಆಸ್ಟ್ರೇಲಿಯ ನೆಲದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಹಾಗೂ ಅದಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್ನಲ್ಲಿ ತಾನು ನೀಡಿರುವ ಕೊಡುಗೆ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕ್ರಿಕೆಟ್ ಬಗ್ಗೆ ಜ್ಞಾನ ಇರುವವರು ಯಾರೂ ಕೂಡ ಓರ್ವ ಆಟಗಾರನ ವೃತ್ತಿ ಜೀವನ ಮುಗಿಯಿತು ಎಂದೆಲ್ಲಾ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಅಜಿಂಕ್ಯ ರಹಾನೆ ವ್ಯಂಗ್ಯವಾಡಿದ್ದಾರೆ.

ರವಿಶಾಸ್ತ್ರಿಗೆ ಈ ಮಾತುಗಳನ್ನು ಹೇಳಿದ್ರಾ ಅಜಿಂಕ್ಯಾ ರಹಾನೆ?
ಸದ್ಯ ಅಜಿಂಕ್ಯ ರಹಾನೆ ನೀಡಿರುವ ಈ ವಿವಾದಾತ್ಮಕ ಹೇಳಿಕೆಗಳನ್ನು ಗಮನಿಸಿದರೆ ಈ ಮಾತುಗಳನ್ನು ಅಜಿಂಕ್ಯಾ ರಹಾನೆ ಆಗ ಭಾರತ ತಂಡದ ಕೋಚ್ ಆಗಿದ್ದ ರವಿಶಾಸ್ತ್ರಿಗೆ ಹೇಳಿದ್ದಾರಾ ಎಂಬ ಅನುಮಾನಗಳು ಮೂಡುತ್ತವೆ. ಹೌದು, ಆಸ್ಟ್ರೇಲಿಯಾ ವಿರುದ್ಧದ ಆ ಸರಣಿ ಗೆಲುವಿನ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರವಿಶಾಸ್ತ್ರಿ ತಾನು ಕೆಲವೊಂದಷ್ಟು ನಿರ್ಧಾರಗಳನ್ನು ತೆಗೆದುಕೊಂಡೆ ಮತ್ತು ಇದು ಉತ್ತಮವಾದ ಪ್ರತಿಫಲವನ್ನು ನೀಡಿತು ಎಂಬ ಹೇಳಿಕೆಗಳನ್ನು ನೀಡಿದ್ದರು. ಸದ್ಯ ಅಜಿಂಕ್ಯ ರಹಾನೆ ನೀಡಿರುವ ಈ ಹೇಳಿಕೆಯನ್ನು ಹಾಗೂ ಸರಣಿ ಮುಗಿದ ನಂತರ ರವಿಶಾಸ್ತ್ರಿ ನೀಡಿದ್ದ ಹೇಳಿಕೆಗಳನ್ನು ಗಮನಿಸಿದರೆ ಅಜಿಂಕ್ಯ ರಹಾನೆ ಪರೋಕ್ಷವಾಗಿ ರವಿಶಾಸ್ತ್ರಿಗೆ ಕುಟುಕಿದ್ದಾರೆ ಎಂಬ ಅನುಮಾನ ಮೂಡುತ್ತಿದೆ.


Click it and Unblock the Notifications












