For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ ವಿರುದ್ಧದ ಸರಣಿಗೆ ಆಯ್ಕೆಯಾದ ನಂತರ ಕೊಹ್ಲಿ ನೆನಪಿಸಿಕೊಂಡ ವೆಂಕಟೇಶ್ ಐಯ್ಯರ್

Ill never forget those tips which I received from Virat Kohli says Venkatesh Iyer

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬೀಳುವ ಮೂಲಕ ತನ್ನ ಪಯಣವನ್ನು ಮುಗಿಸಿದೆ. ಟೂರ್ನಿಯ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಅಬ್ಬರಿಸಿದ್ದ ಕೊಹ್ಲಿ ಹುಡುಗರು ಟೂರ್ನಿ ಆರಂಭದ ನಂತರ ಅಕ್ಷರಶಃ ಸಪ್ಪೆಯಾದರು. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ ಟೀಮ್ ಇಂಡಿಯಾ ಟೂರ್ನಿಯಲ್ಲಿ ಕೆಟ್ಟ ಆರಂಭವನ್ನು ಪಡೆದುಕೊಂಡಿತು.

ಹೀಗೆ ಟೂರ್ನಿಯಲ್ಲಿನ ತನ್ನ ಮೊದಲೆರಡು ಪಂದ್ಯದಲ್ಲಿ ಹೀನಾಯವಾಗಿ ಸೋತ ಟೀಂ ಇಂಡಿಯಾ ನಂತರ ನಡೆದ ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧದ ಪಂದ್ಯಗಳಲ್ಲಿ ಸತತವಾಗಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಕಂಡಿತು. ಹೌದು, ನವೆಂಬರ್‌ 8ರಂದು ನಡೆದ ನಮೀಬಿಯಾ ವಿರುದ್ಧದ ಪಂದ್ಯವೇ ಟೀಂ ಇಂಡಿಯಾ ಪಾಲಿಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅಂತಿಮ ಪಂದ್ಯವಾಗಿತ್ತು. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಡೆದ ಅಂತಿಮ ಟಿ ಟ್ವೆಂಟಿ ಪಂದ್ಯ ಕೂಡ ಇದಾಗಿತ್ತು. ಈ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟಿ ಟ್ವೆಂಟಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದು ಮುಂದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.

ಹೀಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ ಕೊನೆಯ ಟಿ ಟ್ವೆಂಟಿ ಟೂರ್ನಿಯಲ್ಲಿ ಭಾರತ ತಂಡ ಹೀನಾಯ ಪ್ರದರ್ಶನ ತೋರಿದ ಕಾರಣದಿಂದಾಗಿ ಎಚ್ಚೆತ್ತುಕೊಂಡಿರುವ ಟೀಮ್ ಇಂಡಿಯಾ ಆಯ್ಕೆಗಾರರು ಇದೇ ನವೆಂಬರ್ 17ರಿಂದ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಗೆ ಟೀಮ್ ಇಂಡಿಯಾದಲ್ಲಿ ಕೆಲ ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ. ಹೌದು, ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ಕೆಲ ಆಟಗಾರರ ಪ್ರದರ್ಶನ ತೀರಾ ಕಳಪೆ ಮಟ್ಟದಲ್ಲಿತ್ತು. ಹೀಗಾಗಿ ಅಂತಹ ಆಟಗಾರರ ಬದಲು ಯುವ ಕ್ರಿಕೆಟಿಗರಿಗೆ ಮಣೆ ಹಾಕುವ ಕೆಲಸವನ್ನು ಬಿಸಿಸಿಐ ಮಾಡಿದೆ.

ಇದೇ ರೀತಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ಎಡವಿದ ಹಾರ್ದಿಕ್ ಪಾಂಡ್ಯರನ್ನು ಮುಂಬರಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ಕೈಬಿಡಲಾಗಿದೆ. ಈ ಸ್ಥಾನಕ್ಕೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಮಿಂಚಿದ್ದ ವೆಂಕಟೇಶ್ ಐಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗೆ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ವೆಂಕಟೇಶ್ ಐಯ್ಯರ್ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಪರ ಆಡುವ ಅವಕಾಶ ಲಭಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಪ್ರಕಟವಾದ ಭಾರತ ಟಿ ಟ್ವೆಂಟಿ ತಂಡದಲ್ಲಿ ಸ್ಥಾನ ಪಡೆದುಕೊಂಡ ನಂತರ ಮಾತನಾಡಿರುವ ವೆಂಕಟೇಶ್ ಐಯ್ಯರ್ ಈ ಹಿಂದೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯವೊಂದರಲ್ಲಿ ವಿರಾಟ್ ಕೊಹ್ಲಿ ತನಗೆ ನೀಡಿದ ಸಲಹೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಹೌದು, ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆದ ಪಂದ್ಯ ಮುಗಿದ ನಂತರ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದ ವೆಂಕಟೇಶ್ ಐಯ್ಯರ್ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೆಲ ಸಮಯ ಕಳೆಯುವುದರ ಮೂಲಕ ಆತನಿಗೆ ಕೆಲ ಸಲಹೆ ಮತ್ತು ಸಂದೇಶವನ್ನು ನೀಡಿದ್ದರು. ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತನಗೆ ಹೇಳಿದ ಮಾತುಗಳನ್ನು ಇದೀಗ ವೆಂಕಟೇಶ್ ಐಯ್ಯರ್ ಈ ಕೆಳಕಂಡಂತೆ ಮೆಲುಕು ಹಾಕಿದ್ದಾರೆ.

"ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಮಯದಲ್ಲಿ ನಾನು ಅನೇಕ ಹಿರಿಯ ಕ್ರಿಕೆಟಿಗರನ್ನು ಭೇಟಿಯಾದೆ ಮತ್ತು ಅವರ ಜತೆ ಚರ್ಚಿಸಿದೆ ಹಾಗೂ ಅವರ ಸಂದೇಶಗಳನ್ನು ಆಲಿಸಿದೆ. ಈ ಸಂದರ್ಭದಲ್ಲಿ ನನ್ನ ಜೊತೆ ಮಾತನಾಡಿದ ವಿರಾಟ್ ಕೊಹ್ಲಿ ಅವರು ನಾನು ಪ್ರಸ್ತುತ ಆಡುತ್ತಿರುವ ಆಟದ ಕಡೆ ಹೆಚ್ಚಿನ ಗಮನಹರಿಸುವಂತೆ ಹಾಗೂ ಇನ್ನೂ ಹೆಚ್ಚಿನ ಶ್ರಮ ವಹಿಸಿ ಪ್ರದರ್ಶನ ನೀಡುವಂತೆ ಸಂದೇಶ ನೀಡಿದರು. ವಿರಾಟ್ ಕೊಹ್ಲಿ ಅವರು ನೀಡಿದ ಈ ಸಲಹೆಯನ್ನು ನಾನು ನನ್ನ ಕ್ರಿಕೆಟ್ ಜೀವನದಲ್ಲಿ ಯಾವತ್ತಿಗೂ ಮರೆಯುವುದಿಲ್ಲ" ಎಂದು ವೆಂಕಟೇಶ್ ಐಯ್ಯರ್ ವಿರಾಟ್ ಕೊಹ್ಲಿ ನೀಡಿದ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ.

Story first published: Thursday, November 11, 2021, 9:55 [IST]
Other articles published on Nov 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+