ದೆಹಲಿ ಸುಲ್ತಾನ ಗಂಭೀರ ವದನ ಗೌತಮ ತ್ರಿವಿಕ್ರಮ


ಗೌತಮ್ ಗಂಭೀರ್ ಎಂದರೆ ಗಂಟು ಹಾಕಿಕೊಂಡ ಮುಖ, ಮೈದಾನದಲ್ಲಿ ಆಗಾಗ ಸಹ ಆಟಗಾರರ ಜತೆ ಕೋಪಗೊಂಡ ದೃಶ್ಯ ಕಣ್ಮುಂದೆ ಬರಬಹುದು. ಆದರೆ, ವಿಶ್ವಕಪ್ ನಲ್ಲಿ ತಂಡವನ್ನು ಗೆಲುವಿನ ದಡಕ್ಕೆ ತಂದಿದ್ದನ್ನು ಮರೆಯುವಂತಿಲ್ಲ.
37 ವರ್ಷ ವಯಸ್ಸಿನ ಗಂಭೀರ್ ಅವರು ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ತಂಡಕ್ಕೆ ಸೇರುವ ಅನೇಕ ಸಾಧ್ಯತೆಗಳು ಕಂಡು ಬಂದರೂ ಆಯ್ಕೆ ಸಮಿತಿಯ ಕೃಪೆ ಸಿಕ್ಕಿರಲಿಲ್ಲ. ಇಂಗ್ಲೆಂಡ್ ವಿರುದ್ಧ ರಾಜ್ ಕೋಟ್ ನಲ್ಲಿ ಆಡಿದ ಟೆಸ್ಟ್ ಪಂದ್ಯವೇ ಕೊನೆಯಾಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಗೌತಮ್ ಅವರು, ಫೇಸ್ ಬುಕ್ ನಲ್ಲಿ 11 ನಿಮಿಷದ ವಿಡಿಯೋ ಹಂಚಿಕೊಂಡಿರುವ ಗಂಭೀರ್ ಅವರು ತಮ್ಮ 15 ವರ್ಷಗಳ ವೃತ್ತಿ ಬದುಕಿನ ರಸ ನಿಮಿಷಗಳನ್ನು ನೆನದಿದ್ದಾರೆ. ಕಹಿ ಸಂದರ್ಭದಲ್ಲಿ ಜತೆಗಿದ್ದವರಿಗೆ ಧನ್ಯವಾದ ಹೇಳಿದ್ದಾರೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದ ಸಿಬಿ ಸರಣಿಯ ಗೆಲುವನ್ನು ವಿಶೇಷವಾಗಿ ಸ್ಮರಿಸಿದ್ದಾರೆ.
2018ರ ಐಪಿಎಲ್ ಹರಾಜಿಗೂ ಮುನ್ನ ಐಪಿಎಲ್ ಬದಲು ರಣಜಿ ಮುಖ್ಯ ಎಂದು ದೆಹಲಿ ರಣಜಿ ತಂಡಕ್ಕೆ ಹೆಚ್ಚಿನ ಸಮಯ ನೀಡಿದ ಗಂಭೀರ್ ಗೆ ಸಮಯ ಸರಿಯಾಗಿರಲಿಲ್ಲ. ದೆಹಲಿ ತಂಡದ ನಾಯಕತ್ವವನ್ನು ತೊರೆಯಬೇಕಾಯಿತು.

ಗಂಭೀರ್ ರನ್ ಗಳಿಕೆ
ಆದರೆ, ಎರಡು ವಿಶ್ವಕಪ್ ವಿಜೇತ ತಂಡದಲ್ಲಿದ್ದ ಗಂಭೀರ್ ಅವರು ಎರಡು ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಅರ್ಧಶತಕ ಬಾರಿಸಿ, ತಂಡವನ್ನು ಜಯದ ಹೊಸ್ತಿಲಿಗೆ ತಂದವರು. 2011ರ ವಿಶ್ವಕಪ್ ನಲ್ಲಿ 97ರನ್ ಬಾರಿಸಿದರು, ವಿಶ್ವ ಟಿ20 ಫೈನಲ್ ನಲ್ಲಿ 75ರನ್ ಗಳಿಸಿದ್ದರು.
2012 ಹಾಗೂ 2014ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿ, ನಾಯಕನಾಗಿ ತಂಡಕ್ಕೆ ಆಸರೆಯಾಗಿ, ಕಪ್ ಗೆಲ್ಲಿಸಿಕೊಟ್ಟವರು.
ಭಾರತದ ಉತ್ತಮ ಆರಂಭಿಕ ಆಟಗಾರ
ಎಡಗೈ ಬ್ಯಾಟ್ಸ್ ಮನ್ ಗಂಭೀರ್ ಅವರು ಭಾರತ ಪರ 58 ಟೆಸ್ಟ್ ನಲ್ಲಿ 41.95ರನ್ ಸರಾಸರಿಯಂತೆ 4154ರನ್, 147 ಏಕದಿನ ಪಂದ್ಯದಲ್ಲಿ 5238ರನ್ ಹಾಗೂ 37 ಟಿ20ಐ ಪಂದ್ಯಗಳನ್ನಾಡಿ 932ರನ್, ಒಟ್ಟಾರೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,324 ರನ್ ಗಳಿಸಿದವರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 197 ಪಂದ್ಯಗಳಲ್ಲಿ 15,041ರನ್ ಹಾಗೂ ಲಿಸ್ಟ್ ಎ ಪಂದ್ಯಗಳಿಂದ 10,077ರನ್ ಗಳಿಸಿದ್ದಾರೆ.

ರಾಜಕೀಯ ಜೀವನ ಆರಂಭಕ್ಕೆ ಮುನ್ನುಡಿಯೇ?
ಒಂದು ಕಾಲದಲ್ಲಿ ಭಾರತದ ಕ್ರಿಕೆಟ್ ತಂಡದ ಪ್ರಮುಖ ಓಪನರ್ ಎನಿಸಿಕೊಂಡಿದ್ದ ಗೌತಮ್ ಗಂಭೀರ್ ಅವರು ರಾಜಕೀಯಕ್ಕೆ ಕಾಲಿಡುವ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧೆ ನಡೆಸಲಿದ್ದಾರೆ ಎಂಬ ಸುದ್ದಿಯಿದೆ.
ಕ್ರಿಕೆಟ್ ಆಟಗಾರರು ಹಾಗೂ ರಾಜಕೀಯಕ್ಕೂ ಇರುವ ನಂಟು ಹೊಸದೇನಲ್ಲ. ನವಜೋತ್ ಸಿಂಗ್ ಸಿದ್ದು, ಮೊಹಮ್ಮದ್ ಅಜರುದ್ದೀನ್ ಅವರು ಇಂದು ಸಕ್ರಿಯ ರಾಜಕಾರಣಿಗಳಾಗಿದ್ದಾರೆ. ಪಾಕಿಸ್ತಾನದಲ್ಲಿ ಮಾಜಿ ನಾಯಕ ಇಮ್ರಾನ್ ಖಾನ್ ಅವರು ಇಂದು ಪ್ರಧಾನಿಯಾಗಿದ್ದಾರೆ.
ಸಾಮಾಜಿಕ ಕಾರ್ಯಕರ್ತನಾಗಿ ಗಂಭೀರ್
ತಮ್ಮ ಫೌಂಡೇಶನ್ ಮೂಲಕ ನವದೆಹಲಿಯ ಬಡವರಿಗೆಲ್ಲ ಉಚಿತವಾಗಿ ಆಹಾರ ಪೂರೈಸುವ ಸಮುದಾಯ ಅಡುಗೆ ಮನೆ ಯೋಜನೆಗೆ ಚಾಲನೆ ನೀಡಿದ್ದಾರೆ. ದೆಹಲಿಯ ಪಟೇಲ್ ನಗರದಲ್ಲಿ ಮೊದಲ ಕಮ್ಯೂನಿಟಿ ಕಿಚನ್ ಆರಂಭವಾಗಿದೆ.
ಛತ್ತೀಸ್ ಗಢದಲ್ಲಿ ನಕ್ಸಲ್ ದಾಳಿಗೆ ಸಿಲುಕಿ ಹುತಾತ್ಮರಾದ 25 ಯೋಧರ ಕುಟುಂಬಕ್ಕೂ ಗೌತಮ್ ಗಂಭೀರ್ ನೆರವಾಗಿದ್ದರು. ಯೋಧರ ಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ಮುಂದಾಗಿದ್ದರು. ಹುತಾತ್ಮ ಪೊಲೀಸ್ ಅಧಿಕಾರಿ ರಶೀದ್ ಅವರ ಪುಟ್ಟ ಮಗಳು ಜೋಹ್ರಾಳ ಕಣ್ಣೀರು ಒರೆಸಿ, ವಿದ್ಯಾಭ್ಯಾಸ ಹೊಣೆ ಹೊತ್ತುಕೊಂಡಿದ್ದಾರೆ.
ಗೌತಮ್ ಗಂಭೀರ್ ಸಂಸ್ಥೆ ಮೂಲಕ, ಶಿಕ್ಷಣ, ನಿರ್ಗತಿಕರಿಗೆ ಆಹಾರ ಒದಗಿಸುವ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications