ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ರಾಂಚಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಭೇಟಿ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲನೇ ಪಂದ್ಯವನ್ನಾಡಲು ಟೀಂ ಇಂಡಿಯಾ ಆಟಗಾರರು ರಾಂಚಿಯಲ್ಲಿದ್ದು, ಇದೇ ಸಂದರ್ಭದಲ್ಲಿ ಪಾಂಡ್ಯ ಧೋನಿಯನ್ನು ಭೇಟಿ ಮಾಡಿದ್ದಾರೆ.
ಧೋನಿಯನ್ನು ಭೇಟಿ ಮಾಡಿದ ಫೋಟೋವನ್ನು ಪಾಂಡ್ಯ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ. ಪ್ರಸಿದ್ಧ ಹಿಂದಿ ಸಿನಿಮಾ ಶೋಲೆಯಲ್ಲಿ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅವರಂತೆ ಬೈಕ್ನಲ್ಲಿ ಹೋಗುವ ಫೋಸ್ ನೀಡಿದ್ದಾರೆ. ಪಾಂಡ್ಯ ಶೋಲೆ 2 ಶೀಘ್ರದಲ್ಲೇ ಬರಲಿದೆ ಎನ್ನುವ ಶೀರ್ಷಿಕೆ ಜೊತೆ ಫೋಟೊವನ್ನು ಹಂಚಿಕೊಂಡಿದ್ದಾರೆ.
IND vs NZ 1st T20: ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಲು ಇವರ ಮಧ್ಯೆ ಪೈಪೋಟಿ
ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಆಡಿದ ಬಳಿಕ ಹಾರ್ದಿಕ್ ಪಾಂಡ್ಯ ರಾಂಚಿಯಲ್ಲಿ ಒಂದು ದಿನ ವಿಶ್ರಾಂತಿ ಪಡೆದರು. ವಿಶ್ರಾಂತಿಯ ಸಮಯವನ್ನು ಮಾಜಿ ನಾಯಕ ಧೋನಿಯನ್ನು ಭೇಟಿ ಮಾಡಲು ಬಳಸಿಕೊಂಡಿದ್ದಾರೆ. ಜನವರಿ 27ರಂದು ಟಿ20 ಸರಣಿಯ ಮೊದಲನೇ ಪಂದ್ಯ ರಾಂಚಿಯ ಜೆಎಸ್ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ.
ಪಾಂಡ್ಯ-ಧೋನಿ ಉತ್ತಮ ಬಾಂಧವ್ಯ
ಎಲ್ಲರಿಗೂ ತಿಳಿದಿರುವಂತೆ ಹಾರ್ದಿಕ್ ಪಾಂಡ್ಯ ಮತ್ತು ಎಂಎಸ್ ಧೋನಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವಕಾಶ ಸಿಕ್ಕಾಗೆಲ್ಲ ಪಾಂಡ್ಯ ಧೋನಿಯನ್ನು ಭೇಟಿ ಮಾಡಿ ಅವರ ಜೊತೆ ಸಮಯ ಕಳೆಯುತ್ತಾರೆ.
ಸದ್ಯ ಭಾರತ ಟಿ20 ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಎಂಎಸ್ ಧೋನಿಯನ್ನು ಸಹೋದರ ಮತ್ತು ಮಾರ್ಗದರ್ಶಕ ಎಂದು ಕರೆಯುತ್ತಾರೆ. ತನ್ನ ಆಟವನ್ನು ಸುಧಾರಿಸಿಕೊಳ್ಳಲು ಧೋನಿ ಸಹಾಯ ಮಾಡಿದ್ದಾರೆ ಎಂದು ಪಾಂಡ್ಯ ಹೇಳಿಕೊಳ್ಳುತ್ತಾರೆ.
ಬಲಿಷ್ಠ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಆರಂಭಕ್ಕೆ ಮುನ್ನ ಧೋನಿಯನ್ನು ಭೇಟಿ ಮಾಡಿರುವ ಪಾಂಡ್ಯ ನಾಯಕತ್ವಕ್ಕೆ ಸಂಬಂಧಪಟ್ಟಂತೆ ಅಮೂಲ್ಯ ಸಲಗಹೆಗಳನ್ನು ಪಡೆದುಕೊಂಡಿದ್ದಾರೆ.
ಪಾಂಡ್ಯ ನಾಯಕತ್ವದಲ್ಲಿ ಸತತ ಸರಣಿ ಗೆಲುವು
ಕಳೆದ ವರ್ಷ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿಕೊಂಡರು. ಅವರ ನಾಯಕತ್ವದಲ್ಲಿ ಭಾರತ ಇದುವರೆಗೂ ಆಡಿರುವ ಎಲ್ಲಾ ಸರಣಿಗಳಲ್ಲಿ ಗೆಲುವು ಸಾಧಿಸಿದೆ.
ಪಾಂಡ್ಯ ನಾಯಕತ್ವದಲ್ಲಿ ಭಾರತ ಇದುವರೆಗು 8 ಪಂದ್ಯಗಳನ್ನಾಡಿದ್ದು, 6 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯದಲ್ಲಿ ಸೋಲನುಭವಿಸಿದೆ, ಇನ್ನು ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿದೆ.
ಐರ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧದ ಸರಣಿಗಳನ್ನು ಜಯಿಸಿದ್ದು, ಸತತ ನಾಲ್ಕನೇ ಸರಣಿ ಜಯಗಳಿಸಲು ಪಾಂಡ್ಯ ರಣತಂತ್ರ ರೂಪಿಸಲಿದ್ದಾರೆ. 2023ರ ಐಪಿಎಲ್ಗೆ ಮುನ್ನ ಭಾರತ ಆಡುತ್ತಿರುವ ಕೊನೆಯ ಟಿ20 ಸರಣಿ ಇದಾಗಿದೆ. ಟಿ20 ಸರಣಿ ನಂತರ ಭಾರತ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಆಡಲಿದೆ.