
ಟೀಮ್ ಇಂಡಿಯಾದ ಯುವ ಆಟಗಾರ ಅರ್ಷ್ದೀಪ್ ಸಿಂಗ್ ಕಳೆದ ವಿಶ್ವಕಪ್ಗೂ ಮುನ್ನ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದ್ದರು. ಆದರೆ ಕಳೆದ ಕೆಲ ತಿಂಗಳಿನಿಂದ ಅರ್ಷ್ದೀಪ್ ಸಿಂಗ್ ಆರಂಭದಲ್ಲಿ ತೋರಿದ್ದ ಫಾರ್ಮ್ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಅದರಲ್ಲೂ ಅರ್ಷ್ದೀಪ್ ಸಿಂಗ್ ಅತಿಯಾಗಿ ನೋಬಾಲ್ ಎಸೆಯುತ್ತಿರುವುದು ತಂಡಕ್ಕೆ ಭಾರೀ ದುಬಾರಿಯಾಗುತ್ತಿದೆ.
ಇದೀಗ ಅರ್ಷ್ದೀಪ್ ಸಿಂಗ್ ಅವರು ಅತಿಯಾಗಿ ನೋಬಾಲ್ ಎಸೆಯುವ ವಿಚಾರವಾಗಿ ಮೊಹಮ್ಮದ್ ಕೈಫ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಅರ್ಶ್ದೀಪ್ ಸಿಂಗ್ ಬಹಳ ದೂರದಿಂದ ಓಡಿ ಬರುವುದು ನೋಬಾಲ್ ಎಸೆಯಲು ಪ್ರಮುಖ ಕಾರಣ ಎಂದಿದ್ದಾರೆ.
"ಅರ್ಶ್ದೀಪ್ ಸಿಂಗ್ ದೊಡ್ಡ ರನ್ಅಪ್ ಹೊಂದಿದ್ದು ಅವರ ಓಟದಲ್ಲಿಯೂ ತಪ್ಪುಗಳಿವೆ. ಆತ ತನ್ನ ಶಕ್ತಿಯನ್ನು ಅಲ್ಲಿ ವ್ಯರ್ಥ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಪ್ರಕಾರ ಆತನ ದೊಡ್ಡ ನೋಬಾಲ್ ಎಸೆತಗಳಿಗೆ ಕಾರಣ ಆ ದೀರ್ಘವಾದ ರನ್ನಪ್" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್.
ಇನ್ನು ಈ ಸಂದರ್ಭದಲ್ಲಿ ಅರ್ಶ್ದೀಪ್ ಅವರು ಮೂಲಭೂರ ವಿಚಾರಗಳ ಕಡೆಗೆ ಹೆಚ್ಚಿನ ಗಮನನೀಡಬೇಕು ಎಂದಿದ್ದು ನಿರಾಳವಾಗಿ ಬೌಲಿಂಗ್ ನಡೆಸಬೇಕು ಎಂದಿದ್ದಾರೆ. ಅಲ್ಲದೆ ಆತನೋರ್ವ ಅದ್ಭುತವಾದ ಬೌಲರ್ ಆಗಿದ್ದು ರಾಂಚಿಯಲ್ಲಿ ಅವರ ದಿನ ಉತ್ತಮವಾಗಿಲ್ಲ ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ.
ಅರ್ಶ್ದೀಪ್ ಸಿಂಗ್ ಹೀಗೆ ನೋಬಾಲ್ ಎಸೆಯುವ ಬಗ್ಗೆ ಈ ಹಿಂದೆ ಸ್ವತಃ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಮೂಲಭೂತ ವಿಚಾರಗಳಲ್ಲಿ ತಪ್ಪೆಸಗುವುದು ಬಹಳ ದೊಡ್ಡ ತಪ್ಪು ಎಂದು ಹೇಳಿಕೆ ನೀಡಿದ್ದ ಹಾರ್ದಿಕ್ ಪಾಂಡ್ಯ ನೋಬಾಲ್ ಎಸೆಯುವುದು ದೊಡ್ಡ ಅಪರಾಧ ಎಂದು ಪ್ರತಿಕ್ರಿಯೆ ನೀಡಿದ್ದರು. ಅಲ್ಲದೆ ಈ ಹಿಂದೆಯೂ ಅವರು ಈ ರೀತಿ ನೋಬಾಲ್ ಎಸೆದಿರುವುದನ್ನು ಉಲ್ಲೇಖಿಸಿದ್ದರು.
ಇದೀಗ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿಯೂ ಅರ್ಷ್ದೀಪ್ ನೋಬಾಲ್ ಭಾರತಕ್ಕೆ ಮತ್ತೆ ದುಬವಾರಿಯಾಗಿದೆ. ಇನ್ನಿಂಗ್ಸ್ನ ಅಂತಿಮ ಓವರ್ ಎಸೆದ ಅರ್ಶ್ದೀಪ್ ಸಿಂಗ್ ಮೊದಲ ಎಸೆತದಲ್ಲಿ ನೋಬಾಲ್ ಹಾಗೂ ಸಿಕ್ಸರ್ ನೀಡುವ ಮೂಲಕ ಒತ್ತಡಕ್ಕೆ ಒಳಗಾದರು. ಈ ಓವರ್ನಲ್ಲಿ ನ್ಯೂಜಿಲೆಂಡ್ ತಂಡ ಬರಿಒಬ್ಬರಿ 27 ರನ್ಗಳನ್ನು ಕೊಳ್ಳೆಹೊಡೆದಿದ್ದು ಇದರಿಂದಾಗಿ ನ್ಯೂಜಿಲೆಂಡ್ ತಂಡ ಭಾರತಕ್ಕೆ 177 ರನ್ಗಳ ಬೃಹತ್ ಗುರಿ ನೀಡಲು ಸಾಧ್ಯವಾಯಿತು.