ದ.ಆಫ್ರಿಕಾದಲ್ಲಿ ಮಂಕಾಗಿದ್ದ ರಾಹುಲ್ ಮತ್ತೆ ಬಂದ್ರು, ಭಾರತದ ಬಹು ದಿನಗಳ ತಲೆನೋವಿಗೆ ಪರಿಹಾರ ತಂದ್ರು

ಕೆಎಲ್ ರಾಹುಲ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ ನಂತರ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಕಮ್ ಬ್ಯಾಕ್ ಮಾಡಿದ್ದ ಆಟಗಾರ. ಹೀಗೆ ಟೀಂ ಇಂಡಿಯಾದ ಖಾಯಂ ಸದಸ್ಯನಾದ ಕೆಎಲ್ ರಾಹುಲ್ ಇತ್ತೀಚೆಗಷ್ಟೇ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದಾಗ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಭಾರತ ತಂಡವನ್ನು ಹರಿಣಗಳ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕನಾಗಿ ಮುನ್ನಡೆಸಿದ್ದರು. ಹೀಗೆ ರಾಹುಲ್ ಮುನ್ನಡೆಸಿದ್ದ ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಹರಿಣಗಳ ವಿರುದ್ಧ ಸೋತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿತ್ತು.
ಇನ್ನು ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ನೆಲದಲ್ಲಿಯೇ ಭಾರತ ಮತ್ತು ಹರಿಣಗಳ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ಕೂಡ ನಡೆದಿತ್ತು. ಈ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಅಲಭ್ಯರಾದಾಗ ಇದೇ ಕೆ ಎಲ್ ರಾಹುಲ್ ಆ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡಿದ್ದರು ಹಾಗೂ ಆ ಪಂದ್ಯದಲ್ಲಿಯೂ ಕೂಡಾ ಟೀಮ್ ಇಂಡಿಯಾ ಹರಿಣಗಳ ವಿರುದ್ಧ ಸೋತಿತ್ತು. ಹೀಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಾನು ನಾಯಕನಾಗಿ ಮುನ್ನಡೆಸಿದ್ದ ನಾಲ್ಕೂ ಪಂದ್ಯಗಳಲ್ಲಿಯೂ ವಿಫಲರಾದ ಕೆಎಲ್ ರಾಹುಲ್ ಸಾಕಷ್ಟು ಟೀಕೆಗಳಿಗೆ ಒಳಗಾದರು. ಹೀಗೆ ಭಾರಿ ವಿರೋಧ ಹಾಗೂ ಟೀಕೆಗಳನ್ನು ಎದುರಿಸಿದ್ದ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದರು.
ಹೌದು, ವೈಯಕ್ತಿಕ ಕಾರಣಗಳಿಂದ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದ ಕೆಎಲ್ ರಾಹುಲ್ ಇದೀಗ ಇಂದು ( ಫೆಬ್ರವರಿ 9 ) ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯಕ್ಕಾಗಿ ತಂಡ ಸೇರಿದ್ದು, ಉತ್ತಮ ಪ್ರದರ್ಶನ ನೀಡುವುದರ ಮೂಲಕ ಬಹುದಿನಗಳಿಂದ ಟೀಮ್ ಇಂಡಿಯಾ ಎದುರಿಸುತ್ತಿದ್ದ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರವಾಗಿ ನಿಂತಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಮುಂದೆ ಇದೆ ಓದಿ.

ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್
ಹೆಚ್ಚಾಗಿ ಆರಂಭಿಕ ಆಟಗಾರನಾಗಿ ತಂಡದ ನಾಯಕ ರೋಹಿತ್ ಶರ್ಮಾ ಜತೆ ಕಣಕ್ಕಿಳಿಯುತ್ತಿದ್ದ ಉಪನಾಯಕ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಮಾತ್ರ ಮಧ್ಯಮ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿದರು. ಇನ್ನು ಕೆಎಲ್ ರಾಹುಲ್ ಬದಲು ರೋಹಿತ್ ಶರ್ಮಾ ಜತೆ ರಿಷಭ್ ಪಂತ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಮೂಲಕ ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಕೆ ಎಲ್ ರಾಹುಲ್ ಜವಾಬ್ದಾರಿಯುತ ಆಟ
ವೆಸ್ಟ್ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ 48 ಎಸೆತಗಳಲ್ಲಿ 49 ರನ್ ಬಾರಿಸಿ ರನ್ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ ಟೀಮ್ ಇಂಡಿಯಾ ತನ್ನ ಮೊದಲ 3 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಆಪದ್ಬಾಂಧವನಾದರು. ಹೌದು, 12 ಓವರ್ಗಳಿಗೆ ತಂಡದ ಮೂವರು ಪ್ರಮುಖ ಆಟಗಾರರ ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಕೇವಲ 43 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಜತೆಯಾದ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ 91 ರನ್ಗಳ ಜತೆಯಾಟವನ್ನು ಆಡುವುದರ ಮೂಲಕ ತಂಡವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ದರು.

ಬಹುದಿನಗಳ ಸಮಸ್ಯೆಗೆ ಸಿಕ್ತು ಪರಿಹಾರ
ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಜವಾಬ್ದಾರಿಯುತ ಆಟವನ್ನು ಆಡಿರುವುದು ಸದ್ಯ ಟೀಮ್ ಇಂಡಿಯಾದ ಬಹುದಿನಗಳ ಸಮಸ್ಯೆಯಾಗಿದ್ದ ಮಧ್ಯಮ ಕ್ರಮಾಂಕದ ಆಟಗಾರರ ಕೊರತೆಯನ್ನು ನಿವಾರಿಸಿದಂತಾಗಿದೆ. ಹೌದು, ಟೀಮ್ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ನೆಲೆಯೂರಿ ಜವಬ್ದಾರಿಯುತ ಪ್ರದರ್ಶನವನ್ನು ನೀಡಬಲ್ಲ ಆಟಗಾರರ ಕೊರತೆಯಿತ್ತು. ಹಾಗೂ ಸಾಕಷ್ಟು ಮಾಜಿ ಕ್ರಿಕೆಟಿಗರು ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಸಲಹೆಗಳನ್ನೂ ನೀಡಿದ್ದರು. ಆದರೆ ಇಲ್ಲಿಯವರೆಗೂ ಅಂತಹ ಕೆಲಸಕ್ಕೆ ಕೈ ಹಾಕದೇ ಇದ್ದ ಟೀಮ್ ಇಂಡಿಯಾ ಈ ಪಂದ್ಯದ ಮೂಲಕ ಕೆಎಲ್ ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಿ ಯಶಸ್ಸನ್ನು ಕಂಡಿದೆ. ಈ ಮೂಲಕ ಕೆಎಲ್ ರಾಹುಲ್ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದು ತಂಡ ಸಮತೋಲನದಿಂದ ಕೂಡಿರಲಿದೆ ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications