
ಹೈದರಾಬಾದ್, ಮೇ 14: ಕ್ರಿಕೆಟ್ ಪ್ರಿಯರೆಲ್ಲಾ ಕಾದು ಕುಳಿತಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಏನಾಗಬಲ್ಲದು ಎಂದು ಮಾಜಿ ನಾಯಕ ಮೊಹಮ್ಮದ್ ಅಝರುದ್ದೀನ್ ಇದೇ ಸಂದರ್ಭದಲ್ಲಿ ಭವಿಷ್ಯ ನುಡಿದಿದ್ದಾರೆ.
ಭಾರತ ಕ್ರಿಕೆಟ್ ತಂಡವನ್ನು ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಮುನ್ನಡೆಸಿದ ಅನುಭವ ಹೊಂದಿರುವ ಮಾಜಿ ನಾಯಕ ಅಝರುದ್ದೀನ್, ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಓಡಿಐ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
"ನಮ್ಮ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿದೆ. ನಮ್ಮ ತಂಡದಲ್ಲಿ ಅತ್ಯುತ್ತಮ ಬೌಲರ್ಗಳಿದ್ದಾರೆ. ಹಲವರ ಪ್ರಕಾರ ವಿಶ್ವಕಪ್ನಲ್ಲಿ ಪಿಚ್ಗಳು ಬೌಲರ್ಗಳಿಗೆ ಹೆಚ್ಚು ನೆರವಾಗುವಂತಿದ್ದರೆ, ಭಾರತಕ್ಕೆ ಗೆಲ್ಲುವ ಅವಕಾಶ ಕಡಿಮೆ ಇದೆಯಂತೆ. ಆದರೆ, ನಮ್ಮ ತಂಡದಲ್ಲೂ ಎದುರಾಳಿ ತಂಡವನ್ನು ಆಲ್ಔಟ್ ಮಾಡಬಲ್ಲ ಬೌಲರ್ಗಳಿದ್ದಾರೆ. ವಿಶ್ವ ಶ್ರೇಷ್ಠ ಬೌಲಿಂಗ್ ವಿಭಾಗ ನಮ್ಮದು,'' ಎಂದು ಅಝರುದ್ದೀನ್ ಹೇಳಿದ್ದಾರೆ.
ಹೈದರಾಬಾದ್ ಮೂಲದ ಸ್ಟೈಲಿಷ್ ಬಲಗೈ ಬ್ಯಾಟ್ಸ್ಮನ್ ಅಝರುದ್ದೀನ್ ಭಾರತ ತಂಡದ ಪರ 334 ಏಕದಿನ ಪಂದ್ಯಗಳನ್ನು ಆಡಿದ್ದು, 9378 ರನ್ಗಳನ್ನು ಗಳಿಸಿದ್ದಾರೆ. ಜೊತೆಗೆ 99 ಟೆಸ್ಟ್ ಪಂದ್ಯಗಳಿಂದ 6215 ರನ್ಗಳನ್ನು ದಾಖಲಿಸಿದ್ದಾರೆ.
"ನಮ್ಮದು ಅತ್ಯುತ್ತಮ ತಂಡ. ಪ್ರಶಸ್ತಿ ಗೆಲ್ಲದೇ ಹೋದರೆ ನನಗಂತೂ ಬಹಳ ಬೇಸರವಾಗಲಿದೆ. ಭಾರತ ಗೆಲ್ಲುವ ನಂ.1 ತಂಡ, ಇಂಗ್ಲೆಂಡ್ ನಂ.2 ಮತ್ತು ಆಸ್ಟ್ರೇಲಿಯಾ ನಂ.3. ಈ ಮೂರು ತಂಡಗಳಿಗೆ ಉತ್ತಮ ಅವಕಾಶವಿದೆ. ಕ್ರಿಕೆಟ್ನಲ್ಲಿ ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ. ಟೂರ್ನಿಯಲ್ಲಿ ಹಲವು ತಂಡಗಳು ಆಘಾತ ಅನುಭವಿಸುತ್ತವೆ. ನಮ್ಮ ತಂಡಕ್ಕೆ ಈ ರೀತಿಯ ಆಘಾತ ಎದುರಾಗದೇ ಇರಲಿಯೆಂದು ಆಶಿಸುತ್ತೇನೆ,'' ಎಂದು ಅಝರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಭಾರತ ತಂಡ ಸೌತ್ ಹ್ಯಾಂಪ್ಟನ್ನಲ್ಲಿ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ವಿಶ್ವಕಪ್ಗೆ ಭಾರತ ಪ್ರಕಟಿಸಿರುವ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್ ರಾಹುಲ್, ವಿಜಯ್ ಶಂಕರ್, ಕೇದಾರ್ ಜಾಧವ್, ಎಂ.ಎಸ್ ಧೋನಿ (ವಿಕೆಟ್ಕೀಪರ್), ದಿನೇಶ್ ಕಾರ್ತಿಕ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ.