ಮುಂಬೈ, ಡಿಸೆಂಬರ್ 05 : 5ನೇ ಅಂಧರ ವಿಶ್ವಕಪ್ ಕ್ರಿಕೆಟ್ ಗೆ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ಮೂವರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
2018 ಜನವರಿ 7ರಿಂದ 21ರ ವರೆಗೆ ಪಾಕಿಸ್ತಾನ ಹಾಗೂ ದುಬೈನಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಕರ್ನಾಟಕದ ಬಸ್ಸಪ್ಪ ವದಗಲ್, ಸುನಿಲ್ ರಮೇಶ್ ಮತ್ತು ಪ್ರಕಾಶ್ ಜೈರಾಮಯ್ಯ ಅವರು 17 ಸದಸ್ಯರ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ, ಪಾಕಿಸ್ತಾನ, ನೇಪಾಳ ಬಾಂಗ್ಲಾದೇಶ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಈ ಟೂರ್ನಿ ಪಾಲ್ಗೊಳ್ಳಲಿವೆ. ವಿಶ್ವಕಪ್ ಟೂರ್ನಿಗೆ ಪುಣೆಯಲ್ಲಿ ನಡೆದ ಫೈನಲ್ ಶಿಬಿರದಲ್ಲಿ ಸುಮಾರು 56 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಈ ಪೈಕಿ ಆಯ್ಕೆ ಸಮಿತಿ ಅಂತಿಮವಾಗಿ 17 ಆಟಗಾರರನ್ನು ಆಯ್ಕೆ ಮಾಡಿದೆ.

ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ 17 ಸದಸ್ಯರ ಭಾರತ ತಂಡ ಡಿಸೆಂಬರ್ 6, 2017 ರಿಂದ ಜನವರಿ 4, 2018 ರವರೆಗೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಗೋಪಾಲನ್ ಕಾಂಪ್ಲೆಕ್ಸ್ ನಲ್ಲಿ ತರಬೇತಿ ತೊಡಗಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ತಂಡ: ಅಜಯ್ ಕುಮಾರ್ ರೆಡ್ಡಿ(ನಾಯಕ)(ಆ.ಪ್ರದೇಶ), ಎಂ ಡಿ ಜಾಫರ್ ಇಕ್ವಾಲ್ (ಒಡಿಶಾ), ನರೇಶ್ ಭಯ್ ತುಂಮ್ದ(ಗುಜರಾತ್), ಮಹೇಂದರ್ ವೈಷ್ಣವ್ (ತೆಲಂಗಾಣ) ಸೋನು ಗೋಲ್ಕರ್(ಮ.ಪ್ರದೇಶ), ಪ್ರೇಮ್ ಕುಮಾರ್(ಆ.ಪ್ರದೇಶ), ಬಸ್ಸಪ್ಪ ವದಗಲ್ (ಕರ್ನಾಟಕ), ವೆಂಕಟೇಶ್ವರ್(ಆ.ಪ್ರದೇಶ), ಗಣೇಶಭಾಯ್ ಮುಹುದ್ಕರ್(ಗುಜರಾತ್), ಸುರ್ಜೀತ್ ಘೋರಾ (ಪ.ಬಂಗಾಳ), ಅನಿಲ್ ಭಾಯ್ ಗರಿಯಾ(ಗುಜರಾತ್), ಪ್ರಕಾಶ್ ಜೈರಾಮಯ್ಯ(ಕರ್ನಾಟಕ), ದೀಪಕ್ ಮಲೀಕ್(ಹರಿಯಾಣ), ಸುನಿಲ್ ರಮೇಶ್(ಕರ್ನಾಟಕ), ಟಿ. ದುರ್ಗರಾವ್(ಆ.ಪ್ರದೇಶ), ಪಂಕಜ್(ಒಡಿಶಾ), ರಾಂಬೀರ್(ಹರಿಯಾಣ).