ಮುಂದಿನ ಹರಾಜಿನ ಕುರಿತು ಅನುಮಾನ ವ್ಯಕ್ತಪಡಿಸಿದ ಧೋನಿ
ಇತ್ತೀಚೆಗಷ್ಟೇ ನಡೆದ ಸಂದರ್ಶನದಲ್ಲಿ ಮಾತನಾಡಿದ್ದ ಎಂಎಸ್ ಧೋನಿ ಮುಂಬರಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆಟಗಾರನಾಗಿ ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆ ಎದುರಾದಾಗ 'ಮುಂಬರುವ ಐಪಿಎಲ್ ಹರಾಜಿನ ನಿಯಮಗಳೇನೆಂಬುದು ಇನ್ನೂ ಸರಿಯಾಗಿ ಗೊತ್ತಿಲ್ಲ. ಎಷ್ಟು ದೇಶಿ ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಎಷ್ಟು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬುದರ ಸ್ಪಷ್ಟ ಮಾಹಿತಿ ಸಿಗಬೇಕಿದೆ. ಹೀಗೆ ಮುಂಬರುವ ಐಪಿಎಲ್ ಹರಾಜಿನ ಕುರಿತು ಸಾಕಷ್ಟು ಗೊಂದಲಗಳಿದ್ದು ಯಾವ ರೀತಿ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ' ಎಂಬ ಹೇಳಿಕೆಯನ್ನು ಎಂಎಸ್ ಧೋನಿ ನೀಡಿದರು. ಎಂಎಸ್ ಧೋನಿ ಮುಂಬರಲಿರುವ ಐಪಿಎಲ್ ಹರಾಜಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದು ಅವರ ವಿದಾಯದ ಸುದ್ದಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ಮೆಂಟರ್ ಆಗಿ ಎಂಎಸ್ ಧೋನಿ ಆಯ್ಕೆ
ನಿಮಗೆಲ್ಲ ತಿಳಿದಿರುವ ಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಟೀಮ್ ಇಂಡಿಯಾಗೆ ಎಂಎಸ್ ಧೋನಿ ಮಾರ್ಗದರ್ಶಕನಾಗಿ ಆಯ್ಕೆಯಾಗಿದ್ದಾರೆ. ಈ ಅಂಶವೂ ಸಹ ಎಂಎಸ್ ಧೋನಿ ನಿವೃತ್ತಿ ಮೇಲಿನ ಅನುಮಾನವನ್ನು ಹೆಚ್ಚಾಗುವಂತೆ ಮಾಡಿತು ಎಂದರೆ ತಪ್ಪಾಗಲಾರದು. ಐಸಿಸಿ ನಿಯಮದ ಪ್ರಕಾರ ಆಟಗಾರನೋರ್ವ ಒಂದು ತಂಡಕ್ಕೆ ನಾಯಕ ಮತ್ತು ಮತ್ತೊಂದು ತಂಡಕ್ಕೆ ಮೆಂಟರ್ ಆಗಿ ಇರುವುದು ಅಪರಾಧ ಎನ್ನುವುದು ಅನುಮಾನಗಳನ್ನು ಹೆಚ್ಚಾಗುವಂತೆ ಮಾಡಿದೆ.
ಕಳೆದ ಬಾರಿ ಧೋನಿ ನೀಡಿದ್ದ ಉತ್ತರಕ್ಕೂ ಈ ಬಾರಿ ಧೋನಿ ನೀಡಿದ ಉತ್ತರಕ್ಕೂ ಅಜಗಜಾಂತರ ವ್ಯತ್ಯಾಸ!
ಕಳೆದ ಬಾರಿಯ ಐಪಿಎಲ್ ಟೂರ್ನಿಯ ವೇಳೆ ನಿವೃತ್ತಿಯ ಪ್ರಶ್ನೆ ಎದುರಾದಾಗ ಖಂಡಿತವಾಗಿಯೂ ಇಲ್ಲ ಎಂದು ತಕ್ಷಣವೇ ಉತ್ತರಿಸಿದ್ದ ಎಂ ಎಸ್ ಧೋನಿ ಈ ಬಾರಿ ಅದೇ ರೀತಿಯ ಪ್ರಶ್ನೆ ಎದುರಾದಾಗ ಕಳೆದ ಬಾರಿ ನೀಡಿದ್ದ ರೀತಿ ವಿಶ್ವಾಸದಿಂದ ಉತ್ತರವನ್ನು ನೀಡಲಿಲ್ಲ. ಬದಲಾಗಿ ಮುಂಬರುವ ದಿನಗಳಲ್ಲಿ ಯಾವ ರೀತಿ ಆಗುತ್ತದೆಯೋ ನೋಡೋಣ ಎಂಬ ಅನುಮಾಸ್ಪದ ಉತ್ತರವನ್ನು ನೀಡಿದರು. ಹೀಗೆ ಕಳೆದ ಬಾರಿ ಎಂಎಸ್ ಧೋನಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲಿದ್ದೇನೆ ಎಂದು ವಿಶ್ವಾಸದಿಂದ ನೀಡಿದ್ದ ಉತ್ತರವನ್ನು ಈ ಬಾರಿ ನೀಡದೇ ಇರುವುದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.