ಲಕ್ನೋ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಬುಧವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿಯ ಎಲಿಮಿನೇಟರ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಈ ಎಲಿಮಿನೇಟರ್ ಕಾಳಗದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ರನ್ಗಳ ಜಯಭೇರಿ ಬಾರಿಸಿದರು ಮತ್ತು ಈಗ ತಂಡವು ಕ್ವಾಲಿಫೈಯರ್ 2ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.
"ಆರ್ಸಿಬಿಯ ದಿನೇಶ್ ಕಾರ್ತಿಕ್ ಅವರು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3ರ ಅಡಿಯಲ್ಲಿ ಹಂತ 1 ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಶಿಕ್ಷೆಗೂ ಒಪ್ಪಿಕೊಂಡಿದ್ದಾರೆ' ಎಂದು ಪ್ರಕಟಣೆ ತಿಳಿಸಿದೆ. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಾಗಿ ಮ್ಯಾಚ್ ರೆಫರಿಯ ವಾಗ್ದಂಡನೆ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿದೆ," ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
23 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದ್ದ ಕಾರ್ತಿಕ್
ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದರು ಮತ್ತು ಅವರು ರಜತ್ ಪಾಟಿದಾರ್ (112 ನಾಟೌಟ್) ಜೊತೆಗೆ ಉತ್ತಮ ಜೊತೆಯಾಟವಾಡಿದ್ದರಿಂದ ಆರ್ಸಿಬಿ 20 ಓವರ್ಗಳಲ್ಲಿ 207/4 ರನ್ ಗಳಿಸಲು ಸಹಾಯ ಮಾಡಿದರು.
ಅಂತಿಮವಾಗಿ ಆರ್ಸಿಬಿ ಈ ಪಂದ್ಯವನ್ನು 14 ರನ್ಗಳಿಂದ ಗೆದ್ದುಕೊಂಡಿತು ಮತ್ತು ಇದೀಗ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ಮುಂಬೈ ಇಂಡಿಯನ್ಸ್ ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿದ ನಂತರ ಆರ್ಸಿಬಿ ಪ್ಲೇಆಫ್ಗೆ ಪ್ರವೇಶಿಸಿತು. ಆರ್ಸಿಬಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
15 ಪಂದ್ಯಗಳಲ್ಲಿ 324 ರನ್ ಗಳಿಸಿದ್ದಾರೆ
ಪ್ರಸಕ್ತ ಐಪಿಎಲ್ ಋತುವಿನಲ್ಲಿ ದಿನೇಶ್ ಕಾರ್ತಿಕ್ 15 ಪಂದ್ಯಗಳಲ್ಲಿ 324 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಗಾಗಿ ಭಾರತದ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ.
ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಈ ಋತುವಿನಲ್ಲಿ ಆರ್ಸಿಬಿಗಾಗಿ ಸರಾಸರಿ 64.80 ಮತ್ತು ಸ್ಟ್ರೈಕ್ ರೇಟ್ 187.28 ಆಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಔಟಾಗದೆ 66 ರನ್ ಗಳಿಸಿದ್ದು, ಟೂರ್ನಿಯ ಅತ್ಯಧಿಕವಾಗಿದೆ.
ಆಡುವ 11ರ ಬಳಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ
ಅದೃಷ್ಟದಾಟದಲ್ಲಿ ಪ್ಲೇಆಫ್ಗೆ ಪ್ರವೇಶಿಸಿದ ನಂತರ ಆರ್ಸಿಬಿ ನಿರ್ಣಾಯಕ ಪಂದ್ಯದಲ್ಲಿ ಸಂಘಟಿತ ಹೋರಾಟ ನಡೆಸಿ ಎಲಿಮಿನೇಟರ್ನಲ್ಲಿ ಲಕ್ನೋ ವಿರುದ್ಧ ಭರ್ಜರಿಯಾಗಿ ಗೆದ್ದರು. ಇದರಲ್ಲಿ ರಜತ್ ಪಾಟಿದಾರ್ ಅವರ ಅಜೇಯ 112 ರನ್ ಕೂಡಾ ಕ್ವಾಲಿಫೈಯರ್ 2 ತಲುಪಲು ಸಹಾಯ ಮಾಡಿತು. ಆದರೆ ಬೌಲಿಂಗ್ ವಿಭಾಗದಲ್ಲಿ ಬೌಲರ್ಗಳ ಕಳಪೆ ಪ್ರದರ್ಶನ ಮತ್ತೊಮ್ಮೆ ಪ್ರಮುಖ ಚರ್ಚೆಯಾಗಿದೆ. ಅದರ ಹೊರತಾಗಿಯೂ, ಆರ್ಸಿಬಿ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡುವ 11ರ ಬಳಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ ಇದೆ.