ಬದಲಾಗಬೇಕಿರುವುದು ನಾಯಕನಲ್ಲ: ಭಾರತ ತಂಡಕ್ಕೆ ಇರ್ಫಾನ್ ಕೊಟ್ಟ ಸಲಹೆ ಇದು

ಟಿ20 ವಿಶ್ವಕಪ್ನಲ್ಲಿ ಸೂಪರ್ 12 ಹಂತದಲ್ಲಿ ಅತ್ಯುತ್ತಮವಾಗಿ ಆಡಿದ್ದ ಭಾರತ ತಂಡ ಸೆಮಿಫೈನಲ್ನಲ್ಲಿ ಮುಗ್ಗರಿಸಿತ್ತು. ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲಿನ ಮೂಲಕ ವಿಶ್ವಕಪ್ ಗೆಲ್ಲುವ ಅಭಿಯಾನವನ್ನು ಕೊನೆಗಾಣಿಸಿತು.
ಭಾರತ ಸೆಮಿಫೈನಲ್ನಲ್ಲಿ ಸೋಲುತ್ತಿದ್ದಂತೆ ತಂಡದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಭಾರತದ ಆರಂಭಿಕ ಜೋಡಿಯ ವೈಫಲ್ಯದ ಬಗ್ಗೆ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಆಯ್ಕೆ ಬಗ್ಗೆ, ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳು ಮೂಡಿದವು. ಭವಿಷ್ಯದ ದೃಷ್ಟಿಯಿಂದ ಹಾರ್ದಿಕ್ ಪಾಂಡ್ಯ ಭಾರತದ ಟಿ20 ತಂಡಕ್ಕೆ ನಾಯಕನಾಗಲಿ ಎಂದು ಹಲವರು ಈಗಾಗಲೇ ಹೇಳಿದ್ದಾರೆ.
ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವಾಗ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಭಾರತ ತಂಡದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ, "ತಂಡದಲ್ಲಿ ನಾಯಕತ್ವ ಬದಲಾವಣೆ ಮಾಡುವುದರಿಂದ ಫಲಿತಾಂಶಗಳಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ. ಆದರೆ, ಭಾರತ ತಂಡ ನಾಲ್ಕು ವಿಚಾರಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ" ಎಂದು ಸಲಹೆ ನೀಡಿದರು.

ಒಬ್ಬರಾದರೂ ಆಕ್ರಮಣಕಾರಿಯಾಗಬೇಕು
ಟಿ20 ವಿಶ್ವಕಪ್ನಲ್ಲಿ ಭಾರತ ಆರಂಭಿಕ ಜೋಡಿ ವೈಫಲ್ಯ ಕಂಡಿತು. ಪವರ್ ಪ್ಲೇನಲ್ಲಿ ಉಳಿದ ಎಲ್ಲಾ ತಂಡಗಳಿಗಿಂದ ಭಾರತ ಕಡಿಮೆ ರನ್ ಗಳಿಸಿತು. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ನಿಧಾನಗತಿಯ ಆಟ ತಂಡದ ಉಳಿದ ಆಟಗಾರರ ಮೇಲೆ ಒತ್ತಡ ಹೇರಿತು.
ಇರ್ಫಾನ್ ಪಠಾಣ್ ಕೂಡ ಇದೇ ವಿಚಾರದಲ್ಲಿ ತಂಡ ಬದಲಾಗಬೇಕು ಎಂದು ಹೇಳಿದ್ದಾರೆ. ಆರಂಭಿಕರು ಆಕ್ರಮಣಕಾರಿ ಮನೋಭಾವ ರೂಢಿಸಿಕೊಳ್ಳಬೇಕು. ಇಬ್ಬರಲ್ಲಿ ಒಬ್ಬರಾದರೂ, ಪವರ್ ಪ್ಲೇನಲ್ಲಿ ವೇಗವಾಗಿ ರನ್ ಗಳಿಸಬೇಕು, ತಂಡ ಆಕ್ರಮಣಕಾರಿ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
IPL 2023: ಹರಾಜಿಗೂ ಮುನ್ನ 10 ತಂಡಗಳ ಬಳಿ ಉಳಿದಿರುವ ಪರ್ಸ್ ಮೊತ್ತ

ಒಬ್ಬ ವ್ರಿಸ್ಟ್ ಸ್ಪಿನ್ನರ್ ಆಡಲೇಬೇಕು
ಟಿ20 ವಿಶ್ವಕಪ್ನಲ್ಲಿ ಅನುಭವಿ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್ರನ್ನು ಸಂಪೂರ್ಣವಾಗಿ ಹೊರಗಿಡಲಾಯಿತು. ಬೇರೆ ತಂಡಗಳ ಲೆಗ್ ಸ್ಪಿನ್ನರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು, ಭಾರತ ತಂಡ ಮಾತ್ರ ಅಕ್ಷರ್ ಪಟೇಲ್ ಮತ್ತು ಅಶ್ವಿನ್ಗೆ ಅವಕಾಶ ನೀಡಿತು. ಇಬ್ಬರೂ ಕೂಡ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಸೆಮಿಫೈನಲ್ನಲ್ಲಿ ಚಹಾಲ್ರನ್ನು ಆಡಿಸಬೇಕಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇರ್ಫಾನ್ ಪಠಾಣ್ ಈಗ ತಂಡಕ್ಕೆ ಸಲಹೆ ನೀಡಿದ್ದು, ತಂಡದಲ್ಲಿ ಒಬ್ಬ ಮಣಿಕಟ್ಟಿನ ಸ್ಪಿನ್ನರ್ ಇರಲೇಬೇಕು, ಅವರು ವಿಕೆಟ್ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ.

ಅತ್ಯಂತ ವೇಗದ ಬೌಲರ್ ಬೇಕಿದೆ
ಟಿ20 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿದ್ದ ವೇಗಿಗಳು 120 ರಿಂದ 130 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು. ಆದರೆ, ತಂಡದಲ್ಲಿ 140-150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವವರು ಇರಬೇಕು ಎಂದು ಪಠಾಣ್ ಹೇಳಿದ್ದಾರೆ.
ಉಮ್ರಾನ್ ಮಲಿಕ್ ಸದ್ಯ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮಧ್ಯಮ ವೇಗಿಗಳ ಜೊತೆಯಲ್ಲಿ ಒಬ್ಬರಾದರೂ ಅತ್ಯಂತ ವೇಗದ ಬೌಲರ್ ಇರಬೇಕೆಂದು ಇರ್ಫಾನ್ ಹೇಳಿದ್ದಾರೆ.

ನಾಯಕನ ಬದಲಾವಣೆ ಉತ್ತಮ ನಿರ್ಧಾರವಲ್ಲ
ರೋಹಿತ್ ಶರ್ಮಾ ಭಾರತದ ನಾಯಕರಾಗಿ ಅಧಿಕಾರ ವಹಿಸಿಕೊಂಡು ಒಂದೂವರೆ ವರ್ಷಗಳು ಮಾತ್ರ ಆಗಿದೆ. ಅವರ ನಾಯಕತ್ವದಲ್ಲಿ ತಂಡ ಉತ್ತಮ ಸಾಧನೆ ಮಾಡಿದೆ. ಟಿ20 ಸರಣಿಗಳನ್ನು ಸತತವಾಗಿ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅವರ ನಾಯಕತ್ವ ಬದಲಾವಣೆ ಮಾಡುವುದರಿಂದ ತಂಡಕ್ಕೆ ಹೆಚ್ಚಿನ ಲಾಭವೇನು ಆಗುವುದಿಲ್ಲ ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಈಗಾಗಲೇ ಹಲವು ಬಾರಿ ಗಾಯಗೊಂಡಿರುವ ಇತಿಹಾಸ ಹೊಂದಿದ್ದಾರೆ. ಅವರ ಮೇಲೆ ನಾಯಕತ್ವದ ಹೊರೆ ಹಾಕುವುದು ಸರಿಯಲ್ಲ. ಆಲ್ರೌಂಡರ್ ಆಗಿರುವುದರಿಂದ ಅವರ ಮೇಲೆ ಈಗಾಗಲೇ ಹೆಚ್ಚಿನ ಒತ್ತಡ ಇರುತ್ತದೆ, ಅವರು ಆಟದ ಮೇಲೆ ಗಮನ ನೀಡಲು ಬಿಡಬೇಕು ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications