ಬೆಂಗಳೂರು, ಫೆಬ್ರವರಿ 07: ವಿಜಯ್ ಹಜಾರೆ ಟೂರ್ನಿಯ ಮೊದಲ ಏಕದಿನ ಪಂದ್ಯದಲ್ಲಿ ಕರ್ನಾಟಕ ಕ್ರಿಕೆಟ್ ತಂಡವು ಬರೋಡ ವಿರುದ್ಧ 86 ರನ್ಗಳ ಭರ್ಜರಿ ವಿಜಯ ಸಾಧಿಸಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡಿದ ರಾಜ್ಯ ತಂಡ ಮೊದಲಿಗೆ ಖ್ಯಾತ ಆಟಗಾರ ಕೆ.ಎಲ್.ರಾಹುಲ್ ವಿಕೆಟ್ ಕಳೆದುಕೊಂಡರೂ ಸಹಿತ ಮತ್ತೊಬ್ಬ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರ ಆಕರ್ಷಕ ಶತಕದ ನೆರವಿನಿಂದ 312 ರನ್ ಗಳಿಸಿತು.
ಮಯಾಂಕ್ಗೆ ಉತ್ತಮ ಸಾಥ್ ನೀಡಿದ ಆರ್. ಸಮರ್ಥ್ 77 ರನ್ ಗಳಿಸಿದರು. ಕೊನೆಯಲ್ಲಿ ಮಿಮಚಿನ ಬ್ಯಾಟಿಂಗ್ ಮಾಡಿದ ನಾಯಕ ವಿನಯ್ಕುಮಾರ್ 21 ಬಾಲ್ನಲ್ಲಿ 34 ರನ್ ಸಿಡಿಸಿದರು.
313ರನ್ ಗುರಿ ಬೆನ್ನತ್ತಿದ ಬರೋಡ ತಂಡ ಉತ್ತಮ ಆರಂಭ ಕಂಡಿತಾದರೂ ಕರ್ನಾಟಕದ ವೇಗದ ದಾಳಿಯ ಮುಂದೆ ನಿಲ್ಲಲಾಗಲಿಲ್ಲ. ಆರಂಭಿಕ ಬ್ಯಾಟ್ಸ್ಮನ್ ಕೇದಾರ್ ಜಾದವ್ 48 ರನ್ ಗಳಿಸಿ ಔಟ್ ಆದರು. ಆ ನಂತರ ಕೃನಾಲ್ ಪಾಂಡ್ಯಾ ಅಲ್ಪ ಭರವಸೆ ಮೂಡಿಸಿದರಾದರು 39 ರನ್ ಗಳಿಸಿ ಗೌತಮ್ ಬೌಲಿಂಗ್ನಲ್ಲಿ ಎಲ್ಬಿಡ್ಬು ಬಲೆಗೆ ಬಿದ್ದರು.
ಅಪಾಯಕಾರಿಯಾಗಬಹುದೆಂಬ ಅನುಮಾನವಿದ್ದ ಯೂಸಫ್ ಪಠಾಣ್ ಕೇವಲ 2 ರನ್ ಗಳಿಸಿ ಪೆವಿಲಿಯನ್ ಹಾದಿ ತುಳಿದರು. ಕರ್ನಾಟಕ ತಂಡದ ಬೌಲಿಂಗ್ ದಾಳಿಗೆ ತರಗೆಲೆಗಳಾದ ಬರೋಡಾ ಆಟಗಾರರು ಕೇವಲ 180 ರನ್ಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿನಲ್ಲಿದ್ದರು.
ಆದರೆ ಮಂದ ಬೆಳಕಿನಿಂದಾಗಿ ಪಂದ್ಯಕ್ಕೆ ಅಡ್ಡಿಯಾದ ಕಾರಣ ಕರ್ನಾಟಕವನ್ನು 86 ರನ್ಗಳಿಗೆ ವಿಜೇತ ಎಂದು ಅಂಪೈರ್ಗಳು ಘೋಷಿಸಿದರು. ಕರ್ನಾಟಕದ ಅತ್ಯುತ್ತಮ ಬೌಲಿಂಗ್ ನಡೆಸಿದ ಕೆ.ಗೌತಮ್ 4 ವಿಕೆಟ್ ಉರುಳಿಸಿದರು. ಶ್ರೇಯಸ್ ಗೌತಮ್ 3 ಬಲಿ ಪಡೆದರು. ಪಿ.ಕೃಷ್ಣ ಅವರು ಒಂದು ವಿಕೆಟ್ ಪಡೆದರು.