ಬೆಂಗಳೂರು ನವೆಂಬರ್ 28: ಕೆಪಿಎಲ್ ಫಿಕ್ಸಿಂಗ್ ಪ್ರಕರಣ ಬಗೆದಷ್ಟೂ ಆಳಕ್ಕಿಳಿಯುತ್ತಿದೆ. ಇದು ಕೇವಲ ಆಟಗಾರರಿಗೆ ಮಾತ್ರವಲ್ಲಾ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ಗೇ ಉರುಳಾದರೂ ಅಚ್ಚರಿಯಿಲ್ಲ. ಯಾಕಂದರೆ ಸ್ವತಃ ಕೆಎಸ್ಸಿಎ ವಿರುದ್ಧವೇ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಕೆಎಸ್ಸಿಎ ಸಂಸ್ಥೆಯನ್ನೇ ಸೂಪರ್ಸೀಡ್ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಧಿಸಿದಂತೆ ಸಿಸಿಬಿ ತನಿಖೆಯನ್ನು ಚುರುಕುಗೊಳಿಸಿದೆ. ಆದರೆ ಪ್ರಕರಣದ ತನಿಖೆಗೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ನಗರ ಮುಖ್ಯ ಪೊಲೀಸ್ ಆಯುಕ್ತರು ಪತ್ರ ಬರೆಯಲು ಮುಂದಾಗಿದ್ದಾರೆ.
ಕೆಪಿಎಲ್ ಫಿಕ್ಸಿಂಗ್: ಎಲ್ಲಾ ಆಟಗಾರಿಗೂ ಸಮನ್ಸ್ ನೀಡಿದ ಸಿಸಿಬಿ
ಕೆಪಿಎಲ್ ಫಿಕ್ಸಿಂಗ್ ಪ್ರಕರಣದಲ್ಲಿ ಕೆಎಸ್ಸಿಎ ಅಧಿಕಾರಿಗಳು ಕೂಡ ಭಾಗಿಯಾಗಿರುವ ಶಂಕೆಯಿದೆ. ತನಿಖೆಗೆ ಸರಿಯಾದ ದಾಖಲೆಗಳನ್ನು ಸಿಸಿಬಿ ಅಧಿಕಾರಿಗಳಿಗೆ ನೀಡುತ್ತಿಲ್ಲ. ಈ ಕಾರಣವನ್ನಿಟ್ಟು ಸರ್ಕಾರಕ್ಕೆ ಸೂಪರ್ ಸೀಡ್ ಮಾಡುವಂತೆ ಮನವಿ ಮಾಡಲಿದ್ದಾರೆ.
ತನಿಖೆ ಸಂಪೂರ್ಣ ಮುಗಿಯುವವರೆಗೂ ಸಂಸ್ಥೆಯನ್ನು ಸೂಪರ್ ಸೀಡ್ ಮಾಡಬೇಕು, ಐಎಎಸ್ ದರ್ಜೆಯ ಅಧಿಕಾರಿಯನ್ನು ನೇಮಿಸಿ ಆಡಳಿತ ನಿರ್ವಹಣೆಯ ಜವಾಬ್ಧಾರಿಯನ್ನು ನೀಡಬೇಕು ಎಂದು ಬೆಂಗಳೂರು ನಗರ ಮುಖ್ಯಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಪತ್ರವನ್ನು ಬರೆದು ಮನವಿ ಮಾಡಿಕೊಳ್ಳಲಿದ್ದಾರೆ.