
ಟೀಮ್ ಇಂಡಿಯಾದಲ್ಲಿ ಸುದೀರ್ಘ ಕಾಲದಿಂದ ತಂಡದಲ್ಲಿ ಅಸ್ಥಿರ ಸ್ಥಾನವನ್ನು ಹೊಂದಿರುವ ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಮತ್ತೆ ಅವಕಾಶ ಪಡೆದುಕೊಂಡಿದ್ದಾರೆ. 2022ರಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು ಕೂಡ ತೀವ್ರ ಪೈಪೋಟಿಯ ಕಾರಣದಿಂದಾಗಿ ಸಂಜು ಅವಕಾಶ ವಂಚಿತವಾಗುತ್ತಲೇ ಇದ್ದಾರೆ. ಇದೀಗ ಚುಟುಕು ಮಾದರಿಯಲ್ಲಿ ಮತ್ತೊಂದು ಅವಕಾಶ ದೊರೆತಿರುವ ಕಾರಣ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಬೇಕಾದ ಸವಾಲು ಕೇರಳದ ಸ್ಪೋಟಕ ಆಟಗಾರನ ಮೇಲಿದೆ.
ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವ ಸಂಜು ಸ್ಯಾಮ್ಸನ್ ಬಗ್ಗೆತಂಡದ ಮುಖ್ಯ ಕೋಚ್ ಆಗಿರುವ ಕುಮಾರ್ ಸಂಗಕ್ಕರ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸಂಜು ಸ್ಯಾಮ್ಸನ್ಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದು ತಾಳ್ಮೆಯಿಂದಲೇ ತನ್ನ ಅವಕಾಶಕ್ಕಾಗಿ ಕಾಯುವಂತೆ ಹೇಳಿದ್ದಾರೆ. ತವರಿನಲ್ಲಿ ನಡೆಯುವ ಸರಣಿ ಆರಂಭವಾದ ಬಳಿಕ ಸಂಜು ಅವರಲ್ಲಿನ ಪ್ರತಿಭೆಗೆ ನ್ಯಾಯ ದೊರೆಯಲಿದೆ ಎಂದಿದ್ದಾರೆ ಸಂಗಕ್ಕರ.
ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಜನವರಿ 3ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಆರಂಭವಾಗುವ ಮೂಲಕ ಈ ಟಿ20 ಸರಣಿ ಆರಂಭವಾಗಲಿದೆ.
ರಾಜಸ್ಥಾನ್ ರಾಯಲ್ಸ ತಂಡದಲ್ಲಿ ಸಂಜು ಸ್ಯಾಮ್ಸನ್ ಜೊತೆಗೆ ನಿಕಟ ಬಾಂಧವ್ಯ ಹೊಂದಿರುವ ಕುಮಾರ್ ಸಂಗಕ್ಕರ ಸಂಜು ಪ್ರತಿಭೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತ ಸಂಜು ಸ್ಯಾಮ್ಸನ್ ಅವರ ಅತ್ಯುತ್ತಮ ಕೆಲ ವರ್ಷಗಳನ್ನು ಕಳೆದುಯಕೊಂಡಿದೆ. ಈಗ ಅದನ್ನು ಸರಿಪಡಿಸಿಕೊಳ್ಳಲು ಸೂಕ್ತವಾದ ಸಂದರ್ಭ ಎಂದಿದ್ದಾರೆ ಶ್ರೀಲಂಕಾದ ದಿಗ್ಗಜ ಆಟಗಾರ.
"ಆತನಲ್ಲಿ ಅದ್ಭುತ ಕೌಶಲ್ಯವಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನ ಗುಣ ಹೇಗಿರುತ್ತದೆ ಎಂದರೆ ನಿಮಗೆ ಯಾವಾಗ ಬೇಕಾದರೂ ಅವಕಾಶ ದೊರೆಯಬಹುದು, ಆಗ ಅದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ನೀವು ಅಂಥಾ ಪರಿಸ್ಥಿತಿಗೆ ಒಗ್ಗಿಕೊಳ್ಳಲೇಬೇಕು. ಸಂಜು ಸ್ಯಾಮ್ಸನ್ ಅದರ ಅಭ್ಯಾಸವಿದೆ. ಸಂಜು ಮಾಡಬೇಕಾಗಿರುವುದು ಏನೆಂದರೆ ಸಿಕ್ಕ ಅಕಾಶವನ್ನು ಮೈದಾನದಲ್ಲಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಭಾರತ ತಂಡದಲ್ಲಿ ಆಡಲು ಸಾಕಷ್ಟು ಸಿದ್ಧತೆಯನ್ನು ಸಂಜು ಮಾಡಿಕೊಂಡಿದ್ದಾರೆ. ಆದರೆ ತಂಡದಲ್ಲಿ ನೆಲೆಯೂರಲು ಹೆಚ್ಚಿನ ಕಾಲಾವಕಾಶವನ್ನು ಆತನಿಗೆ ನೀಡಬೇಕಿದೆ ಎಂದಿದ್ದಾರೆ ಸಂಗಕ್ಕರ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಶಿವಂ ಮಾವಿ, ಮುಖೇಶ್ ಕುಮಾರ್