ಐಪಿಎಲ್ 15ನೇ ಆವೃತ್ತಿಯಲ್ಲಿ ಸತತವಾಗಿ 5 ಸೋಲುಗಳನ್ನು ಅನುಭವಿಸಿರುವ ಮುಂಬೈ ತಂಡ ಅತೀವ ಮುಖಭಂಗಕ್ಕೆ ಒಳಗಾಗಿದೆ. ಮುಂಬೈ ತಂಡದ ಬೌಲಿಂಗ್ ವಿಭಾಗದಲ್ಲಿ ಕಳಪೆ ಗುಣಮಟ್ಟದ ಪ್ರದರ್ಶನ ನೀಡುತ್ತಿದ್ದು, ಒತ್ತಡವನ್ನು ನಿಭಾಯಿಸುವಲ್ಲಿ ಬೌಲರ್ಗಳು ವಿಫಲರಾಗಿದ್ದಾರೆ. ಜೊತೆಗೆ ಗಾಯಾಳು ಜೋಫ್ರಾ ಆರ್ಚರ್ ಅನುಪಸ್ಥಿತಿ ತಂಡವನ್ನು ನೋಯಿಸುತ್ತಿದೆ ಎಂದು ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಒಪ್ಪಿಕೊಂಡಿದ್ದಾರೆ.
ಬುಧವಾರ ಏ.13 ರಂದು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಜರುಗಿದ ಪಂಜಾಬ್ ವಿರುದ್ದದ ಪಂದ್ಯದಲ್ಲಿ 12 ರನ್ಗಳ ಸೋಲನ್ನು ಅನುಭವಿಸುವ ಮೂಲಕ ಮುಂಬೈ ತಂಡ ಈ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಜೋಫ್ರಾ ಆರ್ಚರ್ ಅವರನ್ನು ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 8 ಕೋಟಿಗೆ ಖರೀದಿಸಿತ್ತು. ಆದ್ರೆ ತಂಡದಲ್ಲಿರುವ ವೇಗಿಗಳು ಲಯಬದ್ದವಾಗಿ ಬೌಲ್ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ. ಒತ್ತಡ ನಿರ್ವಹಿಸುವಲ್ಲಿ ತಂಡಕ್ಕೆ ಆರ್ಚರ್ ಸಹಾಯಕರಾಗುತ್ತಿದ್ದರು, ಆರ್ಚರ್ 2023 ರ ಆವೃತ್ತಿಯ ವೇಳೆಗೆ ಫಿಟ್ ಆಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ನಾವು ಹರಾಜಿನಲ್ಲಿ ಖರೀದಿಸಿದ ಅತ್ಯುತ್ತಮ ಬೌಲರ್ಗಳಲ್ಲಿ ಆರ್ಚರ್ ಒಬ್ಬರಾಗಿದ್ದರು. ಅದರೇ ಅವರು ಪ್ರಸ್ತುತದಲ್ಲಿ ತಂಡದೊಂದಿಗೆ ಗುರುತಿಸಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿರುವುದು ಕಠಿಣವಾಗಿದೆ. ಆದರೆ ನಮ್ಮ ಬಳಿ ಇರುವ ಬೌಲರ್ಗಳನ್ನು ಹೇಗೆ ಉತ್ತಮವಾಗಿ ನಿರ್ವಹಿಸಬಹುದು ಎಂಬುದರ ಮೇಲೆ ಗಮನ ಹರಿಸುತ್ತಿದ್ದೇವೆ ಎಂದು ಜಯವರ್ಧನೆ ಹೇಳಿದರು.
ಮುಂಬೈ ತಂಡದ ಬೌಲಿಂಗ್ ಲೈನ್-ಅಪ್ನಲ್ಲಿ ಕೆಲವು ದೊಡ್ಡ ಹೆಸರುಗಳನ್ನು ಹೊಂದಿದ್ದರೂ, ಕೇವಲ ಇಬ್ಬರು ಮುಂಬೈ ಬೌಲರ್ಗಳು ಮಾತ್ರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ 20 ರಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತದಲ್ಲಿ ಪ್ರಮುಖ ವೇಗದ ಬೌಲರ್, ಜಸ್ಪ್ರೀತ್ ಬುಮ್ರಾ ಕೂಡ ಕಳೆಗುಂದಿದ್ದು, ಐದು ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್ಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಐದು ಪಂದ್ಯಗಳಲ್ಲಿ ಆರಂಭಿಕ ಬೌಲಿಂಗ್ ನಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗುತ್ತಿದ್ದರೂ, ನಂತರದ ಓವರ್ಗಳಲ್ಲಿ ಒತ್ತಡ ನಿಯಂತ್ರಿಸುವಲ್ಲಿ ವಿಫಲಾರಾಗುತ್ತಿದ್ದೇವೆ ಅದೇ ಕಾರಣಕ್ಕೆ ಎರಡು ಅಥವಾ ಮೂರು ಓವರ್ಗಳಲ್ಲಿ ಹೆಚ್ಚಿನ ರನ್ಗಳು ನೀಡಲಾಗುತ್ತಿರುವುದು ನೋವುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.
ಪಂಜಾಬ್ ವಿರುದ್ದ, ಬೌಲಿಂಗ್ ಪ್ರದರ್ಶನ ನೀಡಿದ ಮುಂಬೈ ತಂಡದ ಬೇಸಿಲ್ ಥಂಪಿ, ನಾಲ್ಕು ಓವರ್ ಗಳಲ್ಲಿ 47 ರನ್ ನೀಡಿ 2 ವಿಕೆಟ್ ಪಡೆದ್ರೆ, ಉನಾದ್ಕಟ್ ನಾಲ್ಕು ಓವರ್ಗೆ 44 ರನ್ ನೀಡಿ ಒಂದು ವಿಕೆಟ್ ಪಡೆದರು. ಟೈಮಲ್ ಮಿಲ್ಸ್ ಮತ್ತು ಮುರುಗನ್ ಅಶ್ವಿನ್ ಕೂಡ ಪ್ರತಿ ಓವರ್ಗೆ ಎಂಟಕ್ಕಿಂತ ಹೆಚ್ಚು ರನ್ ನೀಡಿದ್ದರಿಂದ ನೆಲ ಕಚ್ಚುವಂತಾಗಿದೆ ಎಂದು ಮುಂಬೈ ಕೋಚ್ ಮಹೇಲಾ ಜಯವರ್ಧನೆ ಹೇಳಿದ್ದಾರೆ.