ಟೀಮ್ ಇಂಡಿಯಾ ಟಿ20 ವಿಶ್ವಕಪ್ನ ಸೋಲಿನ ಬಳಿಕ ಮತ್ತೊಂದು ದ್ವಿಪಕ್ಷೀಯ ಸರಣಿಗೆ ಸಜ್ಜಾಗಿದೆ. ಆದರೆ ಟಿ20 ವಿಶ್ವಕಪ್ ಸೋಲಿನ ಬಗ್ಗೆ ಇನ್ನೂ ಚರ್ಚೆ, ವಿಶ್ಲೇಷಣೆಗಳು ನಿಂತಿಲ್ಲ. ಟೀಮ್ ಇಂಡಿಯಾ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಅನುಭವಿಸಿದ ಹೀನಾಯ ಸೋಲಿನ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮಾತನಾಡಿದ್ದು ಟೀಮ್ ಇಂಡಿಯಾದ ಸೋಲಿಗೆ ಕಾರಣ ಹೇಳಿದ್ದಾರೆ.
ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ 10 ವಿಕೆಟ್ಗಳ ಬೃಹತ್ ಅಂತರದಿಂದ ಸೋಲು ಅನುಭವಿಸಲು ತಂಡದ ಈ ಒಂದು ನಿರ್ಧಾರ ಕಾರಣ ಎಂದಿದ್ದಾರೆ ಮೊಹಮ್ಮದ್ ಕೈಫ್. ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಯುಜುವೇಂದ್ರ ಚಾಹಲ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಂಡಿರಲಿಲ್ಲ. ಇದು ಟೀಮ್ ಇಂಡಿಯಾ ಪಾಲಿಗೆ ದೊಡ್ಡ ಹಿನ್ನಡೆಯಾಯಿತು ಎಂಬ ಅಭಿಪ್ರಾಯವನ್ನು ಮೊಹಮ್ಮದ್ ಕೈಫ್ ವ್ಯಕ್ತಪಡಿಸಿದ್ದಾರೆ.
IPL 2023: ನಿವೃತ್ತಿ ಘೋಷಿಸಿದ ಪೊಲಾರ್ಡ್ಗೆ ಸಚಿನ್, ರೋಹಿತ್ ಹೇಳಿದ್ದೇನು?
ಟೀಮ್ ಇಂಡಿಯಾ ರಣತಂತ್ರವನ್ನು ಹೆಣೆಯುವಲ್ಲಿ ಪ್ರಮಾದ ಎಸಗಿತು ಎಂದಿರುವ ಮೊಹಮ್ಮದ್ ಕೈಪ್ ಇದಕ್ಕೆ ಉತ್ತರವನ್ನು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಅವರೇ ನೀಡಬೇಕಿದೆ ಎಂದಿದ್ದಾರೆ. ಯುಜುವೇಂದ್ರ ಚಾಹಲ್ ಅವರನ್ನು ಆಡುವ ಬಳಗದಿಂದ ಹೊರಗಿಡಲು ಕಾರಣವೇನು ಎಂಬುದಕ್ಕೆ ಇವರು ವಿವರಣೆ ನೀಡಬೇಕು ಎಂದಿದ್ದಾರೆ.
"ಲೆಗ್ ಸ್ಪಿನ್ನರ್ಗಳು ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾವೇ ಆಗಿರಲಿ, ಪ್ರತಿ ತಂಡ ಕೂಡ ಲೆಗ್ ಸ್ಪಿನ್ನರ್ನೊಂದಿಗೆ ಕಣಕ್ಕಿಳಿದೇ ಇಳಿಯುತ್ತದೆ. ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿಯೂ ನೀವು ಗಮನಿಸಿದರೆ ಅಗ್ರ ಹತ್ತು ಬೌಲರ್ಗಳ ಪೈಕಿ ಕನಿಷ್ಠ ನಾಲ್ಕರಿಂದ ಐದು ಲೆಗ್ ಸ್ಪಿನ್ನರ್ಗಳೇ ಇರುತ್ತಾರೆ. ಆಸ್ಟ್ರೇಲಿಯಾದಲ್ಲಿ ಫಿಂಗರ್ ಸ್ಪಿನ್ನರ್ಗಳು ಹೆಚ್ಚು ಯಶಸ್ಸು ಸಾಧಿಸುವುದಿಲ್ಲ. ಚಾಹಲ್ ಅವರನ್ನು ವಿಶ್ವಕಪ್ನಲ್ಲಿ ಆಡಿಸದಿರುವುದು ದೊಡ್ಡ ತಪ್ಪು. ಇದಕ್ಕೆ ರೋಹಿತ್ ಹಾಗೂ ರಾಹುಲ್ ದ್ರಾವಿಡ್ ಅವರೇ ಉತ್ತರ ನೀಡಬೇಕು" ಎಂದಿದ್ದಾರೆ ಮೊಹಮ್ಮದ್ ಕೈಫ್.
ಇಂಗ್ಲೆಂಡ್ ಏಕದಿನ ವಿಶ್ವಕಪ್ ಉಳಿಸಿಕೊಳ್ಳಲು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರಾ ಬೆನ್ ಸ್ಟೋಕ್ಸ್!
ಇನ್ನು ಇದೇ ಸಂದರ್ಭದಲ್ಲಿ ಐಪಿಎಲ್ನಲ್ಲಿ ನೀಡಿದ ಪ್ರದರ್ಶನದಿಂದ ಪ್ರಭಾವಗೊಂಡು ಪ್ರಮುಖ ಟೂರ್ನಿಗೆ ಆಟಗಾರರ ಆಯ್ಕೆ ಮಾಡುವ ವಿಚಾರವಾಗಿ ಆಯ್ಕೆ ಮಂಡಳಿಯನ್ನು ಕೂಡ ಮೊಹಮ್ಮದ್ ಕೈಫ್ ಟೀಕಿಸಿದ್ದಾರೆ. "ಐಪಿಎಲ್ನಿಂದ ಪ್ರಭಾವಗೊಂಡು ಮಹತ್ವದ ಟೂರ್ನಿಗಳಿಗೆ ಆಟಗಾರರನ್ನು ಆಯ್ಕೆ ಮಾಡುತ್ತಿರುವುದರಿಂದಾಗಿ ದೊಡ್ಡ ಎಡವಟ್ಟುಗಳಾಗುತ್ತಿವೆ. ಚಾಹಲ್ ಕಳೆದ ವರ್ಷ ಆಡಿರಲಿಲ್ಲ. ಈ ವರ್ಷ ಕೂಡ ಸಂಪೂರ್ಣ ಟೂರ್ನಿಯಲ್ಲಿ ಬೆಂಚ್ ಕಾದರು" ಎಂದು ಮೊಹಮ್ಮದ್ ಕೈಫ್ ಪ್ರತಿಕ್ರಿಯಿಸಿದ್ದಾರೆ.
ವೈಟ್ಬಾಲ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಯುಜುವೇಂದ್ರ ಚಾಹಲ್ ಅವರನ್ನು ಈ ವರ್ಷದ ಟಿ20 ವಿಶ್ವಕಪ್ನಲ್ಲಿ ಒಂದು ಪಂದ್ಯದಲ್ಲಿಯೂ ಆಡಿಸಿರಲಿಲ್ಲ. ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನು ಮಾತ್ರವೇ ಇಡೀ ಟೂರ್ನಿಯಲ್ಲಿ ಕಣಕ್ಕಿಳಿಸಿತ್ತು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್. ಈ ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗಿದೆ.