ರಣಜಿ ಪಂದ್ಯಕ್ಕೆ ಸಜ್ಜಾದ ಸಾಂಸ್ಕೃತಿಕ ನಗರಿ

ಮೈಸೂರು, ನವೆಂಬರ್. 27 : ನಾಳೆ ಸಾಂಸ್ಕೃತಿಕ ನಗರಿಯಲ್ಲಿ ರಣಜಿ ಹವಾ ಮೇಳೈಸಲಿದೆ. ಈ ಹಿನ್ನೆಲೆಯಲ್ಲಿ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ಕೊರೆಯುವ ಚಳಿಯಲ್ಲಿಯೂ ಕ್ರಿಕೆಟ್ ಪ್ರಿಯರು ಕುಣಿದು ಕುಪ್ಪಳಿಸುತ್ತಿದ್ದಾರೆ.
ಈಗಾಗಲೇ ದಸರಾ ಕ್ರೀಡಾಕೂಟ ಹಾಗೂ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಸವಿಯನ್ನು ಸವಿದಿದ್ದ ಕ್ರೀಡಾ ಪ್ರೇಮಿಗಳು ಇದೀಗ ರಣಜಿ ಪಂದ್ಯಾವಳಿಯನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಪಂದ್ಯ ವೀಕ್ಷಿಸಲು ಪ್ರವೇಶ ದರ ಇಲ್ಲ. ಹೀಗಾಗಿ ಹೆಚ್ಚಿನ ಪ್ರೇಕ್ಷಕರನ್ನು ನಿರೀಕ್ಷಿಸಲಾಗಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ 2006ರಿಂದಲೂ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಾವಳಿಗಳಿಗೆ ಆತಿಥ್ಯ ನೀಡುತ್ತಿದೆ. 2010ರಲ್ಲಿ ನಡೆದ ಕರ್ನಾಟಕ ಮತ್ತು ಮುಂಬಯಿ ನಡುವಿನ ಫೈನಲ್ ರಣಜಿ ಸೇರಿದಂತೆ ಒಟ್ಟು 13 ರಣಜಿ ಪಂದ್ಯಗಳು ಇಲ್ಲಿ ನಡೆದಿವೆ.
2013ರಲ್ಲಿ ಭಾರತ 'ಎ' ಮತ್ತು ವಿಂಡೀಸ್ 'ಎ' ತಂಡಗಳ ನಡುವಿನ ಪಂದ್ಯ ಹಾಗೂ 2014ರ ನವೆಂಬರ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಅಂತಾರಾಷ್ಟ್ರೀಯ ಮಟ್ಟದ ಟೆಸ್ಟ್ ಪಂದ್ಯಕ್ಕೂ ಸಾಕ್ಷಿಯಾಗಿತ್ತು. ನ. 28ರಂದು ನಾಳೆ ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳ ನಡುವೆ ರಣಜಿ ಕ್ರಿಕೆಟ್ ನಡೆಯಲಿದೆ.
ಇದಕ್ಕೆ ಈಗಾಗಲೇ ಬಿಸಿಸಿಐನ ಕ್ಯೂರಿಯೇಟರ್ ವೆಂಕಟಕೃಷ್ಣ ನಗರಕ್ಕೆ ಆಗಮಿಸಿ ಮೈದಾನದ ಪಿಚ್ ಅನ್ನು ಕ್ರಿಕೆಟ್ ಪಂದ್ಯಾವಳಿಗಾಗಿ ಹದಗೊಳಿಸಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಆಟಗಾರರು ಎರಡು ದಿನ ಗಂಗೋತ್ರಿ ಮೈದಾನದಲ್ಲಿ ಅಭ್ಯಾಸ ನಡೆಸಿದ್ದಾರೆ. ಈ ಋತುವಿನಲ್ಲಿ ಕರ್ನಾಟಕ ತಂಡಕ್ಕೆ ರಣಜಿ ಟೂರ್ನಿಯ ಮೂರನೇ ಪಂದ್ಯ ಇದಾಗಿದೆ.
ಕಳೆದ ಬಾರಿ ಸೆಮಿಫೈನಲ್ ತಲುಪಿ ವಿದರ್ಭ ತಂಡದ ವಿರುದ್ಧ ಸೋತಿತ್ತು. ಹೀಗಾಗಿ ಈ ಬಾರಿಯಾದರೂ ಕರ್ನಾಟಕ ರಣಜಿ ಟ್ರೋಫಿ ಗೆಲ್ಲಲಿ ಎಂಬುದು ಅಭಿಮಾನಿಗಳ ಹಾರೈಕೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications