
ಮೈಸೂರು, ಡಿಸೆಂಬರ್ 26: ಗುರುವಾರ (ಡಿಸೆಂಬರ್ 26) ನಡೆದ ಸೂರ್ಯಗ್ರಹಣ, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೇಲೆಯೂ ಪರಿಣಾಮ ಬೀರಿದೆ. ಗ್ರಹಣದ ವೇಳೆ ಸೂರ್ಯನನ್ನು ನೋಡ ಕೂಡದು, ಹೊರಗಡೆ ತಿರುಗಾಡಕೂಡದು ಎಂದೆಲ್ಲ ಹೇಳೋರಿದ್ದಾರೆ. ಅದಕ್ಕೆ ತಕ್ಕಂತೆ ಪಂದ್ಯಗಳ ವೇಳಾಪಟ್ಟಿಯೇ ಬದಲಾದ ಘಟನೆ ನಡೆದಿದೆ.
ಗುರುವಾರ, ಬೆಳಗ್ಗೆ 8.06ಕ್ಕೆ ಆರಂಭಗೊಂಡಿದ್ದ ಕಂಕಣ ಸೂರ್ಯಗ್ರಹಣ 11.11ಕ್ಕೆ ಕೊನೆಗೊಂಡಿತ್ತು. ಹೀಗಾಗಿ ಬೆಳಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ರಣಜಿ ಟ್ರೋಫಿಯ ಪಂದ್ಯಗಳನ್ನು ಬೆಳಗ್ಗೆ 11.15ಕ್ಕೆ ಆರಂಭಿಸಲಾಗಿದೆ. ಅಂದರೆ ಗ್ರಹಣ ಮುಕ್ತಾಯಗೊಂಡ ಬಳಿಕ 2ನೇ ದಿನದಾಟವನ್ನು ಆರಂಭಿಸಲಾಗಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿನ ಕರ್ನಾಟಕ vs ಹಿಮಾಚಲ ಪ್ರದೇಶ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಕರ್ನಾಟಕ ತಂಡ, ನಾಯಕ ಕರುಣ್ ನಾಯರ್ 81 ರನ್ ನೆರವಿನೊಂದಿಗೆ 67.2 ಓವರ್ಗೆ 166 ರನ್ ಪೇರಿಸಿ ಇನ್ನಿಂಗ್ಸ್ ಮುಗಿಸಿದೆ.
ನಾಯರ್ ಬಿಟ್ಟರೆ ದೇಗಾ ನಿಶ್ಚಲ್ 16, ಶ್ರೇಯಸ್ ಗೋಪಾಲ್ 27, ಅಭಿಮನ್ಯು ಮಿಥುನ್ 21 ರನ್ಗಳಿಸಿದ್ದೇ ಹೆಚ್ಚು. ಕರ್ನಾಟಕ ಇನ್ನಿಂಗ್ಸ್ನಲ್ಲಿ ಹಿಮಾಚಲ್ನ ಕನ್ವರ್ ಅಭಿನಯ್ ಸಿಂಗ್ 5, ವೈಭವ್ ಅರೋರ 2, ರಿಷಿ ಧವನ್ 3 ವಿಕೆಟ್ ಪಡೆದು ಗಮನ ಸೆಳದರು. ಇನ್ನಿಂಗ್ಸ್ ಆರಂಭಿಸಿದ್ದ ಹಿಮಾಚಲ್, ಗುರುವಾರ ಲಂಜ್ ಬ್ರೇಕ್ ವೇಳೆಗೆ 26 ಓವರ್ಗೆ 4 ವಿಕೆಟ್ ನಷ್ಟದಲ್ಲಿ 46 ರನ್ ಮಾಡಿತ್ತು.