ಬೆಂಗಳೂರು, ಡಿಸೆಂಬರ್ 01: ಡಿಸೆಂಬರ್ 7ರಿಂದ 11ರವರೆಗೆ ನಾಗ್ಪುರದಲ್ಲಿ ನಡೆಯುವ ಮುಂಬೈ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.
ಆರ್.ವಿನಯ್ ಕುಮಾರ್ ನಾಯಕನಾಗಿ ಮುಂದುವರಿದಿದ್ದು, ಕರುಣ್ ನಾಯರ್ ಗೆ ಉಪ ನಾಯಕನ ಜವಾಬ್ದಾರಿ ನೀಡಲಾಗಿದೆ. ಲೀಗ್ ಹಂತದ ಪಂದ್ಯಗಳಿಂದ ದೂರ ಉಳಿದಿದ್ದ ಎಡಗೈ ವೇಗಿ ಎಸ್.ಅರವಿಂದ್ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಟೀಂ ಇಂಡಿಯಾದಲ್ಲಿ ಕೆ.ಎಲ್.ರಾಹುಲ್ ತಂಡದಲ್ಲಿ ಆಡುತ್ತಿರುವುದುರಿಂದ ಅವರನ್ನು ಪರಿಗಣಿಸಿಲ್ಲ. ಪವನ್ ದೇಶಪಾಂಡೆ ಮತ್ತು ಮೀರ್ ಕೌನೇನ್ ಅಬ್ಬಾಸ್ ತಂಡಕ್ಕೆ ಮರಳಿದ್ದಾರೆ. ಮಯಾಂಕ್ ಅಗರವಾಲ್ ಮತ್ತು ಆರ್.ಸಮರ್ಥ್ ಆರಂಭಿಕ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ಶಕ್ತಿ.
ಡಿ.ನಿಶ್ಚಲ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಶ್ರೇಯಸ್ ಮತ್ತು ಕೆ.ಗೌತಮ್ ಸ್ಪಿನ್ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ. ವಿನಯ್ ಮತ್ತು ಅಭಿಮನ್ಯು ಮಿಥುನ್ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಟ್ರಂಪ್ ಕಾರ್ಡ್.
ಕರ್ನಾಟಕ ತಂಡ ಈ ಬಾರಿಯ ರಣಜಿ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲಿ ಸೋಲದೆ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ. ಕರ್ನಾಟಕ ಆಡಿದ 6 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯಿಸಿ 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ತಂಡ ಇಂತಿದೆ: ಆರ್.ವಿನಯ್ ಕುಮಾರ್ (ನಾಯಕ), ಕರುಣ್ ನಾಯರ್ (ಉಪ ನಾಯಕ), ಮಯಾಂಕ್ ಅಗರವಾಲ್, ಆರ್.ಸಮರ್ಥ್, ಡಿ.ನಿಶ್ಚಲ್, ಸ್ಟುವರ್ಟ್ ಬಿನ್ನಿ, ಸಿ.ಎಂ.ಗೌತಮ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೆ.ಗೌತಮ್, ಅಭಿಮನ್ಯು ಮಿಥುನ್, ಎಸ್.ಅರವಿಂದ್, ಪವನ್ ದೇಶಪಾಂಡೆ, ಜೆ.ಸುಚಿತ್, ಮೀರ್ ಕೌನೈನ್ ಅಬ್ಬಾಸ್,ಶರತ್ ಶ್ರೀನಿವಾಸ್, ಮತ್ತು ರೋನಿತ್ ಮೋರೆ.