ಹುಬ್ಬಳ್ಳಿ, ಡಿಸೆಂಬರ್: 17: ರಣಜಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಟಾಸ್ ಜಯಿಸಿರುವ ಉತ್ತರ ಪ್ರದೇಶ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ 45 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 100 ರನ್ ಕಲೆಹಾಕಿ ಆಟ ಮುಂದುವರೆಸಿದೆ. ಎ ಜುಯಲ್ 51 ರನ್ ಗಳಿಸಿ ಹಾಫ್ ಸಂಚುರಿ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿರುವ ಮಯಂಕ್ ಅಗರವಾಲ್ ಬದಲು ಆರ್. ಸಮರ್ಥ್, ಗಾಯಗೊಂಡಿರುವ ಪವನ್ ದೇಶಪಾಂಡೆ ಬದಲು ಅಭಿಷೇಕ್ ರೆಡ್ಡಿ ಮತ್ತು ವೇಗಿ ವಿ. ಕೌಶಿಕ್ ಬದಲು ಅನುಭವಿ ವೇಗಿ ಅಭಿಮನ್ಯು ಮಿಥುನ್ ಅವರನ್ನು ಅಂತಿಮ ಹನ್ನೊಂದರ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ರಣಜಿ ಟ್ರೋಫಿ 2018-19 : ಕರ್ನಾಟಕದ ವೇಳಾಪಟ್ಟಿ
ಹುಬ್ಬಳ್ಳಿಯಿಂದ ಮೊದಲ ಬಾರಿಗೆ ರಣಜಿ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗುತ್ತಿರುವದು ಹುಬ್ಬಳ್ಳಿಯ ಕ್ರೀಡಾ ಪ್ರೇಮಿಗಳಿಗೆ ಹೆಮ್ಮೆಯ ವಿಷಯವಾಗಿದೆ.
ನಗರದ ರಾಜನಗರದ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾದ ನಾಲ್ಕು ದಿನಗಳ ಪಂದ್ಯದಲ್ಲಿ ಉತ್ತರ ಪ್ರದೇಶದ ತಂಡ ಬ್ಯಾಟಿಂಗ್ ಆಯ್ದುಕೊಂಡು ರಣರಂಗಕ್ಕೆ ಇಳಿದಿದ್ದು, ಹಸಿರಿನಿಂದ ಕಂಗೊಳಿಸುತ್ತಿರುವ ಅಂಗಳದಲ್ಲಿ ಗೆಲುವಿನ ಕೇಕೆ ಹಾಕಲು ಮುಂದಾಗಿದೆ.
ರಣಜಿ ಟೂರ್ನಿಯಲ್ಲಿ ಕರ್ನಾಟಕ ಇದುವರೆಗೂ 440 ಪಂದ್ಯಗಳನ್ನಾಡಿ 199ರಲ್ಲಿ ಗೆಲುವು ಸಾಧಿಸಿದೆ. 175 ಪಂದ್ಯಗಳು ಡ್ರಾ ಆಗಿದ್ದು, 66 ಪಂದ್ಯಗಳಲ್ಲಿ ಸೋತಿದೆ. ಇಲ್ಲಿ ಗೆದ್ದರೆ 200 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ದೇಶದ ಎರಡನೇ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮುಂಬೈ (241 ಪಂದ್ಯಗಳಲ್ಲಿ ಜಯ) ಮೊದಲ ಸ್ಥಾನದಲ್ಲಿದೆ.
ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕಕ್ಕೆ ಇದು ಎರಡನೇ ಪಂದ್ಯ. ದಿಂಡಿಗಲ್ ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ತಮಿಳುನಾಡು ತಂಡದ ಎದುರು 26 ರನ್ಗಳ ಗೆಲುವು ಸಾಧಿಸಿತ್ತು. ಸ್ಪಿನ್ನರ್ ಗೌತಮ್ ಕೃಷ್ಣಪ್ಪ ಒಟ್ಟು 14 ವಿಕೆಟ್ಗಳನ್ನು ಉರುಳಿಸಿ ಗೆಲುವಿಗೆ ಕಾರಣರಾಗಿದ್ದರು. ಅವರು ಗಾಯಗೊಂಡಿರುವ ಕಾರಣ ಇಲ್ಲಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿ ಎನಿಸಿದ್ದ ಸ್ಥಳೀಯ ಆಟಗಾರ ಪವನ್ ದೇಶಪಾಂಡೆ ಕೂಡ ಗಾಯಗೊಂಡಿದ್ದು ತಂಡದಲ್ಲಿ ಸ್ಥಾನ ಗಳಿಸಿಲ್ಲ.
ಬ್ಯಾಟ್ಸ್ ಮನ್ಗಳಾದ ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿ ಆಡುತ್ತಿರುವ ರಾಷ್ಟ್ರೀಯ ತಂಡದಲ್ಲಿದ್ದಾರೆ. ಆದ್ದರಿಂದ ಯುವ ಪ್ರತಿಭೆಗಳಾದ ದೇವದತ್ತ ಪಡಿಕ್ಕಲ್, ಡೇಗಾ ನಿಶ್ಚಲ್, ಅಭಿಷೇಕ ರೆಡ್ಡಿ, ಬಿ.ಆರ್. ಶರತ್, ಆರ್.ಸಮರ್ಥ್, ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರ ಮೇಲೆ ಹೆಚ್ಚು ಜವಾಬ್ದಾರಿಯಿದೆ.
ತಂಡವನ್ನು ಮುನ್ನಡೆಸುತ್ತಿದ್ದಾರೆ ಅನುಭವಿ ಆಟಗಾರ ಕರುಣ್ ನಾಯರ್ ... ಇಲ್ಲಿನ ಪಿಚ್ ಸ್ಪರ್ಧಾತ್ಮಕವಾಗಿ ವರ್ತಿಸುವುದು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಯಾರು ಅವಕಾಶ ಬಳಸಿಕೊಳ್ಳುತ್ತಾರೆ ಎನ್ನುವ ಕುತೂಹಲವೂ ಮೂಡಿದೆ.
ಮೊದಲ ಗೆಲುವಿನತ್ತ ಚಿತ್ತ: ಕನ್ನಡಿಗ ಸುನೀಲ್ ಜೋಶಿ ತರಬೇತುದಾರರಾಗಿರುವ ಉತ್ತರ ಪ್ರದೇಶ ತಂಡ ಈ ಸಲದ ರಣಜಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುವ ಲೆಕ್ಕಾಚಾರದಲ್ಲಿ ಮೀರಟ್ ನಲ್ಲಿ ನಡೆದಿದ್ದ ರೈಲ್ವೇಸ್ ಮತ್ತು ಉತ್ತರ ಪ್ರದೇಶ ತಂಡಗಳ ನಡುವಣ ಪಂದ್ಯ ಡ್ರಾ ಆಗಿತ್ತು. ರೈಲ್ವೇಸ್ ಇನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು. 19 ವರ್ಷದ ಒಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡದಲ್ಲಿದ್ದ ಶಿವಮ್ ಮಾವಿ ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ. ನಾಯಕ ಅಂಕಿತ್ ರಜಪೂತ್, ಯಶ್ ದಯಾಳ್, ಸೌರಭ್ ಕುಮಾರ್ ತಂಡದ ಪ್ರಮುಖ ಬೌಲರ್ಗಳು
ಹುಬ್ಬಳ್ಳಿಯಲ್ಲಿ ನಡೆದಿದ್ದ ಕರ್ನಾಟಕದ ಪಂದ್ಯಗಳ ಫಲಿತಾಂಶ
ವರ್ಷ-ಎದುರಾಳಿ-ಫಲಿತಾಂಶ
1971-72:ಕೇರಳ;ಗೆಲುವು
1976-77;ಆಂಧ್ರ;ಡ್ರಾ
1992-93;ಹೈದರಾಬಾದ್;ಫಲಿತಾಂಶವಿಲ್ಲ
2012-13;ಹರಿಯಾಣ;ಡ್ರಾ
2013-14;ಪಂಜಾಬ್;ಗೆಲುವು
2014-15;ಜಮ್ಮು ಮತ್ತು ಕಾಶ್ಮೀರ;ಗೆಲುವು
2015-16;ದೆಹಲಿ; ಡ್ರಾ